ಹಾಸನ: ಅವರಿಬ್ಬರಿಗೆ ತಾವು ಒಡಹುಟ್ಟಿದವರೆನ್ನುವುದು ಮರೆತೇ ಹೋಗಿತ್ತು. ಹೆತ್ತವರನ್ನು ಕಳೆದುಕೊಂಡಿದ್ದ ಅಣ್ಣ ತಂಗಿ ದಶಕಗಳ ನಂತರ ಸಿನಿಮೀಯ ರೀತಿಯಲ್ಲಿೊಂದಾದ ಕಥೆ ಇದು.
ಘಟನೆ ವಿವರ: ಹಾಸನ ಜಿಲ್ಲೆ ಹೊಳೆನರಸೀಪುರದ ಮಳಲಿ ಗ್ರಾಮದ ಅಣ್ಣ ತಂಗಿಯರಾದ ಮಂಜುನಾಥ್ ಮತ್ತು ಭಾಗ್ಯ ಹುಟ್ಟಿದ ಎರಡು ವರ್ಷಗಳಲ್ಲೇ ತಮ್ಮ ತಂದೆ ತಾಯಿಗಳನ್ನು ಕಳೆದುಕೊಂಡಿದ್ದರು. ಆ ನಂತರ ಚಿಕ್ಕಮ್ಮನ ಆಶ್ರಯದಲ್ಲಿದ್ದ ಈ ಸೋದರ ಸೋದರಿಯರು ಚಿಕ್ಕಮ್ಮನ ಅಗಲಿಕೆ ಮತ್ತೆ ಅನಾಥರನ್ನಾಗಿಸಿತ್ತು.
ಆಗ ಅಣ್ಣ ಯಾರದ್ದೋ ಮನೆ ಸೇರಿದ್ದರೆ ತಂಗಿ ಇನ್ನಾರದೋ ಮನೆ ಸೇರಿದ್ದಳು. ಅಣ್ಣ ಮಂಜುನಾಥ್ ಚಿಕ್ಕಮ್ಮನ ಮನೆ ತೊರೆದ ನಂತರ ಗೌಡೇಗೌಡರ ಎನ್ನುವವರ ಮನೆ ಸೇರಿದರೆ ತಂಗಿ ಭಾಗ್ಯ ಸಕಲೇಶಪುರದ ಕಾಫಿ ತೋಟದ ಮಾಲೀಕರ ಮನೆ ಸೇರಿ ಜೀತದಾಳಿನಂತೆ ದುಡಿಯುತ್ತಿದ್ದಳು. ಅಲ್ಲಿ ಕಷ್ಟದ ಜೀವನ ತಾಳಲಾರದೆ ಭಾಗ್ಯ ಆ ಮನೆಯನ್ನು ತೊರೆದು ಮಕ್ಕಳ ರಕ್ಷಣಾ ಸಮಿತಿ ಆಶ್ರಯಕ್ಕೆ ಸೇರಿದ್ದಳು. ಇತ್ತ ಮಂಜುನಾಥ್ ಗೌಡೇಗೌಡರ ಮನೆಯಲ್ಲಿ ಮಗನಂತೆ ಬೆಳೆದು ಎಸ್ಎಸ್ ಎಲ್’ಸಿ ವ್ಯಾಸಂಗ ಮಾಡುತ್ತಿದ್ದಾರೆ.
ಪ್ರಸ್ತುತ ಅಣ್ಣ ಮಂಜುನಾಥ್ ಗೆ 16 ವರ್ಷವಾಗಿದ್ದರೆ ತಂಗಿಗೆ 13 ವರ್ಷ. ಇದೀಗ ಹಾಸನದ ಮಕ್ಕಳ ಕಲ್ಯಾಣ ಸಮಿತಿ ಇಬ್ಬರೂ ಅಣ್ಣ ತಂಗಿ ಎನ್ನುವುದನ್ನು ಗುರುತಿಸಿ ಒಂದಾಗಿಸುವ ಕೆಲಸ ಮಾಡಿದೆ.
ಅಂತೂ ಚಲನಚಿತ್ರ ಕಥೆಯಂತೆ ಮಕ್ಕಳ ಕಲ್ಯಾಣ ಸಮಿತಿಯ ಪ್ರಯತ್ನದಿಂದಾಗಿ ದಶಕದ ಬಳಿಕ ಅಣ್ಣ ತಂಗಿ ಒಟ್ಟಾಗಿದ್ಡಾರೆ.