ವಿಶೇಷ

ಕರ್ನಾಟಕಕ್ಕೆ ಶೀಘ್ರವೇ ರಾಜ್ಯ ಕಪ್ಪೆ; ಶರಾವತಿಯಲ್ಲಿ ಕಪ್ಪೆಗಳ ಹಬ್ಬ ಆಯೋಜನೆ! 

Srinivas Rao BV

ಬೆಂಗಳೂರು: ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಶೀಘ್ರವೇ ಕರ್ನಾಟಕ ತನ್ನದೇ ಆದ ರಾಜ್ಯ ಕಪ್ಪೆಯೊಂದನ್ನು ಹೊಂದಲಿದೆ ಹಾಗೂ ಈ ರೀತಿ ರಾಜ್ಯ ಕಪ್ಪೆಯೊಂದು ಹೊಂದಿದ ಭಾರತದ ಮೊದಲ ರಾಜ್ಯವಾಗಲಿದೆ.
 
ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ, ಮಲಬಾರ್ ಟ್ರೀ ಟೋಡ್ ಎಂಬ ಅಪರೂಪದ, ಅಳಿವಿನ ಅಂಚಿನಲ್ಲಿರುವ ಪ್ರಭೇದದ ಕಪ್ಪೆಯನ್ನು ರಾಜ್ಯ ಕಪ್ಪೆಯನ್ನಾಗಿ ಘೋಷಣೆ ಮಾಡಬೇಕೆಂದು ತಜ್ಞರು ಹೇಳಿದ್ದಾರೆ.
 
ಕಪ್ಪೆಗಳ ಪ್ರಭೇದಗಳ ಬಗ್ಗೆ ಜನರಿಗೆ ಉತ್ತಮ ರೀತಿಯಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಬೋರ್ನಿಯೊದಲ್ಲಿ ಆಯೋಜಿಸಲಾಗುವ ಫ್ರಾಗ್ ರೈನ್ ಮಾದರಿಯಲ್ಲಿ  ಬೆಳಗಾವಿಯಲ್ಲಿ ಚಳಿಗಾಲದ ವಿಧಾನಸಭೆ ಅಧಿವೇಶನ ನಡೆದ ಬಳಿಕ,  2002 ರ ಜನವರಿ ತಿಂಗಳಲ್ಲಿ ಶರಾವತಿಯಲ್ಲಿ ಮೊದಲ ಬಾರಿಗೆ ಕಪ್ಪೆ ಹಬ್ಬ ಆಯೋಜನೆಯಾಗಲಿದೆ. 

ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಈ ಬಗ್ಗೆ ಮಾತನಾಡಿದ್ದು ರಾಜ್ಯ ಕಪ್ಪೆಯನ್ನು ಹೊಂದುವುದರಿಂದ ಜನರಿಗೆ ಈ ಪ್ರಭೇದದ ಬಗ್ಗೆ ಅರಿವು ಮೂಡಲಿದೆ. ಸಣ್ಣ ಸಣ್ಣ ಪ್ರಭೇದಗಳ ಬಗ್ಗೆ ಗಮನ ಹರಿಸಲೇಬೇಕಾದ ಸಮಯ ಇದಾಗಿದ್ದು, ಕಪ್ಪೆ ಹಬ್ಬ ಮಾಸ (ತಿಂಗಳು ಪೂರ್ತಿ ಆಯೋಜನೆಯಾಗಲಿರುವ ಕಾರ್ಯಕ್ರಮ) ನಡೆಯಲಿದ್ದು ಇದರಲ್ಲಿ ಯಾವೆಲ್ಲಾ ಪ್ರಭೇದಗಳನ್ನು ಪ್ರದರ್ಶಿಸಬೇಕೆಂಬುದನ್ನು ಕಾರ್ಯಕ್ರಮದ ರೂಪುರೇಷೆ ಅಂತಿಮಗೊಂಡ ಬಳಿಕ ನಿರ್ಧರಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. 

ಈ ಪ್ರಭೇದದ ಕಪ್ಪೆಗಳನ್ನು ರಾಜ್ಯ ಕಪ್ಪೆಗಳನ್ನಾಗಿ ಘೋಷಣೆ ಮಾಡುವುದಕ್ಕೆ ಸಲ್ಲಿಕೆಯಾಗುತ್ತಿರುವ ಪ್ರಸ್ತಾವನೆ ಇದೇ ಮೊದಲ ಬಾರಿಯಲ್ಲ. ಈ ಹಿಂದೆ ಜನವರಿ ತಿಂಗಳಲ್ಲೂ ಪ್ರಯತ್ನ ನಡೆದಿತ್ತು. ಆದರೆ ರಾಜ್ಯ ವನ್ಯಜೀವಿ ಮಂಡಳಿ ಈ ಪ್ರಸ್ತಾವನೆಯನ್ನು ಕೈಬಿಟ್ಟಿತ್ತು. ಈಗ ನವೆಂಬರ್ 17 ರಂದು ಕುದುರೆಮುಖದಲ್ಲಿನ ಶೋಲ ಉತ್ಸವದಲ್ಲಿ ಮತ್ತೆ ಚರ್ಚೆ ನಡೆಸಲಾಗಿದೆ.

 ಸೃಷ್ಟಿ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಆರ್ಟ್ ಡಿಸೈನ್ ಅಂಡ್ ಟೆಕ್ನಾಲಜಿಯಲ್ಲಿ ಬ್ಯಾಟ್ರಾಕಾಲಜಿಸ್ಟ್ ಮತ್ತು ಫ್ಯಾಕಲ್ಟಿ ಮತ್ತು ಸಂಶೋಧಕರಾದ ಕೆ.ವಿ ಗುರುರಾಜ್ ಅವರು ನೀಡಿರುವ ಮಾಹಿತಿಯ ಪ್ರಕಾರ 1875-76 ರಲ್ಲಿ ಮಲಬಾರ್ ಟ್ರೀ ಟೋಡ್ ಪ್ರಭೇದದ ಕಪ್ಪೆಯ ಉಲ್ಲೇಖ ಮೊದಲ ಬಾರಿಗೆ 1875-76 ರಲ್ಲಿ ಆಗಿದೆ. ಆ ಬಳಿಕ 105 ವರ್ಷಗಳ ಬಳಿಕ, ಕೇರಳದ ಪೊನ್ಮುಡಿಯಲ್ಲಿ 1980 ರಲ್ಲಿ ಪತ್ತೆಯಾಗಿತ್ತು. ಆದರೆ ಅದನ್ನು 1985 ರಲ್ಲಿ ದಾಖಲಿಸಲಾಗಿತ್ತು.

ಕರ್ನಾಟಕ ಇದುವರೆಗೆ ಇವುಗಳನ್ನು ಹೊಂದಿದೆ...

ರಾಜ್ಯ ಮರ -- ಶ್ರೀಗಂಧ
ರಾಜ್ಯ ಪ್ರಾಣಿ -- ಆನೆ
ರಾಜ್ಯ ಚಿಟ್ಟೆ -- ಸದರ್ನ್ ಬರ್ಡ್ ವಿಂಗ್
ರಾಜ್ಯ ಪಕ್ಷಿ -- ಭಾರತೀಯ ರೋಲರ್
ರಾಜ್ಯ ಹೂವು -- ಕಮಲ
ರಾಜ್ಯ ಮೀನು -- ಕರ್ನಾಟಿಕ್ ಕಾರ್ಪ್
ರಾಜ್ಯದ ಹಣ್ಣು -- ಮಾವು

SCROLL FOR NEXT