ಪ್ರಧಾನಿ ಮೋದಿ ಮತ್ತು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ 
ವಿಶೇಷ

ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ: ಭಾರತದ ಮೇಲೆ ಕೆನಡಾ ಆರೋಪ.. ಜಸ್ಟಿನ್ ಟ್ರುಡೋ ಹೇಳಿಕೆ ಕುರಿತು ತಿಳಿಯಬೇಕಾದ ಅಂಶಗಳು

ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ವಿಚಾರವಾಗಿ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಭಾರತದ ವಿರುದ್ಧ ಮಾಡಿರುವ ಆರೋಪಗಳು ಉಭಯ ದೇಶಗಳ ನಡುವಿನ ಸಂಬಂಧದ ಮೇಲೆ ಗಂಭೀರ ಕರಿನೆರಳು ಬೀರುವಂತೆ ಮಾಡಿದೆ.

ನವದೆಹಲಿ: ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ವಿಚಾರವಾಗಿ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಭಾರತದ ವಿರುದ್ಧ ಮಾಡಿರುವ ಆರೋಪಗಳು ಉಭಯ ದೇಶಗಳ ನಡುವಿನ ಸಂಬಂಧದ ಮೇಲೆ ಗಂಭೀರ ಕರಿನೆರಳು ಬೀರುವಂತೆ ಮಾಡಿದೆ.

ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ವಿಚಾರದಲ್ಲಿ ಭಾರತದ ಕೈವಾಡವಿದೆ ಎಂಬ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಅವರ ಆರೋಪ ಇದೀಗ ಉಭಯ ದೇಶಗಳ ನಡುವಿನ ಸಂಬಂಧದ ಮೇಲೆ ದೊಡ್ಡ ಪರಿಣಾಮ ಬೀರುವಂತೆ ಮಾಡಿದೆ. ಟ್ರುಡೋ ಹೇಳಿಕೆ ಬೆನ್ನಲ್ಲೇ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಉಭಯ ದೇಶಗಳೂ ರಾಜತಾಂತ್ರಿಕರು ಮತ್ತು ಅಧಿಕಾರಿಗಳ ಉಚ್ಛಾಟನೆ ಮಾಡಿವೆ.

ಜೂನ್‌ ತಿಂಗಳಲ್ಲಿ ಹತ್ಯೆಯಾಗಿದ್ದ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಟ್ರುಡೋ ಗಂಭೀರ ಅರೋಪ ಮಾಡಿದ್ದಾರೆ. ಈ ಬಗ್ಗೆ ಅಲ್ಲಿನ ಸಂಸತ್‌ನಲ್ಲಿ ನಡೆದ ತುರ್ತು ಅಧಿವೇಶನದಲ್ಲಿ ಮಾತನಾಡಿದ್ದ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ, ನಿಜ್ಜರ್‌ ಹತ್ಯೆ ಹಿಂದೆ ಭಾರತೀಯ ಏಜೆಂಟ್‌ಗಳ ಕೈವಾಡವಿದೆ ಅನ್ನೋದಕ್ಕೆ ನಮ್ಮ ಸರ್ಕಾರದ ಬಳಿ ಸಾಕ್ಷಿಗಳಿವೆ ಎಂದು ಹೇಳಿದ್ದಾರೆ. ಜೊತೆಗೆ ನಮ್ಮ ನೆಲದ ಮೇಲೆ ನಡೆದ ಹತ್ಯೆಯಲ್ಲಿ ಬೇರೆ ದೇಶದ ಸರ್ಕಾರಗಳು ಭಾಗಿಯಾಗಿರೋದನ್ನ ಒಪ್ಪಿಕೊಳ್ಳೋಕೆ ಸಾಧ್ಯವಿಲ್ಲ. ಇದರಿಂದ ನಮ್ಮ ಸಾರ್ವಭೌಮತ್ವ ಹಾಗೂ ಪ್ರಜಾಪ್ರಭುತ್ವದ ನಿಯಮಗಳ ಉಲ್ಲಂಘನೆಯಾಗುತ್ತದೆ. ಅಲ್ಲದೆ ಇತ್ತೀಚೆಗೆ G20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿಯವರ ಬಳಿ ಈ ವಿಚಾರವನ್ನ ಪ್ರಸ್ತಾಪಿಸಿದ್ದೆ ಎಂದು ಟ್ರುಡೋ ಹೇಳಿದ್ದಾರೆ. 

ಇನ್ನು ಅತ್ತ ನಿಜ್ಜರ್‌ ಹತ್ಯೆಗೆ ಸಂಬಂಧಿಸಿದಂತೆ ಸರ್ಕಾರ ಕಠಿಣ ನಿಲುವು ತಾಳಿದೆ. ಈ ಹಿನ್ನಲೆಯಲ್ಲಿ ಭಾರತದ ಹಿರಿಯ ಗುಪ್ತಚರ ಅಧಿಕಾರಿಯನ್ನ ಕೆನಡಾದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಕೆನಡಾ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಹೇಳಿದ್ದಾರೆ. 

ಇತ್ತ ಕೆನಡಾದ ಆರೋಪಕ್ಕೆ ಭಾರತ ಪ್ರತಿಕ್ರಿಯಿಸಿದ್ದು, ಈ ಆರೋಪಗಳು ಆಧಾರರಹಿತ ಮತ್ತು ಉದ್ದೇಶಪೂರ್ವಕ ಅಂತ ತಿರಸ್ಕರಿಸಿದ್ದು ಮಾತ್ರವಲ್ಲದೇ ಕೆನಡಾದ ನಡೆಯನ್ನು ತೀವ್ರವಾಗಿ ಟೀಕಿಸಿರುವ ಭಾರತ, ಭಯೋತ್ಪಾದಕರಿಗೆ ಸಾರ್ವಜನಿಕವಾಗಿ ಸಿಂಪತಿ ತೋರಿಸೋದು ಕಳವಳಕಾರಿ ವಿಷಯ ಅಂತ ಹೇಳಿದೆ. ಈ ರೀತಿ ಆಧಾರರಹಿತ ಆರೋಪ ಮಾಡುವ ಮೂಲಕ ಕೆನಡಾ ಖಲಿಸ್ತಾನಿ ಭಯೋತ್ಪಾದಕರು ಮತ್ತು ಉಗ್ರಗಾಮಿಗಳ ಮೇಲಿದ್ದ ಗಮನವನ್ನ ಬದಲಿಸಲು ಬಯಸುತ್ತಿದೆ. ಅಲ್ಲದೆ ಕೆನಡಾದಲ್ಲಿ ಆಶ್ರಯ ಪಡೆದಿರುವ ಈ ಉಗ್ರರಿಂದ ಭಾರತದ ಸಾರ್ವಭೌಮತೆಗೆ ಹಾಗೂ ಸಮಗ್ರತೆಗೆ ಬೆದರಿಕೆ ಹಾಕ್ತಿವೆ. ಆದರೆ ಕೆನಡಾ ಸರ್ಕಾರ ಈ ವಿಷಯದಲ್ಲಿ ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನೆ ಇರೋದು ಅತಿದೊಡ್ಡ ಕಳವಳದ ಸಂಗತಿ ಅಂತ ಭಾರತದ ವಿದೇಶಾಂಗ ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. 

ಜೊತೆಗೆ ಕೊಲೆ, ಮಾನವ ಕಳ್ಳಸಾಗಣೆ ಮತ್ತು ಭಯೋತ್ಪಾದನೆಯಂತ ಕೃತ್ಯಗಳಿಗೆ ಕೆನಡಾದಲ್ಲಿ ಜಾಗ ನೀಡಲಾಗಿದೆ. ಕೂಡಲೇ ಎಲ್ಲಾ ರೀತಿಯ ಭಾರತ ವಿರೋಧಿ ಕೃತ್ಯಗಳನ್ನ ನಿಲ್ಲಿಸುವಂತೆ ಮಾಡ್ಬೇಕು. ಖಲಿಸ್ತಾನಿ ಉಗ್ರರ ವಿರುದ್ಧ ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಭಾರತ ಆಗ್ರಹಿಸಿದೆ. ಮಾತ್ರವಲ್ಲದೇ ಕೆನಡಾ ನಡೆಗೆ ಪ್ರತಿಯಾಗಿ ಭಾರತದಲ್ಲಿರುವ ಕೆನಡಾದ ಉನ್ನತದ ರಾಜತಾಂತ್ರಿಕ ಅಧಿಕಾರಿಯನ್ನು ಉಚ್ಛಾಟನೆ ಮಾಡಿದ್ದು, ಇನ್ನೈದು ದಿನದಲ್ಲಿ ದೇಶ ತೊರೆಯುವಂತೆ ಸೂಚಿಸಿದೆ.  ಈ ಬಗ್ಗೆ ಮಾಹಿತಿ ನೀಡಿರುವ ಭಾರತ ವಿದೇಶಾಂಗ ಇಲಾಖೆ, ಭಾರತ ಸರ್ಕಾರದ ನಿರ್ಧಾರದ ಬಗ್ಗೆ ತಿಳಿಸಲು ಕೆನಡಾದ ಹೈ ಕಮಿಷನರ್‌ ಕ್ಯಾಮರಾನ್‌ ಮೆಕೇ ಅವರನ್ನು ಕರೆಸಲಾಗಿತ್ತು. ಈ ವೇಳೆ ಉಚ್ಛಾಟಿತ ಅಧಿಕಾರಿ 5 ದಿನದ ಒಳಗೆ ಭಾರತವನ್ನ ತೊರೆಯಬೇಕು ಎಂದು ತಿಳಿಸಲಾಗಿದೆ ಅಂತ ಹೇಳಿಕೆಯಲ್ಲಿ ತಿಳಿಸಿದೆ.

ಅಮೆರಿಕ ಪ್ರತಿಕ್ರಿಯೆ
ಟ್ರುಡೋ ಅವರ ಆರೋಪವನ್ನು ಗಂಭೀರವಾಗಿ ಪರಗಿಣಿಸಿರುವ ಅಮೆರಿಕ, ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಘಟನೆ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ಕೆನಡಾದೊಂದಿಗೆ ನಿಕಟವಾಗಿ ಸಂಪರ್ಕದಲ್ಲಿ ಇರುತ್ತೇವೆ. ಕೆನಡಾದ ತನಿಖೆ ಮುಂದುವರೆದು ಅಪರಾಧಿಗಳಿಗೆ ಶಿಕ್ಷೆ ಕೊಡಿಸೋದು ಮುಖ್ಯವಾಗಿದೆ ಎಂದು ಅಮೆರಿಕ ನ್ಯಾಷನಲ್‌ ಸೆಕ್ಯುರಿಟಿ ಕೌನ್ಸಿಲ್‌ ವಕ್ತಾರೆ ಆಡ್ರಿನ್‌ ವ್ಯಾಟ್ಸನ್‌ ಹೇಳಿದ್ದಾರೆ.

ಜಿ20 ವೇಳೆಯಲ್ಲಿ ಮುಖಭಂಗ, ಟ್ರುಡೋ ಸೇಡಿನ ಕ್ರಮ?
ಅಂದ್ಹಾಗೆ ಇದೇ ತಿಂಗಳು ಭಾರತದಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಟ್ರುಡು ಬಂದಾಗ ಪ್ರಧಾನಿ ನರೇಂದ್ರ ಮೋದಿ ಕೆನಡಾದಲ್ಲಿನ ಭಾರತ ವಿರೋಧಿ ಖಲಿಸ್ತಾನಿ ಚಟುವಟಿಕೆಗಳ ಕುರಿತು ಆಕ್ಷೇಪ ಎತ್ತಿದ್ದರು. ಜಾಗತಿಕ ವೇದಿಕೆಯಲ್ಲೇ ಕೆನಡಾ ಸರ್ಕಾರದ ನಡೆ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಟ್ರುಡೋ ಅವರ ವಿಮಾನ ತಾಂತ್ರಿಕ ದೋಷದಿಂದ ಕೈಕೊಟ್ಟು ಅವರಿಗೆ ಮತ್ತೆ ಮುಜುಗರವನ್ನುಂಟು ಮಾಡಿತ್ತು. ಭಾರತ ವಿಮಾನ ನೀಡುತ್ತೇವೆ ಎಂದು ಹೇಳಿತ್ತಾದರೂ ಅದನ್ನು ಟ್ರುಡೋ ತಿರಸ್ಕರಿಸಿದ್ದರು. ಆದರೆ 2 ದಿನವಾದರೂ ಅವರ ವಿಮಾನ ರಿಪೇರಿಯಾಗಲಿಲ್ಲ. ಅವರ ಕರೆದೊಯ್ಯಲು ಬರಬೇಕಿದ್ದ ಸೇನಾ ವಿಮಾನ ಕೂಡ ತಾಂತ್ರಿಕ ದೋಷದಿಂದ ಕೆಟ್ಟು ನಿಂತು 2 ದಿನ ತಡವಾಗಿ ಆಗಮಿಸಿತ್ತು. ವಿಮಾನ ಕೈಕೊಟ್ಟ ಪರಿಣಾಮ ಟ್ರುಡೋ ಸುಮಾರು 36 ಗಂಟೆಗಳ ಕಾಲ ಭಾರತದಲ್ಲೇ ಉಳಿದುಕೊಂಡು ಭಾರಿ ಅಪಮಾನ ಎದುರಿಸಿದ್ದರು. ಈ ಕಾರಣಕ್ಕೆ ಕೆನಡಾ ಮಾಧ್ಯಮಗಳು ಹಾಗೂ ವಿರೋಧ ಪಕ್ಷಗಳು ಟ್ರುಡು ಅವರನ್ನ ಟೀಕಿಸಿದ್ದರು. 

ಯಾರು ಈ ಹರ್ದೀಪ್ ಸಿಂಗ್ ನಿಜ್ಜರ್‌
ಹರ್ದೀಪ್‌ ಸಿಂಗ್ ನಿಜ್ಜರ್‌ ಖಲಿಸ್ತಾನಿ ಟೈಗರ್‌ ಫೋರ್ಸ್‌ ಮತ್ತು Sikhs For Justice (SFJ) ಉಗ್ರ ಸಂಘಟನೆಯ ಮುಖ್ಯಸ್ಥನಾಗಿದ್ದ. ಪಂಜಾಬ್‌ನ ಜಲಂಧರ್‌ನ ಮೂಲದವನಾಗಿದ್ದು, 1997ರಲ್ಲಿ ಕೆನಡಾಗೆ ಪಲಾಯನ ಮಾಡಿದ್ದ. ಇನ್ನು 2007ರಲ್ಲಿ ಪಂಜಾಬ್‌ನ ಚಿತ್ರ ಮಂದಿರ ಮೇಲೆ ಸ್ಫೋಟಕ ದಾಳಿ ಸೇರಿದಂತೆ ಹಲವು ಕೇಸ್‌ಗಳಲ್ಲಿ ಭಾರತಕ್ಕೆ ಮೋಸ್ಟ್‌ ವಾಂಟೆಡ್‌ ಉಗ್ರನಾಗಿದ್ದ. ಈತನನ್ನ ಕೆನಡಾದ ಬ್ರಿಟಿಷ್‌ ಕೊಲಂಬಿಯಾದ ಸರ್ರೆಯಲ್ಲಿರುವ ಸಿಖ್‌ ಸಾಂಸ್ಕೃತಿಕ ಕೇಂದ್ರದ ಹೊರಗೆ ಜೂನ್‌ 18ರಂದು ಅಪರಿಚಿತ ಬಂದೂಕುದಾರಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಇದಾದ ಬಳಿಕೆ ಕೆನಡಾದಲ್ಲಿ ಭಾರತ ವಿರೋಧಿ ಚಟುವಟಿಕೆಗಳು ಜಾಸ್ತಿಯಾಗಿವೆ. ಅಷ್ಟೆ ಅಲ್ದೆ ಪ್ರಧಾನಿ ಮೋದಿ, ಅಮಿತ್‌ ಶಾ, ಎಸ್‌, ಜೈಶಂಕರ್‌ ಹಾಗೂ ಕೆನಡಾದಲ್ಲಿರುವ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳಿಕೆ ಜೀವ ಬೆದರಿಕೆ ಹಾಕುತ್ತಿದ್ದಾರೆ.

ಕೆನಡಾದಲ್ಲಿ ಸಿಖ್ಖರು
ಕೆನಡಾದಲ್ಲಿ ಸಿಖ್ ಧರ್ಮವು ಸುಮಾರು 800,000ಕ್ಕೂ ಅಧಿಕ ಅನುಯಾಯಿಗಳನ್ನು ಹೊಂದಿದೆ, 2021 ರ ಕೆನಡಾ ಜನಗಣತಿ ಪ್ರಕಾರ ಕೆನಡಾದ ಒಟ್ಟಾರೆ ಜನಸಂಖ್ಯೆಯ 2.1% ರಷ್ಟು ಸಿಖ್ ಸಮುದಾಯವರಿದ್ದಾರೆ, ಇದು ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮತ್ತು ನಾಲ್ಕನೇ-ಅತಿದೊಡ್ಡ ಧಾರ್ಮಿಕ ಗುಂಪಾಗಿದೆ. ಕೆನಡಾದಲ್ಲಿ ಅತಿ ದೊಡ್ಡ ಸಿಖ್ ಜನಸಂಖ್ಯೆಯು ಒಂಟಾರಿಯೊದಲ್ಲಿ ಕಂಡುಬರುತ್ತದೆ, ನಂತರ ಬ್ರಿಟಿಷ್ ಕೊಲಂಬಿಯಾ ಮತ್ತು ಆಲ್ಬರ್ಟಾ ಇವೆ. 2021 ರ ಜನಗಣತಿಯ ಪ್ರಕಾರ, ಕೆನಡಾದ ಅರ್ಧಕ್ಕಿಂತ ಹೆಚ್ಚು ಸಿಖ್ಖರು 4 ನಗರಗಳಲ್ಲಿ ಸಿಖ್ಖರು ವಾಸವಾಗಿದ್ದಾರೆ. ಬ್ರಾಂಪ್ಟನ್ ನಲ್ಲಿ 163,260 ಸಿಖ್ಖರಿದ್ದು, ಸರ್ರೆ ನಲ್ಲಿ 154,415, ಕ್ಯಾಲ್ಗರಿ 49,465, ಮತ್ತು ಎಡ್ಮಂಟನ್ 41,385 ಸಿಖ್ಖರು ನೆಲೆಸಿದ್ದಾರೆ. ಹೀಗಾಗಿ ಭಾರತದ ನಂತರ ಕೆನಡಾ ದೇಶವು 2ನೇ ಅತಿದೊಡ್ಡ ಸಿಖ್ಖರ ನೆಲೆಯಾಗಿದೆ. ಕೆನಡಾ ಭಾರತದ ನಂತರ ವಿಶ್ವದ ಎರಡನೇ ಅತಿದೊಡ್ಡ ಸಿಖ್ ಜನಸಂಖ್ಯೆಯನ್ನು ಹೊಂದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT