ಬೆಂಗಳೂರು: ಪೋಲೀಸ್ ಆಗಬೇಕೆಂದು ಕನಸು ಕಂಡಿದ್ದ ಹನ್ನೆರಡರ ಬಾಲಕನೊಬ್ಬನ ಕನಸನ್ನು ಬೆಂಗಳೂರು ವಿವಿ ಪುರಂ ಪೋಲೀಸರು ನನಸು ಮಾಡಿದ್ದಾರೆ.
ತಲಸ್ಸೇಮಿಯಾ ಹಾಗೂ ಮಧುಮೇಹ ರೋಗದಿಂದ ಬಳಲುತ್ತಿರುವ ಬಾಲಕ ಶಶಾಂಕ್ ಪೊಲೀಸ್ ಅಧಿಕಾರಿಯಾಗುವ ಕನಸು ಕಂಡಿದ್ದ. ಆದರೆ ಭೀಕರ ರೋಗದಿಂದ ಬಳಲುತ್ತಿರುವ ಬಾಲಕ ಸರಿಯಾಗಿ ಶಾಲೆಗೆ ತೆರಳಲೂ ಸಾಧ್ಯವಾಗದೆ ಇರುವುದು ಅವನನ್ನು ಪೋಲೀಸ್ ಅಧಿಕಾರಿಯಾಗುವ ಕನಸಿಂದ ದೂರ ಉಳಿಸಿತ್ತು. ಆದರೆ ಈ ಬಾಲಕನ ಆಸೆಯ ಕುರಿತು ತಿಳಿದ ವಿವಿ ಪುರಂ ಪೋಲೀಸ್ ಠಾಣಾಧಿಕಾರಿ ಟಿ.ಡಿ. ಮುನಿರಾಜು ಅವನಿಗೆ ಈ ಅದ್ಭುತ ಅವಕಾಶ ಒದಗಿಸಿಕೊಟ್ಟರು.
ಮೂಲತಃ ಚಿಂತಾಮಣಿಯವನಾದ ಶಶಾಂಕ್ ಮುನಿರಾಜ್ ಮತ್ತು ಸುಜಾತ ದಂಪತಿಯ ಏಕಮಾತ್ರ ಪುತ್ರ. ಸರ್ಕಾರಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದಾನೆ. ಈತನಿಗೆ ಐದು ತಿಂಗಳಿದ್ದಾಗಲೇ ತಲಸ್ಸೇಮಿಯಾ ಸಮಸ್ಯೆ ಕಾಣಿಸಿಕೊಂಡಿತ್ತು. ಈ ರೋಗವು ರಕ್ತಕ್ಕೆ ಸಂಬಂಧಿಸಿದ ರೋಗವಾಗಿದ್ದು ಈ ರೋಗಿಗಳಿಗೆ ಮೂರು ತಿಂಗಳಿಗೊಮ್ಮೆ ರಕ್ತವನ್ನು ಬದಲಿಸಬೇಕಾಗುವುದು.
ಬಾಲಕ ಶಶಾಂಕ್ ನಿಗೆ ಈ ಮಾರಕ ರೋಗದೊಡನೆ ಮಧುಮೇಹವೂ ಇದೆ. ಕಳೆದ ಎರಡು ವರ್ಷಗಳ ಹಿಂದೆ ಶಶಾಂಕ್ ನಲ್ಲಿ ಮಧುಮೇಹ ಲಕ್ಷಣ ಕಾಣಿಸಿದ್ದವು.
ಸದ್ಯ ವಾಣಿವಿಲಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಶಾಂಕ್ ವಿಚಾರ ತಿಳಿದ ವಿವಿ ಪುರಂ ಪೋಲೀಸರು ಬಾಲಕನಿಗೆ ಒಂದು ಗಂಟೆಯ ಮಟ್ಟಿಗೆ ಪೊಲೀಸ್ ಅಧಿಕಾರಿಯಾಗುವ ಅವಕಾಶ ಒದಗಿಸಿಕೊಟ್ಟಿದ್ದಾರೆ.
ಶಶಾಂಕ್ ಪೋಲೀಸ್ ದಿರಿಸನ್ನು ಧರಿಸಿ ಇನ್ಸ್ ಪೆಕ್ಟರ್ ಕುರ್ಚಿಯಲ್ಲಿ ಕುಳಿತು ತನ್ನ ಆಸೆಯನ್ನು ಈಡೇರಿಸಿಕೊಂಡಿದ್ದಾನೆ. ಈ ವೇಳೆ ಪೋಲೀಸರು ಆತನಿಗೆ ನಕಲಿ ಗನ್ ಹಾಗೂ ವಾಕಿ ಟಾಕು ಸಹ ನೀಡಿದ್ದಾರೆ.
ಬಾಲಕ ಶಶಾಂಕ್ ತನ್ನ ಕನಸನ್ನು ನನಸು ಮಾಡಿದ್ದ ಪೋಲೀಸ್ ಅಧಿಕಾರಿಗಳಿಗೆ ಧನ್ಯವಾದ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos