ವಿಶೇಷ

ಇಂದು ಲೋಕಾರ್ಪಣೆಯಾದ ರಾಷ್ಟ್ರೀಯ ಯುದ್ಧ ಸ್ಮಾರಕದ ವಿಶೇಷತೆಗಳ ಬಗ್ಗೆ ನಿಮಗೆಷ್ಟು ಗೊತ್ತು?

Srinivasamurthy VN
ನವದೆಹಲಿ: ದೇಶದ ಪ್ರಥಮ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟನೆ ಮಾಡಿದ್ದು, ಈ ವಿಶೇಷ ಸ್ಮಾರಕದ ಒಂದಷ್ಚು ಕುತೂಹಲಕಾರಿ ಮಾಹಿತಿ ಇಲ್ಲಿದೆ.
ದೆಹಲಿಯ ಇಂಡಿಯಾ ಗೇಟ್‌ ಮತ್ತು ಅಮರ್‌ ಜವಾನ್‌ ಜ್ಯೋತಿ ಬಳಿ ಸುಮಾರು 40 ಎಕರೆ ಪ್ರದೇಶದಲ್ಲಿ, ಚಕ್ರವ್ಯೂಹ ಮಾದರಿಯಲ್ಲಿ ಸ್ಮಾರಕ ನಿರ್ಮಿಸಲಾಗಿದೆ. ಚೌಕಾಕಾರದ ಕಂಬದ ಬಳಿ ಇಡಲಾಗಿರುವ ಜ್ಯೋತಿಯನ್ನು ಬೆಳಗಿಸುವ ಮೂಲಕ ಪ್ರಧಾನಿ ಮೋದಿ ಸಂಜೆ 5.30ಕ್ಕೆ ಸ್ಮಾರಕವನ್ನು ಲೋಕಾರ್ಪಣೆ ಮಾಡಿದರು. 
ಸ್ಮಾರಕದ ವಿಶೇಷತೆಗಳು
ಇಂಡಿಯಾ ಗೇಟ್ ಸಮೀಪ 40 ಎಕರೆ ವಿಸ್ತೀರ್ಣದಲ್ಲಿ ಸ್ಮಾರಕ ತಲೆ ಎತ್ತಿದೆ. ನಾಲ್ಕು ಕೇಂದ್ರೀಕೃತ ವಲಯಗಳನ್ನು ನಿರ್ಮಿಸಲಾಗಿದ್ದು, ಪುರಾತನ ಚಕ್ರವ್ಯೂಹ ಯುದ್ಧತಂತ್ರಗಾರಿಕೆಯನ್ನು ಇದು ಸಂಕೇತಿಸುತ್ತದೆ. 15 ಅಡಿ ಎತ್ತರದ ಸ್ತಂಭದ ಮೇಲೆ ಇರಿಸಿರುವ ಜ್ಯೋತಿಯನ್ನು ಬೆಳಗುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಸ್ಮಾರಕ ಲೋಕಾರ್ಪಣೆ ಮಾಡಿದರು. 
ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಅಥವಾ ವಿದೇಶಿ ಗಣ್ಯರು ಆಗಮಿಸಿದಾಗ ಈ ಸ್ಮಾರಕದ ಮೇಲೆ ಹೂಗುಚ್ಛ ಇರಿಸಲಾಗುತ್ತದೆ. ಅಮರಜವಾನ್ ಜ್ಯೋತಿ ಸ್ಮಾರಕವೂ ಇಲ್ಲಿಗೆ ಸ್ಥಳಾಂತರವಾಗಲಿದೆ. ಪಾಕಿಸ್ತಾನದ ಜೊತೆಗಿನ ಯುದ್ಧ (1947–48 ಮತ್ತು 1965), ಚೀನಾ (1962), ಕಾರ್ಗಿಲ್ ಯುದ್ಧ (1999), ಆಪರೇಷನ್ ಪರಾಕ್ರಮದಲ್ಲಿ (2002–04) ಹುತಾತ್ಮರಾದ ಯೋಧರ ಹೆಸರುಗಳನ್ನು ನೂತನ ಸ್ಮಾರಕದ ಇಟ್ಟಿಗೆಗಳಲ್ಲಿ ಕೆತ್ತಲಾಗಿದೆ. ಪರಮವೀರ ಚಕ್ರ ಪಡೆದ 21 ಯೋಧರಿಗೆ ವಿಶೇಷ ಗೌರವ ನೀಡಲಾಗಿದೆ. ಕಳೆದ 7 ದಶಕಗಳಲ್ಲಿ ಭಾರತ ನಡೆಸಿದ ಯುದ್ಧಗಳ ಮಾಹಿತಿಯುಳ್ಳ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಗಿದೆ. ಮೊದಲ ಮಹಾಯುದ್ಧ ಹಾಗೂ ಆಂಗ್ಲೊ–ಆಫ್ಗನ್ ಯುದ್ಧದಲ್ಲಿ ಮಡಿದ ಭಾರತದ 83 ಸಾವಿರ ಸೈನಿಕರ ನೆನಪಿನಲ್ಲಿ 1931ರಲ್ಲಿ ಇಂಡಿಯಾ ಗೇಟ್ ನಿರ್ಮಾಣವಾಗಿತ್ತು. ಈ ಸ್ಮಾರಕದಲ್ಲಿ ಸುಮಾರು 13 ಸಾವಿರ ಯೋಧರ ಹೆಸರುಗಳಿವೆ.
176 ಕೋಟಿ ವೆಚ್ಚ
ದೇಶದ ಪ್ರಥಮ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು176 ಕೋಟಿ ರು. ವೆಚ್ಚದಲ್ಲಿ ವಿಶ್ವದರ್ಜೆಯಲ್ಲಿ ನಿರ್ಮಿಸಲಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ದೇಶಕ್ಕಾಗಿ ಇಲ್ಲಿಯವರೆಗೆ ಪ್ರಾಣತ್ಯಾಗ ಮಾಡಿದ 25,942 ಯೋಧರ ಹೆಸರನ್ನು ಸ್ಮರಿಸಿಕೊಳ್ಳಲಾಗಿದೆ. 16 ಗ್ರಾನೈಟ್‌ ಗೋಡೆಗಳ ಮೇಲೆ ಯೋಧರ ಹೆಸರನ್ನು ಬರೆಯಲಾಗಿದೆ. ಯೋಧರ ಹೆಸರಿನ ಜೊತೆಗೆ ಅವರ ಹುದ್ದೆ, ಅವರು ಸೇರಿದ್ದ ಪಡೆಯನ್ನೂ ದಾಖಲಿಸಲಾಗಿದೆ.
ಚಕ್ರವ್ಯೂಹದಿಂದ ಪ್ರೇರಣೆ
ಚಕ್ರವ್ಯೂಹದಿಂದ ಪ್ರೇರಣೆ ಪಡೆದು 4 ವೃತ್ತಾಕಾರದಲ್ಲಿ ಸ್ಮಾರಕವನ್ನು ನಿರ್ಮಿಸಲಾಗಿದ್ದು, ಮೊದಲ ವೃತ್ತಕ್ಕೆ ಅಮರ ಚಕ್ರ, ಎರಡನೇ ವೃತ್ತಕ್ಕೆ ವೀರತಾ ಚಕ್ರ, ಮೂರನೇ ವೃತ್ತಕ್ಕೆ ತ್ಯಾಗ ಚಕ್ರ ಮತ್ತು ನಾಲ್ಕನೇ ವೃತ್ತಕ್ಕೆ ರಕ್ಷಕ್‌ ಚಕ್ರ ಎಂದು ಹೆಸರಿಡಲಾಗಿದೆ. ಈ ನಾಲ್ಕು ವೃತ್ತಾಕಾರದ ಸ್ಥಳದ ನಡುವೆ 15 ಅಡಿ ಎತ್ತರದ ಸ್ತಂಭವನ್ನು ಅಳವಡಿಸಲಾಗಿದ್ದು, ಅದರಲ್ಲಿ ಜ್ಯೋತಿಯನ್ನು ಇಡಲಾಗಿದೆ. ಸ್ತಂಭದ ಕೆಳ ಭಾಗದಲ್ಲಿ ಶಹೀದ್‌ ಕಿ ಮಜ್ರೋಂ ಪರ್‌ ಎಂಬ ಖ್ಯಾತ ಕವಿ ಜಗದಂಬಾ ಮಿಶ್ರಾ ಅವರ ವಾಣಿಯನ್ನು ಬರೆಯಲಾಗಿದೆ. ಇನ್ನು ಖ್ಯಾತ ಶಿಲ್ಪಿ ರಾಮ್‌ ಸುತರ್‌ ಅವರು ನಿರ್ಮಿಸಿರುವ 6 ಕಂಚಿನ ಪುತ್ಥಳಿಗಳನ್ನು ಸ್ಮಾರಕ ಸ್ಥಳದಲ್ಲಿ ಅಳವಡಿಸಲಾಗಿದೆ.
ಬೆಂಗಳೂರಿನಲ್ಲಿ ದೇಶದ ಮೊದಲ ರಾಷ್ಟ್ರೀಯ ಸೈನಿಕ ಸ್ಮಾರಕ ಕೆಲವು ವರ್ಷಗಳ ಹಿಂದೆಯೇ ನಿರ್ಮಾಣವಾಗಿದೆ. ಆದರೆ, ಇದಕ್ಕೊಂದು ವೀರಗಲ್ಲು ಅಗತ್ಯವಿದ್ದು, ಇನ್ನೂ ಕೆಲಸ ಬಾಕಿ ಇದೆ. ಆ ಕಾರಣದಿಂದ ಈ ಸ್ಮಾರಕವಿನ್ನೂ ಉದ್ಘಾಟನೆಯಾಗಿಲ್ಲ.
SCROLL FOR NEXT