ಶ್ರವಣಬೆಳಗೊಳ: ೮೧ನೆ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇನ್ನು ಕೆಲವೇ ಘಂಟೆಗಳು ಬಾಕಿ ಉಳಿದಿವೆ. ಸಿದ್ಧತೆಗಳು ಭರದಿಂದ ಸಾಗಿದ್ದು, ನಾಳೆ(ಶನಿವಾರ) ಸಂಜೆ ಸಮ್ಮೇಳನಾಧ್ಯಕ್ಷ ದಲಿತ ಕವಿ ಸಿದ್ಧಲಿಂಗಯ್ಯನವರ ಮೆರವಣಿಗೆ ಮೂಲಕ ಸಮ್ಮೇಳನಕ್ಕೆ ಚಾಲನೆ ಸಿಗಲಿದೆ.
ನೊಂದಣಿ ಮಾಡಿಕೊಂಡವರಿಗೆಲ್ಲಾ ವಸತಿ ವ್ಯವಸ್ಥೆ, ಸಮ್ಮೇಳನದಲ್ಲಿ ಪಾಲ್ಗೊಳ್ಳುವವರಿಗೆಲ್ಲ ಊಟದ ವ್ಯವಸ್ಥೆ, ಪುಸ್ತಕ ಮಾರಾಟಗಾರರಿಗೆ ಮಳಿಗೆಗಳ ವ್ಯವಸ್ಥೆ ಕಾರ್ಯಗಳು ಭರದಿಂದ ಸಾಗಿವೆ.
ಸಮ್ಮೇಳನಾಧ್ಯಕ್ಷರ ಮೆರವಣಿಗೆ ಎತ್ತಿನ ಗಾಡಿಯಲ್ಲಿ ನಡೆಯಲಿದ್ದು ಇದರ ಜೊತೆ ೧೩ ಸ್ತಭ್ಧ ಚಿತ್ರಗಳೂ ಸಾಗಲಿವೆ. ಕರ್ನಾಟಕದ ಸಂಸ್ಕೃತಿಯನ್ನು ಸಾರುವ ಈ ಸ್ತಬ್ಧಚಿತ್ರಗಳು ನೋಡುಗರ ಕಣ್ಮನ ಸೆಳೆಯಲಿವೆ ಎನ್ನಲಾಗಿದೆ.
ಸಮ್ಮೇಳನದ ಇತಿಹಾಸದಲ್ಲೇ ಅತಿ ದೊಡ್ಡ 'ಮುಖ್ಯ ವೇದಿಕೆ' ಸಿದ್ಧವಾಗುತ್ತಿದ್ದು, ಸಾಹಿತ್ಯ ಮತ್ತು ಸಂಗೀತ ಗೋಷ್ಠಿಗಳಿಗೆ ವೇದಿಕೆಯಾಗಲಿದೆ. ಸಮ್ಮೇಳನಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಜನ ಆಗಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ.