ವಿಜ್ಞಾನ-ತಂತ್ರಜ್ಞಾನ

ನಾಳೆ ಕಂಕಣ ಸೂರ್ಯಗ್ರಹಣ: ಅಪರೂಪದ ವಿದ್ಯಮಾನ ವೀಕ್ಷಣೆಗೆ ಕಾಯುತ್ತಿರುವ ಜನತೆ 

Sumana Upadhyaya

ಬೆಂಗಳೂರು: ಈ ವರ್ಷಾಂತ್ಯಕ್ಕೆ ಅಪರೂಪದ ಕಂಕಣ ಸೂರ್ಯ ಗ್ರಹಣಕ್ಕೆ ಖಗೋಳ ವಿಜ್ಞಾನ ಸಾಕ್ಷಿಯಾಗಲಿದೆ. ನಾಳೆ ಬೆಳಗ್ಗೆ 8 ಗಂಟೆ 4 ನಿಮಿಷಕ್ಕೆ ಗ್ರಹಣ ಸ್ಪರ್ಶಿಸಿ ಬೆಳಗ್ಗೆ 11.04ರ ಹೊತ್ತಿಗೆ ಮೋಕ್ಷ ಸಮಯವಾಗಿರುತ್ತದೆ. ಬೆಳಗ್ಗೆ 9.30ರ ಹೊತ್ತಿಗೆ ಗ್ರಹಣ ಪೂರ್ಣ ಪ್ರಮಾಣದಲ್ಲಿ ಗೋಚರಿಸಲಿದೆ. ಈ ಸಮಯದಲ್ಲಿ ರಾಜ್ಯದ ದೇವಾಲಯಗಳಲ್ಲಿ ಎಂದಿನಂತೆ ಪೂಜೆ-ಪುನಸ್ಕಾರಗಳು ನಡೆಯುವುದಿಲ್ಲ. ಬೆಳಗ್ಗೆಯೇ ದೇವಸ್ಥಾನ ಬಾಗಿಲು ಹಾಕಲಾಗುತ್ತದೆ. 


ಮಂಗಳೂರು, ಉಡುಪಿ ಮತ್ತು ಕೊಡಗುಗಳಲ್ಲಿ ಸೂರ್ಯ ಗ್ರಹಣ ಸ್ಪಷ್ಟವಾಗಿ ಗೋಚರಿಸಲಿದೆ. ಉಳಿದ ಕಡೆಗಳಲ್ಲಿ ಭಾಗಶಃ ಎಂದು ವಿಜ್ಞಾನಿಗಳು ಹೇಳುತ್ತಾರೆ. ಖಗೋಳ ವಿಜ್ಞಾನಿಗಳು, ವಿದ್ಯಾರ್ಥಿಗಳು ಜ್ಯೋತಿಷಿಗಳು, ಪುರೋಹಿತರು ನಾಳೆ ಆಕಾಶದಲ್ಲಿ ನಡೆಯುವ ವಿಶೇಷ ವಿದ್ಯಾಮಾನವನ್ನು ನೋಡಲು ಮತ್ತು ಅದರ ಬಗ್ಗೆ ಅಧ್ಯಯನ ನಡೆಸಲು ವಿಶೇಷ ಆಸಕ್ತಿ ಹೊಂದಿದ್ದಾರೆ. ಎಂದಿನಂತೆ ಗ್ರಹಣವನ್ನು ಬರಿಗಣ್ಣಿನಿಂದ ನೋಡಬಾರದು ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.


ಮಸೂರ, ದೂರದರ್ಶಕ,ಸೌರಕನ್ನಡ, ಪಂಚಾಂಗಗಳನ್ನು ಕೈಯಲ್ಲಿಟ್ಟುಕೊಂಡು ಜನರು ಸೌರಗ್ರಹಣದಿಂದ ಮುಂದೆ ಏನೇನಾಗಬಹುದು ಎಂಬ ವಿಶ್ಲೇಷಣೆಯಲ್ಲಿ ತೊಡಗಿದ್ದಾರೆ. ಹಲವು ದೇವಾಲಯಗಳಲ್ಲಿ ಗ್ರಹಣ ದೋಷ ನಿವಾರಣೆ ಹೋಮ, ಪೂಜೆಗೆ ಸಿದ್ದತೆ ನಡೆಯುತ್ತಿದೆ. ಮನೆಗಳಲ್ಲಿ ಹೆಂಗಸರು ಸಹ ಗ್ರಹಣ ಪೂರ್ವದ ತಯಾರಿ ಮಾಡಿಕೊಳ್ಳುತ್ತಿದ್ದಾರೆ. 


ಇದು ಕೇವಲ ಭಾರತ ಮಾತ್ರವಲ್ಲದೆ, ಸೌದಿ ಅರೇಬಿಯಾ, ಒಮಾನ್, ಶ್ರೀಲಂಕಾ,ಇಂಡೋನೇಷ್ಯಾ, ಸಿಂಗಾಪುರ ಮೊದಲಾದ ದೇಶಗಳಲ್ಲಿ ಗೋಚರಿಸಲಿದೆ. ಹತ್ತು ವರ್ಷಗಳ ಹಿಂದೆ ಜನವರಿ 15, 2010ರಲ್ಲಿ ಸಹ ಕಂಕಣ ಸೂರ್ಯಗ್ರಹಣ ಸಂಭವಿಸಿ 11 ನಿಮಿಷ 8 ಸೆಕೆಂಡುಗಳ ಕಾಲವಿತ್ತು. 


ಕಂಕಣ ಸೂರ್ಯಗ್ರಹಣ ಎಂದರೇನು? : ಸೂರ್ಯನಿಗೆ ಎದುರಾಗಿ ಚಂದ್ರ ಮತ್ತು ಭೂಮಿ ಒಂದೇ ನೇರದಲ್ಲಿ ಬಂದಾಗ ಚಂದ್ರನ ನೆರಳು ಭೂಮಿಯ ಮೇಲೆ ಬೀಳುತ್ತದೆ. ಆಗ ಸೂರ್ಯಗ್ರಹಣ ಉಂಟಾಗುತ್ತದೆ. ಗ್ರಹಣವನ್ನು ಭೂಮಿಯಿಂದ ನೋಡುವಾಗ ಅದು ಎಷ್ಟು ಭಾಗ ಚಂದ್ರನನ್ನು ಮರೆ ಮಾಡುತ್ತದೆ ಎಂಬುದನ್ನಾಧರಿಸಿ ಗ್ರಹಣ ಖಗ್ರಾಸವೊ, ಪಾರ್ಶ್ವವೊ ಅಥವಾ ಕಂಕಣವೊ ಎಂದು ಹೇಳಲಾಗುತ್ತದೆ. ಪ್ರಸಕ್ತ ಗ್ರಹಣದ ವಿದ್ಯಮಾನದಲ್ಲಿ ವೃತ್ತದೊಳಗಿನ ವೃತ್ತದಂತೆ ಗೋಚರಿಸುತ್ತದೆ.ಸೂರ್ಯನ ಪರಿಧಿಯ ಭಾಗ ಬೆಂಕಿಯ ಬಳೆಯಂತೆ ಕಾಣಿಸುತ್ತದೆ. ಹೀಗಾಗಿ ಇದನ್ನು ಖಗೋಳ ವಿಜ್ಞಾನ ಭಾಷೆಯಲ್ಲಿ ಕಂಕಣ ಸೂರ್ಯಗ್ರಹಣ ಎಂದು ಕರೆಯುತ್ತಾರೆ. 


ಗ್ರಹಣ ಸಮಯದಲ್ಲಿ ಪ್ರಾಕೃತಿಕವಾಗಿ ಹಲವು ಬದಲಾವಣೆಗಳಾಗುತ್ತವೆ. ಇದಕ್ಕಾಗಿ ಈ ಸಮಯದಲ್ಲಿ ಆಹಾರ ಸೇವಿಸಬಾರದು ಎಂದು ಹೇಳುತ್ತಾರೆ. ಬರಿಗಣ್ಣಿನಿಂದ ಗ್ರಹಣವನ್ನು ನೋಡುವಂತಿಲ್ಲ. ಈ ವಿದ್ಯಮಾನವನ್ನು ವೀಕ್ಷಿಸಲು ರಾಜ್ಯದ ಹಲವು ವಿಜ್ಞಾನ ಕೇಂದ್ರಗಳಲ್ಲಿ, ತಾರಾಲಯದಲ್ಲಿ ಮಕ್ಕಳಿಗೆ, ಸಾರ್ವಜನಿಕರಿಗೆ ವಿಶೇಷ ವೀಕ್ಷಣ ವ್ಯವಸ್ಥೆಯನ್ನು ಮಾಡಲಾಗಿದೆ.

SCROLL FOR NEXT