ವಿಶೇಷ

'ನಮ್ರತೆ, ಹಾಸ್ಯಪ್ರಜ್ಞೆಗೆ ಹೆಸರುವಾಸಿಯಾಗಿದ್ದ ದಲಿತ ಕವಿ ಡಾ. ಸಿದ್ದಲಿಂಗಯ್ಯ'

Sumana Upadhyaya

ಬೆಂಗಳೂರು: ದಲಿತ ಕವಿ, ಬಂಡಾಯ ಸಾಹಿತಿ ಡಾ ಸಿದ್ದಲಿಂಗಯ್ಯನವರ ಸಾಹಿತ್ಯಗಳನ್ನು ಓದಿದವರಿಗೆ ಅವರ ತತ್ವ, ಸಿದ್ಧಾಂತಗಳು, ಆಲೋಚನೆಗಳು ಅರ್ಥವಾಗುತ್ತವೆ. ಅವರ ಕಾವ್ಯದಲ್ಲಿ ಒಂದು ಉಗ್ರತೆ ಇದೆ, ವೈಯಕ್ತಿಕವಾಗಿ, ಅವರು ನಮ್ರತೆ ಮತ್ತು ಹಾಸ್ಯ ಪ್ರಜ್ಞೆಗೆ ಹೆಸರುವಾಸಿಯಾಗಿದ್ದರು ಎಂದು ಕನ್ನಡದ ಖ್ಯಾತ ನಿರ್ದೇಶಕ ಟಿ ಎನ್ ಸೀತಾರಾಮ್ ಹೇಳುತ್ತಾರೆ.

ಅವರ ನಿಧನ ಸಂದರ್ಭದಲ್ಲಿ ಟಿ ಎನ್ ಸೀತಾರಾಮ್ ಹಲವು ಸಂಗತಿಗಳನ್ನು, ನೆನಪುಗಳು, ಸಿದ್ದಲಿಂಗಯ್ಯನವರ ಜೊತೆಗಿನ ಒಡನಾಟಗಳನ್ನು ಮೆಲುಕು ಹಾಕಿದ್ದಾರೆ. 

ಅದು 80ರ ದಶಕದ ಆರಂಭದ ದಿನಗಳು. ನಾನು ರಂಗಭೂಮಿ ಮತ್ತು ಸಾಹಿತ್ಯಕ್ಕೆ ಬಂದ ಹೊಸತು. ಬರಗೂರು ರಾಮಚಂದ್ರಪ್ಪ, ಡಿ ಆರ್ ನಾಗರಾಜ್ ಮತ್ತು ಇತರರ ಜೊತೆಗೆ ಒಡನಾಟ ಇಟ್ಟುಕೊಂಡಿದ್ದೆ, ಡಾ ಸಿದ್ದಲಿಂಗಯ್ಯನವರು ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದಾಗ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಹೋಗಿದ್ದೆ. ಮೊದಲ ಭೇಟಿಯಲ್ಲಿನ ಆದ ಅನುಭವವೇ ಅತ್ಯುತ್ತಮ ಅನುಭವ ಎಂಬಂತೆ ಸಿದ್ದಲಿಂಗಯ್ಯನವರ ಬಗ್ಗೆ ಬಹಳ ಒಳ್ಳೆಯ ಅಭಿಪ್ರಾಯ ನನ್ನಲ್ಲಿ ಮೂಡಿತು. ನಂತರದ ದಿನಗಳಲ್ಲಿ ನಾವು ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭೇಟಿಯಾಗುತ್ತಿದ್ದೆವು. ಅವರು ಯಾವಾಗಲೂ ನನ್ನನ್ನು ಗುರುಗಳೇ ಎಂದು ಕರೆಯುತ್ತಿದ್ದರು ಎಂದು ಹೇಳುತ್ತಾರೆ ಟಿ ಎನ್ ಸೀತಾರಾಮ್.

1983ರಲ್ಲಿ, ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಧರಣಿ ಮಂಡಲ ಮಧ್ಯದೊಳಗೆ ಎನ್ನುವ ಚಿತ್ರ ನಿರ್ದೇಶಿಸುತ್ತಿದ್ದರು ಆಗ ಹಾಡುಗಳಿಗೆ ನಾನು ಸಿದ್ದಲಿಂಗಯ್ಯ ಅವರ ಹೆಸರನ್ನು ಸೂಚಿಸಿದೆ. ಸಿದ್ದಲಿಂಗಯ್ಯ ಎರಡು ಹಾಡುಗಳನ್ನು ಬರೆದು ಪ್ರಶಸ್ತಿ ಕೂಡ ಪಡೆದರು. 1995 ರಲ್ಲಿ, ನನ್ನ ಮೊದಲ ಕನ್ನಡ ಟಿವಿ ಧಾರಾವಾಹಿ ಮುಖಾ-ಮುಖಿ ನಿರ್ದೇಶಿಸಿದ್ದೆ, ಇದಕ್ಕಾಗಿ ಶೀರ್ಷಿಕೆ ಗೀತೆಗಾಗಿ ನಾನು ಅವರನ್ನು ಸಂಪರ್ಕಿಸಿದೆ. ಅವರು ‘ಜೀವನಾ ಬಹುಕುಹಾ, ಬಹು ಬಣ್ಣಾ’ ಬರೆದರು ಅದು ಬಹಳ ಜನಪ್ರಿಯವಾಯಿತು ಎನ್ನುತ್ತಾರೆ.

ಸಿದ್ದಲಿಂಗಯ್ಯನವರು ಹಾಸ್ಯಪ್ರವೃತ್ತಿಯ ಮನಸ್ಸಿನವರಾಗಿದ್ದು, ಸಮಯ ಪ್ರಜ್ಞೆಯನ್ನು ಹೊಂದಿದ್ದರು, ಅವರು ತಮ್ಮ ಬಗ್ಗೆಯೇ ತಮಾಷೆ ಮಾಡಿಕೊಳ್ಳುತ್ತಿದ್ದರು. ಮೇಲ್ನೋಟಕ್ಕೆ ಅವರು ಗಂಭೀರ ಸ್ವರೂಪಿ. ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ವಹಿಸಿದ ನಂತರ “ನಾನು ಎಲ್ಲಿಗೆ ಹೋದರೂ ಜನರು ನನಗೆ ಪೇಟಾ ನೀಡುತ್ತಾರೆ. ನಾನು ಅವುಗಳನ್ನು ಎಸೆಯಲು ಅಥವಾ ಧರಿಸಲು ಸಾಧ್ಯವಿಲ್ಲ, ಆದ್ದರಿಂದ ನಾನು ಅವುಗಳಿಗೆ ಒಂದು ಕೋಣೆಯನ್ನು ನಿರ್ಮಿಸಿದ್ದೇನೆ ಎಂದು ಹೇಳುತ್ತಿದ್ದರು.

ಅವರು ಆಸ್ಪತ್ರೆಗೆ ದಾಖಲಾಗುವ ಒಂದು ದಿನ ಮೊದಲು ನನ್ನೊಂದಿಗೆ ಮಾತನಾಡಿದ್ದರು. ಇಂದು ಅವರಿಲ್ಲ ಎಂದು ಊಹಿಸಲೇ ಸಾಧ್ಯವಾಗುತ್ತಿಲ್ಲ. ಅವರ ಬರವಣಿಗೆ, ಅವರ ಒಡನಾಟ ಮತ್ತು ಅದಕ್ಕಿಂತ ಮುಖ್ಯವಾಗಿ ಅವರ ಹಾಸ್ಯಪ್ರಜ್ಞೆಯನ್ನು ಕಳೆದುಕೊಳ್ಳುತ್ತಿದ್ದೇನೆ ಎಂದು ದುಃಖದಿಂದ ಸೀತಾರಾಮ್ ಹೇಳುತ್ತಾರೆ.

SCROLL FOR NEXT