ವಿಶೇಷ

ಹಳ್ಳಿಯ ಮಕ್ಕಳಿಗೆ ಉಚಿತ ಸ್ಪೋಕನ್ ಇಂಗ್ಲಿಷ್ ತರಬೇತಿ: ಈ ಲಾರಿ ಚಾಲಕರ ಶ್ಲಾಘನೀಯ ಸೇವೆ ಇತರರಿಗೂ ಮಾದರಿ!

Sumana Upadhyaya

ಗದಗ: ಲಾರಿ ಚಾಲಕರು ತಮ್ಮ ಕಷ್ಟದ ಕೆಲಸದ ಸಮಯದಲ್ಲಿ ತಮಗೆ ತಮ್ಮ ಬದುಕಿಗೆ ಸಮಯ ನೀಡಲು ಅವಕಾಶ ಸಿಗುವುದು ಬಹಳ ವಿರಳ. ಸುಡುವ ಬಿಸಿಲು, ಭಾರೀ ಮಳೆ ಮತ್ತು ಕೊರೆಯುವ ಚಳಿಯಲ್ಲಿ ಅವರು ತಮ್ಮ ಕಷ್ಟಗಳನ್ನು ನಿಗ್ರಹಿಸುತ್ತಾ ಕೆಲಸದ ಕಡೆ ಗಮನ ಹರಿಸಬೇಕಾಗುತ್ತದೆ. 

ಶಿಕ್ಷಣ ಅವರ ಬದುಕನ್ನು ಬದಲಾಯಿಸಬಹುದು, ಜೀವನಕ್ಕೆ ಘನತೆ, ಗೌರವವನ್ನು ನೀಡಬಹುದು ಎಂಬುದನ್ನು ಗದಗ ಜಿಲ್ಲೆಯ ಈ ಆರು ಮಂದಿ ಲಾರಿ ಚಾಲಕರು ಚೆನ್ನಾಗಿ ಅರಿತುಕೊಂಡಿದ್ದಾರೆ. 

ಗದಗ ಜಿಲ್ಲೆಯ ನಾರಾಯಣಪುರ ಗ್ರಾಮದಲ್ಲಿ ಲಾರಿ ಚಾಲಕರ ಗುಂಪು ಶಿಕ್ಷಣಕ್ಕೆ ಒತ್ತು ನೀಡಲು ನಿರ್ಧರಿಸಿದೆ. ಹಳ್ಳಿಯ ಶಾಲೆಯ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯಬೇಕು ಎಂಬ ಉದ್ದೇಶದಿಂದ ನಾರಾಯಣಪುರ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಧನಸಹಾಯ ಮಾಡುವ ಮೂಲಕ ಸಹಾಯ ಮಾಡುತ್ತಿದ್ದಾರೆ.

ಏಪ್ರಿಲ್ 1 ರಂದು, ಚಾಲಕರು ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಗ್ರಾಮಸ್ಥರು ವಿದ್ಯಾರ್ಥಿಗಳಿಗೆ ಉಚಿತ ಸ್ಪೋಕನ್ ಇಂಗ್ಲಿಷ್ ಕೋರ್ಸ್ ನ್ನು ಪ್ರಾರಂಭಿಸಿದರು. ವಿದ್ಯಾರ್ಥಿಗಳು ತಮ್ಮ ರಜೆಯ ಸಮಯದಲ್ಲಿ ಕಲಿತಿದ್ದಾರೆ. ವಿದ್ಯಾರ್ಥಿಗಳು ಈಗ ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ. ಇತರ ನಗರಗಳಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಶಿಕ್ಷಕರಾಗಿ ಕೆಲಸ ಮಾಡುವ ನಾರಾಯಣಪುರ ಗ್ರಾಮಸ್ಥರು ಮತ್ತು ಇತರ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಶಿಕ್ಷಕರು ಮಕ್ಕಳಿಗೆ ಕಲಿಸುತ್ತಾರೆ.

ಇಂದಿನ ಕಾಲಘಟ್ಟದಲ್ಲಿ ಇಂಗ್ಲಿಷ್ ನಲ್ಲಿ ಶಿಕ್ಷಣ ಪಡೆಯಬೇಕೆಂದು ಚಾಲಕರು ಅರಿತುಕೊಂಡಿದ್ದಾರೆ. ಆದ್ದರಿಂದ, ಅವರು ಈಗ ಸ್ಮಾರ್ಟ್ ತರಗತಿಗಳು, ಆಂಡ್ರಾಯ್ಡ್ ಟಿವಿ ಸೆಟ್‌ಗಳು ಮತ್ತು ವಿದ್ಯಾರ್ಥಿಗಳಿಗಾಗಿ ಲೈಬ್ರರಿಗಳಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಅವರ ಉಪಕ್ರಮವು ಅನೇಕ ದಿನಗೂಲಿ ಕಾರ್ಮಿಕರಿಗೆ ಸ್ಫೂರ್ತಿ ನೀಡಿದೆ, ಅವರು ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಪ್ರತಿ ಪೈಸೆಗೂ ಕಷ್ಟಪಡಬೇಕಾದ ಬಡ ಟ್ರಕ್ ಚಾಲಕರು ಮತ್ತು ದಿನಗೂಲಿಗಳು ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ನಿರ್ಧರಿಸಿದ್ದು ಕುತೂಹಲಕಾರಿ ಮತ್ತು ಪ್ರೇರಣೆಯ ಸಂಗತಿಯಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ. 

ತರಬೇತಿ ಹುಟ್ಟಿಕೊಂಡ ಬಗೆ: ನಾರಾಯಣಪುರದ ಬಹುತೇಕ ಗ್ರಾಮಸ್ಥರು ದಿನಗೂಲಿ ಕಾರ್ಮಿಕರು. ಆರು ಟ್ರಕ್, ಲಾರಿ ಚಾಲಕರ ಗುಂಪು ಹಳ್ಳಿಯ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕೊಡುಗೆ ನೀಡಲು ನಿರ್ಧರಿಸಿದೆ. 500 ರೂಪಾಯಿಯಿಂದ ಆರಂಭಿಸಿ ಕಳೆದ ವರ್ಷ ತಮ್ಮ ಸಂಸ್ಥೆಗೆ ರಾಜರತ್ನ ಎಂದು ನಾಮಕರಣ ಮಾಡಿದರು. ವಿದ್ಯಾರ್ಥಿಗಳ ಅವಶ್ಯಕತೆಗಳ ಬಗ್ಗೆ ತಿಳಿಯಲು ಶಿಕ್ಷಕರನ್ನು ಭೇಟಿ ಮಾಡಿದರು. ಇತರ ದೊಡ್ಡ ಶಾಲೆಗಳೊಂದಿಗೆ ಸ್ಪರ್ಧಿಸಲು ವಿದ್ಯಾರ್ಥಿಗಳಿಗೆ ಅಗತ್ಯವಿರುವ ಶಾಲೆಗಳ ಕೊರತೆಯನ್ನು ನೀಗಿಸಲು ಮುಂದಾದರು. ಕಳೆದ 5 ತಿಂಗಳಿನಿಂದ ಟ್ರಕ್ ಚಾಲಕರು ತಮ್ಮ ದುಡಿಮೆಯಲ್ಲಿ ಹಣ ಕೊಡುಗೆ ನೀಡುತ್ತಿದ್ದಾರೆ. 

ಕಳೆದ ತಿಂಗಳು ರಾಜರತ್ನ ಸದಸ್ಯರು ಎರಡು ಆಂಡ್ರಾಯ್ಡ್ ಟಿವಿ ಸೆಟ್ ಗಳನ್ನು ಶಾಲೆಗೆ ಕೊಡುಗೆಯಾಗಿ ನೀಡಿದ್ದಾರೆ. ಈಗ ಶಾಲೆಯಲ್ಲಿ ನಲಿ ಕಲಿ ತರಗತಿಗಳು, ಕಪ್ಪು ಹಲಗೆಗಳು ಮತ್ತು ಸಿಂಕ್ ಇದೆ. ಶಾಲೆಯ ಮೂಲಸೌಕರ್ಯಗಳನ್ನು ಸುಧಾರಿಸಲು ಹೆಚ್ಚಿನ ಕೊಡುಗೆ ನೀಡಲು ಸದಸ್ಯರು ನಿರ್ಧರಿಸಿದ್ದಾರೆ.

ನಾರಾಯಣಪುರ ಗ್ರಾಮಸ್ಥರಾದ ರಾಜು ಮತ್ತು ಶರಣು, ಆರಂಭದಲ್ಲಿ ಲಾರಿ ಚಾಲಕರ ಗುಂಪೊಂದು ಇದನ್ನು ಆರಂಭಿಸಿರುವುದು ಅಚ್ಚರಿ ಮೂಡಿಸಿತ್ತು. ಬಡ ವಿದ್ಯಾರ್ಥಿಗಳು ಮತ್ತು ಸರ್ಕಾರಿ ಶಾಲೆಗಳಿಗಾಗಿ ಏನನ್ನಾದರೂ ಮಾಡಲು ಯೋಚಿಸಿದ ಎಲ್ಲಾ ಆರು ಟ್ರಕ್ ಚಾಲಕರಿಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ.

ಟ್ರಕ್ ಚಾಲಕರು ದಿನನಿತ್ಯದ ಕೆಲಸವನ್ನು ಹುಡುಕುವುದು ಎಷ್ಟು ಕಷ್ಟ ಎಂದು ಅವರಿಗೆ ತಿಳಿದಿದೆ. ಅವರ ತೊಂದರೆಗಳು ಮತ್ತು ಚಿಂತೆಗಳ ನಡುವೆ, ಅವರು ಶಾಲೆಗೆ ಸಹಾಯ ಮಾಡುತ್ತಿದ್ದಾರೆ, ಆದ್ದರಿಂದ ನಾವು ಅವರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇವೆ. ಸ್ಪೋಕನ್ ಇಂಗ್ಲಿಷ್ ಕೋರ್ಸ್ ಖಂಡಿತವಾಗಿಯೂ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗ ಮಾಡಲು ಅಥವಾ ಅವರ ಉದ್ಯೋಗಗಳಲ್ಲಿ ಸಹಾಯ ಮಾಡುತ್ತದೆ. ಈ ಹಿಂದೆ ವಿದ್ಯಾರ್ಥಿಗಳು ಸ್ಪೋಕನ್ ಇಂಗ್ಲಿಷ್ ತರಗತಿಗಳಿಗೆ ಬೇರೆ ನಗರ, ಪಟ್ಟಣಗಳಿಗೆ ಹೋಗಿ ಭಾರಿ ಶುಲ್ಕ ಪಾವತಿಸಬೇಕಿತ್ತು. ಈಗ, ಅವರು ಅದನ್ನು ಹಳ್ಳಿಯಲ್ಲಿ ಉಚಿತವಾಗಿ ಕಲಿಯಬಹುದು ಎನ್ನುತ್ತಾರೆ.

ಸರಕಾರಿ ಶಾಲೆಗೆ ನೆರವು ನೀಡುವ ವಿಚಾರ ಪ್ರಸ್ತಾಪಿಸಿದ ಸದಸ್ಯ ಕಲ್ಲಯ್ಯ ಹಿರೇಮಠ, ನಮ್ಮ ಗ್ರಾಮ ಅತಂತ್ರ ಪ್ರದೇಶದಲ್ಲಿದ್ದು, ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಲು ಹರಸಾಹಸ ಪಡಬೇಕಾಗಿದೆ. ಆದ್ದರಿಂದ ನಾವು ಹಳ್ಳಿಯ ನಿರ್ಗತಿಕರಿಗೆ ಸಹಾಯ ಮಾಡುವ ಸಂಸ್ಥೆಯ ಕಲ್ಪನೆಯನ್ನು ರೂಪಿಸಿದ್ದೇವೆ. ನಮ್ಮ ಸಂಸ್ಥೆಯು ಆರು ಸದಸ್ಯರೊಂದಿಗೆ ಪ್ರಾರಂಭವಾಯಿತು, ಅದು ಈಗ 12 ಕ್ಕೆ ದ್ವಿಗುಣಗೊಂಡಿದೆ. ಗ್ರಾಮಸ್ಥರು ಸಹ ನಮಗೆ ಸಹಕಾರ ಮತ್ತು ಸಹಾಯ ಮಾಡುತ್ತಿದ್ದಾರೆ.

ನಾವು ತಲಾ 500 ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ ಪ್ರಾರಂಭಿಸಿದ್ದೇವೆ. ಈಗ, ಪ್ರತಿ ತಿಂಗಳು ನಾವು ಯಾವುದೇ ಖಾಸಗಿ ಶಾಲೆಗಳಿಗೆ ಸಮಾನವಾಗಿ ಮೂಲಸೌಕರ್ಯಗಳನ್ನು ತರಲು ಪ್ರಯತ್ನಿಸಲು ಸರ್ಕಾರಿ ಶಾಲೆಗೆ ಸ್ವಲ್ಪ ಮೊತ್ತವನ್ನು ನೀಡುತ್ತೇವೆ. ಪಂಚಾಯಿತಿ ಸದಸ್ಯರಾದ ಶೋಭಾ ಗದಗಿನಮಠ, ತನುಜಾ ಹಾದಿಮನಿ, ರಾಜೇಸಾಬ್ ನದಾಫ ಅವರು ಸಹ ಬೆಂಬಲ ನೀಡುತ್ತಿದ್ದಾರೆ. ಹತ್ತಿರದ ಹಳ್ಳಿಗಳು ಸಹ ನಮ್ಮ ಕೆಲಸದಿಂದ ಸ್ಫೂರ್ತಿ ಪಡೆದಿವೆ. ಅವರು ತಮ್ಮ ವಿದ್ಯಾರ್ಥಿಗಳಿಗಾಗಿ ಕೆಲವು ಉಪಕ್ರಮಗಳನ್ನು ಸಹ ಯೋಜಿಸುತ್ತಿದ್ದಾರೆ ಎಂದರು. 

ಭಾಷಾ ಪಾಠಗಳು: ಬೇಸಿಗೆ ಶಿಬಿರದ ಬಗ್ಗೆ ಯೋಚಿಸುತ್ತಿರುವಾಗ ರಾಜರತ್ನ ಸದಸ್ಯರು ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲಿಷ್ ಕೋರ್ಸ್ ಏಕೆ ಆರಂಭಿಸಬಾರದು ಎಂದು ಯೋಚಿಸಿದರು. ಇದು ವಿದ್ಯಾರ್ಥಿಗಳು ಯಾವುದೇ ಪಟ್ಟಣ ಅಥವಾ ನಗರದಲ್ಲಿ ತಮ್ಮ ವೃತ್ತಿಜೀವನವನ್ನು ಮುಂದುವರಿಸಲು ಸಹಾಯ ಮಾಡುತ್ತದೆ. ಏಪ್ರಿಲ್ 1 ರಂದು ಪ್ರಾರಂಭವಾದ ತರಗತಿಗಳಿಗೆ ಕಟ್ಟಡವನ್ನು ಹುಡುಕಲು ಗ್ರಾಮ ಪಂಚಾಯತ್ ಸದಸ್ಯರು ಮತ್ತು ಇತರ ಗ್ರಾಮಸ್ಥರು ಸಹಾಯ ಮಾಡಿದರು ಸುಮಾರು 50 ವಿದ್ಯಾರ್ಥಿಗಳು ತರಬೇತಿ ಪಡೆದಿದ್ದಾರೆ.

SCROLL FOR NEXT