ವಿಶೇಷ

ಕನ್ನಡ ಬಸ್ಸು: ರಾಜ್ಯೋತ್ಸವ ದಿನದಂದು ಕನ್ನಡಿಗರಿಗೆ ವಿಶಿಷ್ಟ ಪ್ರಯಾಣ!

Lingaraj Badiger

ಹುಬ್ಬಳ್ಳಿ: ಹುಬ್ಬಳ್ಳಿಯ ಬಸ್ ನಿಲ್ದಾಣದಲ್ಲಿ ಇಬ್ಬರು ಕನ್ನಡ ‘ಸಾರಥಿ’ಗಳು ತಲೆಯ ಮೇಲೆ ಹಳದಿ ಮತ್ತು ಕೆಂಪು ಪೇಟಗಳನ್ನು ಧರಿಸಿಕೊಂಡು ಪ್ರಯಾಣಿಕರನ್ನು ಸ್ವಾಗತಿಸಲು ನಿಂತಿದ್ದರು. 66ನೇ ಕನ್ನಡ ರಾಜ್ಯೋತ್ಸವ ದಿನದಂದು ಕಲಘಟಗಿ-ಹೊಸಪೇಟೆ ಸರ್ಕಾರಿ ಬಸ್ ಗಳನ್ನು ಹಳದಿ ಮತ್ತು ಕೆಂಪು ಕನ್ನಡ ಧ್ವಜದ ಬಣ್ಣಗಳಿಂದ ಅಲಂಕರಿಸಲಾಗಿತ್ತು.

ಧಾರವಾಡ ಜಿಲ್ಲೆಯ ಕಲಘಟಗಿ ಡಿಪೋದ ಚಾಲಕ ಮತ್ತು ಕಂಡಕ್ಟರ್ ಜೋಡಿಗೆ ನವೆಂಬರ್ 1 ಸಾಮಾನ್ಯ ದಿನವಲ್ಲ. ಪ್ರತಿ ರಾಜ್ಯೋತ್ಸವ ದಿನದಂದು ಅವರು ತಮ್ಮ ಬಸ್ ಅನ್ನು ತಪ್ಪದೇ ಎಲ್ಲರೂ ನೋಡುವ ರೀತಿಯಲ್ಲಿ ಸಿದ್ಧಪಡಿಸುತ್ತಾರೆ. ಸರ್ಕಾರಿ ಸ್ವಾಮ್ಯದ ನಿಗಮಗಳ ಅನೇಕ ಬಸ್‌ಗಳು ತಮ್ಮ ವಾಹನಗಳಿಗೆ ಹಾರ ಮತ್ತು ಧ್ವಜಗಳಿಂದ ಅಲಂಕರಿಸಿದರೆ, ಕಲಘಟಗಿಯ ಬಸ್ ಚಾಲಕ ಸಂತೋಷ ಎಸ್ ಬೆಳಮಗಿ ಮತ್ತು ಕಂಡಕ್ಟರ್ ಶಾಹಿಕುಮಾರ ಎಂ ಭೋಸ್ಲೆ ಅವರು ಮಾತ್ರ ತಮ್ಮ ಬಸ್ ಗಳನ್ನು ವಿಭಿನ್ನವಾಗಿ ಅಲಂಕರಿಸುತ್ತಾರೆ.

ಕೇವಲ ಬಾಹ್ಯ ಅಲಂಕಾರಕ್ಕೆ ಮಾತ್ರ ಈ ಬಸ್ ಗಳು ಸೀಮಿತವಾಗಿಲ್ಲ. ಸರ್ಕಾರಿ ಬಸ್‌ನ ಒಳಗಿನ ಸೀಟುಗಳು ಸಹ ಹಳದಿ ಮತ್ತು ಕೆಂಪು ಬಣ್ಣದ ಕವರ್‌ಗಳನ್ನು ಹೊಂದಿವೆ. ಕರ್ನಾಟಕದ ಎಲ್ಲಾ ಎಂಟು ಜ್ಞಾನಪೀಠ ಪುರಸ್ಕೃತರ ಫೋಟೋಗಳು ಮತ್ತು ವಿವರಗಳನ್ನು ಆಚರಣೆಯ ಭಾಗವಾಗಿ ಬಸ್ ಸುತ್ತಲೂ ಹಾಕಲಾಗಿದೆ.

ಸೋಮವಾರ ಹುಬ್ಬಳ್ಳಿ ಮುಖ್ಯ ಬಸ್ ನಿಲ್ದಾಣಕ್ಕೆ ಬಸ್‌ ಪ್ರವೇಶಿಸಿದಾಗ ಬಸ್‌ನ ಸುತ್ತ ಜನಸಾಗರವೇ ನೆರೆದಿತ್ತು ಮತ್ತು ಅವರು ಫೋಟೋ, ವಿಡಿಯೋ ತೆಗೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಏಕೀಕರಣ ದಿನವು ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆಯ ಕ್ಷಣವಾಗಿದ್ದು, ನಮ್ಮ ಸ್ವಂತ ಖರ್ಚಿನಲ್ಲಿ ಬಸ್ ಅನ್ನು ಅಲಂಕರಿಸಿ ನಾವು ಸಂತೋಷಪಡುತ್ತೇವೆ. ನಾವು ಕರ್ತವ್ಯದಲ್ಲಿದ್ದರೂ ಹಬ್ಬವನ್ನು ಆಚರಿಸಲು ಪ್ರೋತ್ಸಾಹಿಸಿದ ನಮ್ಮ ಮುಖ್ಯಸ್ಥರು ಮತ್ತು ಡಿಪೋ ಅಧಿಕಾರಿಗಳಿಗೆ ನಾವು ಕೃತಜ್ಞರಾಗಿದ್ದೇವೆ. ಪ್ರಯಾಣಿಕರ ಪ್ರತಿಕ್ರಿಯೆ ಮತ್ತು ಮೆಚ್ಚುಗೆಯು ಅಗಾಧವಾಗಿತ್ತು ಎಂದು ಕಂಡಕ್ಟರ್ ಶಿಕುಮಾರ್ ಎಂ ಭೋಸ್ಲೆ ಅವರು ಹೇಳಿದ್ದಾರೆ.

"ಇದು ಎರಡನೇ ಬಾರಿ ನಾವು ಈ ರೀತಿಯ ವಿಶಿಷ್ಟ ಆಚರಣೆಯನ್ನು ಆಚರಿಸುತ್ತಿದ್ದೇವೆ. ಕನ್ನಡಕ್ಕೆ ಇತರ ಭಾಷೆಗಳೊಂದಿಗೆ ಸ್ಪರ್ಧಿಸುವ ಸವಾಲು ಇದೆ, ನಾವು ಕನ್ನಡ ಪುಸ್ತಕಗಳು, ಕರ್ನಾಟಕದ ಪ್ರತಿಯೊಂದು ತಾಲೂಕು ಮತ್ತು ಜಿಲ್ಲೆಯ ವಿವರಗಳನ್ನು ನಮ್ಮ ಬಸ್‌ನಲ್ಲಿ ಇರಿಸಿದ್ದೇವೆ. ನಮ್ಮ ಸಂಘಗಳು, ಕುಟುಂಬ ಮತ್ತು ಅಧಿಕಾರಿಗಳು ಇದನ್ನು ಬೆಂಬಲಿಸಿದ್ದಾರೆ ಎಂದು ಅವರು ಹೇಳಿದರು.

ಭೋಸ್ಲೆ ಹಿರೇಕೆರೂರ ಮೂಲದವರಾಗಿದ್ದು, ಪ್ರಸ್ತುತ ಕಲಘಟಗಿ ಡಿಪೋದಲ್ಲಿ ಕೆಲಸ ಮಾಡುತ್ತಿದ್ದಾರೆ.

SCROLL FOR NEXT