ಪ್ರಕೃತಿ ವಿಕೋಪಗಳಿಗೆ ಸಿಲುಕುವ ಸಂತ್ರಸ್ತರ ರಕ್ಷಣೆಗಾಗಿ ಐಐಟಿ-ಮದ್ರಾಸ್ ವಿದ್ಯಾರ್ಥಿಗಳು ಅತ್ಯಾಧುನಿಕ ಡ್ರೋಣ್ ನ್ನು ತಯಾರಿಸಿದ್ದಾರೆ.
‘Eye In The Sky’ ಈ ಡ್ರೋಣ್ ತಯಾರಿಕೆ ಯೋಜನೆಯ ಹೆಸರು. ಕೃತಕ ಬುದ್ಧಿಮತ್ತೆ ಹಾಗೂ ಕಂಪ್ಯೂಟರ್ ವಿಷನ್ ನ್ನು ಅಳವಡಿಸಲಾಗಿದ್ದು, ವಿಪತ್ತು ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವವರನ್ನು ಎತ್ತರದ ಪ್ರದೇಶಗಳಿಂದ ಗುರುತಿಸುವ ಹಾಗೂ ಅವಶೇಷಗಳಡಿಯಲ್ಲಿ ಸಿಲುಕಿರುವವರನ್ನೂ ಸಹ ಪತ್ತೆ ಮಾಡುವ ಸಾಮರ್ಥ್ಯ ಹೊಂದಿದೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಟಾಸ್ಕ್ ಫೋರ್ಸ್ ಗೆ ವಿಪತ್ತು ಪೀಡೀತ ಪ್ರದೇಶಗಳಲ್ಲಿ ಸಿಲುಕಿರುವವರು ಪ್ರಜ್ಞಾ ಅವಸ್ಥೆಯಲ್ಲಿದ್ದಾರೋ ಇಲ್ಲವೋ ಎಂಬುದರ ಮಾಹಿತಿಯನ್ನೂ ಡ್ರೋಣ್ ನೀಡಲಿದೆ.
ಇವಿಷ್ಟೇ ಅಲ್ಲದೇ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಣಾಮಕಾರಿ ವೈಮಾನಿಕ ಸಮೀಕ್ಷೆ, ಆಹಾರ, ನೀರು ಪೂರೈಕೆ, ವೈದ್ಯಕೀಯ ಸೇವೆಗಳನ್ನು ತಲುಪಿಸುವುದಕ್ಕೂ ಸಹ ಐಐಟಿ-ಮದ್ರಾಸ್ ವಿದ್ಯಾರ್ಥಿಗಳು ತಯಾರಿಸಿರುವ ಡ್ರೋಣ್ ಗಳು ಸಹಕಾರಿಯಾಗಲಿವೆ.
ಇತ್ತೀಚೆಗಷ್ಟೆ ಐಐಟಿ ಬಾಂಬೆಯಲ್ಲಿ ನಡೆದ ಐಐಜಿಪಿ 2.0 ಯೂನಿವರ್ಸಿಟಿ ಚಾಲೆಂಜ್ ನಲ್ಲಿ The Eye In The Sky ಯೋಜನೆ ಫೈನಲ್ಸ್ ನಲ್ಲಿ ಆಯ್ಕೆಯಾಗಿತ್ತು. ರಾಷ್ಟ್ರಾದ ವಿವಿಧ ಭಾಗಗಳಿಂದ ಬಂದಿದ್ದ ಟಾಪ್ 18 ನವೀನ ಉದ್ಯಮಗಳ ಯೋಜನೆಗಳ ಪೈಕಿ ಇದೂ ಕೂಡ ಒಂದಾಗಿದ್ದು, ಮೈಕ್ರೋಸಾಫ್ಟ್ ಎಐ ಫಾರ್ ಅರ್ತ್ ನಿಂದ 10 ಲಕ್ಷ ರೂಪಾಯಿ ಧನಸಹಾಯ ಈ ಯೋಜನೆಗೆ ಲಭ್ಯವಾಗಿದೆ.