ಪದ್ಯ ಪರಿಷೆ

ಕವನ: ಗೊರೂರು ಪಂಕಜ: ಕವನದ ಶೀರ್ಷಿಕೆ: ಗುರಿಗಳೆಲ್ಲ ಕಣ್ಣ ಮುಂದೆ

Nagaraja AB

ಜಡಹಿಡಿದ ಮಗ್ಗುಲಿಂದ ಹೊರಳಿ...
ಸುಗಂಧ ಪುಷ್ಪವಾಗಿ ಅರಳಿ...
ಅಜ್ಜ ಮುತ್ತಜ್ಜ ಅವರಜ್ಜ ಅವರಜ್ಜನಜ್ಜ
ಎಲ್ಲರೂ ಅರಳಿದ್ದು
ಸುಗಂಧ ಬೀರಿದ್ದು
ಹಾದಿ ಸವೆಸಿದ್ದು ಮುಗಿಲ ಮುಟ್ಟಿಸಿದ್ದು ಎಲ್ಲವೂ ಮಗ್ಗುಲಾಗುವ ಕ್ರಿಯೆಯಿಂದ

ಯಾರಿಗೆ ತಾನೆ ಬೇಕು? 
ಜಡ ಹಿಡಿದ ಮಗ್ಗಲು
ಅನುಭವಿಸಿದ್ದು ಆತಂಕ ಪಟ್ಟಿದ್ದು
ನಮ್ಮೆಲ್ಲ ಅಂಗಾಂಗಗಳ
ಭಾರವನ್ನು ಒಂದೆಡೆಗೆ ತಳ್ಳಿದ್ದು
ಪ್ರಪಾತಕ್ಕೆ ಬಿದ್ದದ್ದು
ಅದೇ ಮಗ್ಗುಲಲ್ಲವೇ
.............

ಅನುಭವಗಳನ್ನೆಲ್ಲ ಒರೆಹಚ್ಚಿ
ಮನಕ್ಕೊಂದು ದೀಪ ಹಚ್ಚಿ
ಅಬ್ಬರದ ಗಾಳಿ ಹಾರಿ ಬರದಂತೆ 
ಕಣ್ಣ ಕಾವಲಿಸಿ
ಎಲ್ಲರಿಗೂ ಬಿಚ್ಚಲಾಗುವುದಿಲ್ಲ
ಕಡಲಾಳದ ಕನಸುಗಳನ್ನೆಲ್ಲ
ಮೆಚ್ಚಿಕೊಳ್ಳಲಾರೆ ಮತ್ಯಾರದೊ
ಕಣ್ಣಿಲ್ಲದ ಕನವರಿಕೆಗಳ
ಆದರೂ  ಒಮ್ಮೊಮ್ಮೆ ಹೊಂಕರಿಸಬೇಕು!
ಮತ್ತೊಮ್ಮೆ ಎಲ್ಲವನ್ನು ಧಿಕ್ಕರಿಸಬೇಕು!

ಹೂಂಕಾರ-ಧಿಕ್ಕಾರಗಳ ನಡುವೆ
ಅದ್ಭುತ ಲೋಕವೊಂದು
ನಮ್ಮೆಲ್ಲರನು ಸ್ವಾಗತಿಸಲು ಅಣಿಯಾಗಿದೆ
ಮಗ್ಗುಲಾಗಿ.......
ಮಗ್ಗುಲಾಗಿ .......
ಮಗ್ಗುಲಾಗಿ ಸಾಗಿ 
ಮೊಗ್ಗುಗಳೆ....!

 ಸಾಹಿತ್ಯ, ಸಮಾಜ ಸೇವೆ, ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಗೊರೂರು ಪಂಕಜ ಅವರು, ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ, ಬಿಎಂಶ್ರೀ ಕಾವ್ಯ ಪುರಸ್ಕಾರ, ರಾಜೀವ್ ಗಾಂಧಿ ರಾಷ್ಟ್ರೀಯ ಪ್ರಶಸ್ತಿ,. ಇಂದಿರಾ ಪ್ರಿಯದರ್ಶಿನಿ, ಕರ್ನಾಟಕ ವಿಭೂಷಣ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. 

SCROLL FOR NEXT