ಸಿದ್ದರಾಮಯ್ಯ ಬೇಟಿಯಾದ ಸಿಎಂ ಡಿಕೆ ಶಿವಕುಮಾರ್ 
ರಾಜಕೀಯ

ಡಿಕೆಶಿಗೆ ಟಕ್ಕರ್ ಕೊಡಲು ಹೊಸ ತಂತ್ರ: AHINDA ಮುರಿದು ‘HINDA’ ಕಟ್ಟಲು ಸಿದ್ದು ಮಾಸ್ಟರ್ ಪ್ಲ್ಯಾನ್, ಮಗನ ಭವಿಷ್ಯಕ್ಕಾಗಿ ಹಳೆಯ ಮಿತ್ರರಿಗೆ ಗೇಟ್‌ಪಾಸ್?

ಅಲ್ಪಸಂಖ್ಯಾತರನ್ನು ಕೈಬಿಟ್ಟು, ಕೇವಲ ಹಿಂದುಳಿದ ವರ್ಗ ಹಾಗೂ ದಲಿತರನ್ನು ಒಳಗೊಂಡ ‘ಹಿಂದಾ’ (HINDA) ಒಕ್ಕೂಟವನ್ನು ಪುನರುಜ್ಜೀವನಗೊಳಿಸಲು ಹೊಸ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಮಹತ್ವದ ರಾಜಕೀಯ ಧ್ರುವೀಕರಣಕ್ಕೆ ವೇದಿಕೆ ಸಿದ್ಧವಾಗಿದೆ. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬೆನ್ನಲ್ಲೇ ಸಿದ್ದರಾಮಯ್ಯ ಅವರು ತಮ್ಮ ಹಳೆಯ ರಾಜಕೀಯ ಅಸ್ತ್ರವಾಗಿದ್ದ ‘ಅಹಿಂದ’ (AHINDA) ಮೈತ್ರಿಗೆ ಇತಿಶ್ರೀ ಹಾಡಲು ಮುಂದಾಗಿದ್ದಾರೆ.

ಅಲ್ಪಸಂಖ್ಯಾತರನ್ನು ಕೈಬಿಟ್ಟು, ಕೇವಲ ಹಿಂದುಳಿದ ವರ್ಗ ಹಾಗೂ ದಲಿತರನ್ನು ಒಳಗೊಂಡ ‘ಹಿಂದಾ’ (HINDA) ಒಕ್ಕೂಟವನ್ನು ಪುನರುಜ್ಜೀವನಗೊಳಿಸಲು ಹೊಸ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.

ಇದರ ಮೊದಲ ಭಾಗವಾಗಿ, ಇಂದು (ಸೆಪ್ಟೆಂಬರ್ 6, ಭಾನುವಾರ) ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ‘ಹಿಂದುಳಿದ ವರ್ಗಗಳ ಮಹಾ ಒಕ್ಕೂಟದ ಸಮಾವೇಶ’ ಆಯೋಜಿಸಲಾಗಿದ್ದು, ಈ ಮೂಲಕ ಸಿದ್ದರಾಮಯ್ಯ ತಮ್ಮ ಮುಂದಿನ ರಾಜಕೀಯ ಪಯಣಕ್ಕೆ ಹೊಸ ಮುನ್ನುಡಿ ಬರೆಯುತ್ತಿದ್ದಾರೆ.

2028ರ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಕಾಂಗ್ರೆಸ್‌ನಲ್ಲಿ ಹಿಂದುಳಿದ ವರ್ಗಗಳು ಹಾಗೂ ದಲಿತರ ಬೆಂಬಲವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಕಾಂಗ್ರೆಸ್‌ನ ‘ಹಿಂದಾ’ (ಹಿಂದುಳಿದ ವರ್ಗಗಳು ಮತ್ತು ದಲಿತರು) ರಾಜಕೀಯವನ್ನು ಮತ್ತೆ ಮುನ್ನೆಲೆಗೆ ತರಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ.

ಭಾನುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಹಿಂದುಳಿದ ವರ್ಗಗಳ ಒಕ್ಕೂಟದ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಗುತ್ತಿದ್ದು, ಈ ಕಾರ್ಯಕ್ರಮದಲ್ಲಿ ರೂಪುಗೊಳ್ಳುತ್ತಿರುವ ಹೊಸ ಸಾಮಾಜಿಕ ಮೈತ್ರಿಕೂಟದ ಚಿತ್ರಣ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಸಮಾವೇಶದಲ್ಲಿ ಡಾ. ಜಿ. ಪರಮೇಶ್ವರ್ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.

2028ರ ಚುನಾವಣೆಯಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ, ಈ ಸಮಾವೇಶವು ಅವರಿಗೂ ಸೂಕ್ಷ್ಮ ರಾಜಕೀಯ ಸಂದೇಶ ರವಾನಿಸುವ ವೇದಿಕೆಯಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಸಿದ್ದರಾಮಯ್ಯ ಅವರು ಈ ಹಿಂದೆ ‘ಅಹಿಂದಾ’ (ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರು) ರಾಜಕೀಯದ ಮೂಲಕ ತಮ್ಮದೇ ಆದ ಸಾಮಾಜಿಕ ಬೆಂಬಲ ನೆಲೆಯನ್ನು ನಿರ್ಮಿಸಿಕೊಂಡಿದ್ದರು. ಇದೇ ರಾಜಕೀಯ ಸೂತ್ರ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಲು ಪ್ರಮುಖ ಪಾತ್ರ ವಹಿಸಿತ್ತು.ಸಿದ್

ಆದರೆ, ಬದಲಾಗಿರುವ ರಾಜಕೀಯ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರ ಹಿಂದಿನ ಕೆಲವು ಆಪ್ತರು ಅವರಿಂದ ಅಂತರ ಕಾಯ್ದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಹೊಸ ನಾಯಕರ ತಂಡದೊಂದಿಗೆ ‘ಹಿಂದಾ’ ಮೈತ್ರಿಕೂಟವನ್ನು ಪುನರ್‌ ನಿರ್ಮಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಸಚಿವ ಸತೀಶ್ ಜಾರಕಿಹೊಳಿ ಹಾಗೂ ವಸತಿ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಸೇರಿದಂತೆ ಸಿದ್ದರಾಮಯ್ಯ ಅವರ ಹಿಂದಿನ ಅಹಿಂದಾ ರಾಜಕೀಯದ ಪ್ರಮುಖ ಮುಖಗಳು ಇದೀಗ ಅವರಿಂದ ದೂರವಾಗುತ್ತಿರುವಂತೆ ಕಾಣಿಸುತ್ತಿರುವುದು ಈ ಬೆಳವಣಿಗೆಗೆ ಮತ್ತಷ್ಟು ಮಹತ್ವ ನೀಡಿದೆ.

ಯತೀಂದ್ರಗೆ ಭವಿಷ್ಯದ ನಾಯಕನ ಪಟ್ಟ?

ಇದೇ ವೇಳೆ ಸಿದ್ದರಾಮಯ್ಯ ಅವರ ಪುತ್ರ ಹಾಗೂ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರನ್ನು ಅವರ ರಾಜಕೀಯ ಮತ್ತು ಸೈದ್ಧಾಂತಿಕ ಉತ್ತರಾಧಿಕಾರಿಯಾಗಿ ಬಿಂಬಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಕುರುಬ ಸಮುದಾಯದ ಕೆಲವರು ಯತೀಂದ್ರ ಅವರನ್ನು ಭವಿಷ್ಯದ ನಾಯಕನಾಗಿ ರೂಪಿಸಬೇಕು ಎಂಬ ಒಲವು ಹೊಂದಿದ್ದಾರೆ ಎನ್ನಲಾಗಿದ್ದು, ಭಾನುವಾರದ ಸಮಾವೇಶದಲ್ಲಿ ಅವರ ಪಾತ್ರವೂ ಗಮನ ಸೆಳೆಯುವ ಸಾಧ್ಯತೆಯಿದೆ.

ಇತ್ತೀಚೆಗೆ ಸಿದ್ದರಾಮಯ್ಯ ಅವರ ವರುಣಾ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಡಾ. ಜಿ. ಪರಮೇಶ್ವರ್, ದಲಿತರು ಯತೀಂದ್ರ ಅವರನ್ನು ಭವಿಷ್ಯದ ನಾಯಕನಾಗಿ ಬೆಳೆಸಬೇಕು ಎಂದು ಸಲಹೆ ನೀಡಿದ್ದರು ಎನ್ನಲಾಗಿದೆ.

ಈ ಬೆಳವಣಿಗೆಯನ್ನು ಸಿದ್ದರಾಮಯ್ಯ ಅವರಿಗೆ ಡಾ. ಪರಮೇಶ್ವರ್ ನೀಡುತ್ತಿರುವ ಪರಸ್ಪರ ರಾಜಕೀಯ ಬೆಂಬಲದ ಸಂಕೇತವೆಂದೇ ನೋಡಲಾಗುತ್ತಿದೆ.

ಮುಖ್ಯಮಂತ್ರಿ ಸ್ಥಾನಕ್ಕೆ ಡಾ. ಪರಮೇಶ್ವರ್ ಅವರನ್ನು ಬೆಂಬಲಿಸಿದ್ದ ಸಿದ್ದರಾಮಯ್ಯ, ಬಳಿಕ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದೆ.

ಸರ್ಕಾರದಲ್ಲಿ ಒಂದೇ ಒಂದು ಉಪಮುಖ್ಯಮಂತ್ರಿ ಹುದ್ದೆ ಇರಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ತಾವು ಒತ್ತಾಯಿಸಿದ್ದಾಗಿ ಸಿದ್ದರಾಮಯ್ಯ ಇತ್ತೀಚೆಗೆ ಹೇಳಿದ್ದರು.

ಆ ಹುದ್ದೆ ಡಾ. ಪರಮೇಶ್ವರ್ ಅವರಿಗೆ ದೊರೆಯುವಂತೆ ತಾವು ಲಾಬಿ ಮಾಡಿದ್ದಾಗಿ ಅವರು ತಿಳಿಸಿದ್ದರು. ಇದಕ್ಕೆ ಡಾ. ಪರಮೇಶ್ವರ್ ಕೂಡ ಸಿದ್ದರಾಮಯ್ಯ ಅವರ ಪಾತ್ರವನ್ನು ತಕ್ಷಣವೇ ಒಪ್ಪಿಕೊಂಡಿದ್ದರು.

2028ರ ಸಿಎಂ ರೇಸ್‌ಗೆ ಪರಮೇಶ್ವರ್?

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಬಣದ ಪ್ರಮುಖ ದಲಿತ ಮುಖವಾಗಿ ಡಾ. ಜಿ. ಪರಮೇಶ್ವರ್ ಅವರನ್ನು ಮತ್ತಷ್ಟು ಬಿಂಬಿಸುವ ಸಾಧ್ಯತೆಯಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.

ಅಷ್ಟೇ ಅಲ್ಲದೆ, 2028ರ ವಿಧಾನಸಭಾ ಚುನಾವಣೆಯ ಬಳಿಕ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳ ಪೈಕಿ ಡಾ. ಪರಮೇಶ್ವರ್ ಕೂಡ ಪ್ರಮುಖ ಸ್ಪರ್ಧಿಯಾಗಬಹುದು ಎಂಬ ಚರ್ಚೆಯೂ ಆರಂಭವಾಗಿದೆ.

ಏತನ್ಮಧ್ಯೆ ಭಾನುವಾರದ ಸಮಾವೇಶದ ಅತಿಥಿಗಳ ಪಟ್ಟಿಯೂ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಸಿದ್ದರಾಮಯ್ಯ ಅವರ ಹಿಂದಿನ ಅಹಿಂದಾ ರಾಜಕೀಯದ ಪ್ರಮುಖ ನಾಯಕರಾಗಿದ್ದ ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್ ಖಾನ್ ಹಾಗೂ ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರಿಗೆ ಆಹ್ವಾನ ನೀಡಲಾಗಿಲ್ಲ.

ಇದಕ್ಕೆ ವಿರುದ್ಧವಾಗಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಸಚಿವರಾದ ಸಂತೋಷ್ ಲಾಡ್, ಪುಟ್ಟರಂಗ ಶೆಟ್ಟಿ, ಮಧು ಬಂಗಾರಪ್ಪ, ಬೈರತಿ ಸುರೇಶ್, ಅಜಯ್ ಸಿಂಗ್ ಹಾಗೂ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರಿಗೆ ಆಹ್ವಾನ ನೀಡಲಾಗಿದೆ.

ಆದರೆ, ಅತಿಥಿಗಳ ಪಟ್ಟಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ಸ್ಪಷ್ಟಪಡಿಸಿದ್ದಾರೆ.

ಒಕ್ಕೂಟದ ಬೆಳ್ಳಿ ಹಬ್ಬದ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಹಿಂದುಳಿದ ವರ್ಗಗಳ ನಾಯಕರನ್ನು ಮಾತ್ರ ಆಹ್ವಾನಿಸಲಾಗಿದೆ. ಸರ್ಕಾರದ ಪ್ರತಿನಿಧಿಯಾಗಿ ಡಾ. ಪರಮೇಶ್ವರ್ ಅವರನ್ನು ಆಹ್ವಾನಿಸಲಾಗಿದ್ದು, ಹಿಂದುಳಿದ ವರ್ಗಗಳ ಸಮೀಕ್ಷಾ ವರದಿ ಜಾರಿಗೆ ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗುವುದು ಎಂದು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂಧನ್ ಆರ್. ನಾಯಕ್ ಹಾಗೂ ಆಯೋಗದ ಮಾಜಿ ಅಧ್ಯಕ್ಷರಾದ ಪ್ರೊ. ರವಿವರ್ಮ ಕುಮಾರ್, ಎಚ್. ಕಾಂತರಾಜು ಮತ್ತು ಜಯಪ್ರಕಾಶ್ ಹೆಗ್ಡೆ ಅವರಿಗೂ ಸಮಾವೇಶಕ್ಕೆ ಆಹ್ವಾನ ನೀಡಲಾಗಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Hormuz ಜಲಸಂಧಿಯಲ್ಲಿ ಮಹಾ ಸಂಘರ್ಷ: Iran 3 ತೈಲ ಟ್ಯಾಂಕರ್‌ಗಳ ಮೇಲೆ ಅಮೆರಿಕಾ ದಾಳಿ; 'ಕಠಿಣ ಪ್ರತೀಕಾರ'ದ ಶಪಥ ಮಾಡಿದ ಟೆಹ್ರಾನ್!

100 ದಿನಗಳ ಹೊಸ್ತಿಲಲ್ಲಿ ಡಿಕೆಶಿ ಸರ್ಕಾರ: ಸಾಧನೆಗಳ ಪಟ್ಟಿ ಹಿಡಿದು ಕಾಂಗ್ರೆಸ್ ಅಖಾಡಕ್ಕೆ, ‘ಯು-ಟರ್ನ್’ ಅಸ್ತ್ರದೊಂದಿಗೆ ವಿಪಕ್ಷಗಳ ಕೌಂಟರ್‌..!

ಏಷ್ಯಾಕಪ್ 2026: ಪಾಕ್‌ ಆಟಗಾರ್ತಿ ವಿಕೆಟ್‌ ಪಡೆದು 'ಗೇಟ್‌ ಔಟ್‌' ಎಂದ ಶಫಾಲಿ ವರ್ಮಾ! 3 ವಿಶ್ವ ದಾಖಲೆ ಉಡೀಸ್ -Video

ಕೆಲವರಿಗೆ ಜೀರ್ಣಿಸಿಕೊಳ್ಳಲು ಕಷ್ಟವಾಗಿದೆ: 7.8ರಷ್ಟು GDP ಬೆಳವಣಿಗೆಯ ಟೀಕಾಕಾರರನ್ನು ಖಂಡಿಸಿದ ಪ್ರಧಾನಿ ಮೋದಿ!

ಜಾರ್ಖಂಡ್: ಸಚಿವ ಸುದಿವ್ಯ ಸೋನು ಹೃದಯಾಘಾತದಿಂದ ನಿಧನ!