ಬೆಂಗಳೂರು: ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರುವ ಎಂಬ ಮಾತಿನಂತೆ, ವಿದೇಶದಲ್ಲಿದ್ದುಕೊಂಡೆ ಕನ್ನಡದ ಕಂಪನ್ನು ಪಸರಿಸುತ್ತಿದೆ ದುಬೈನಲ್ಲಿರುವ ಈ 'ಕನ್ನಡ ಮಿತ್ರರು' ಸಂಘ.
ಬೆಳಗೆದ್ದು ಕನ್ನಡದಲ್ಲೇ ವ್ಯವಹರಿಸುವ ನಾವೇ ಭಾಷೆಯ ಬಗ್ಗೆ ಯೋಚಿಸುವುದು ಕಡಿಮೆ. ಆದರೆ, ದುಬೈ ನಲ್ಲಿ ಭಾಷೆಯನ್ನು ಹರಡುವುದು ಸುಲಭದ ಮಾತಲ್ಲ. ಕನ್ನಡ ಮಿತ್ರರು ಸಂಘ ಈ ನಿಟ್ಟಿನಲ್ಲಿ ಪರಿಶ್ರಮ ಪಟ್ಟು, ಭಾಷೆ ಮೇಲಿನ ಪ್ರೀತಿಯನ್ನು ಮೆರೆಯುತ್ತಿದೆ.
ದುಬೈನಲ್ಲಿ ವಾಸಿಸುವ ಕನ್ನಡಿಗರ ಗುಂಪೊಂದು ದುಬೈಗೆ ಕೆಲಸಕ್ಕಾಗಿ ವಲಸೆ ಬಂದಿರುವ ಕನ್ನಡಿಗ ಪೋಷಕರ ಮಕ್ಕಳಿಗೆ ಕನ್ನಡ ಕಲಿಸುವ ಪ್ರಯತ್ನ ಮಾಡುತ್ತಿದೆ.
2014ರಲ್ಲಿ ದುಬೈನಲ್ಲಿ ಕನ್ನಡ ಪಾಠಶಾಲೆಯನ್ನು ಪ್ರಾರಂಭಿಸಲಾಯಿತು. ಕರ್ನಾಟಕದ ಶಶಿಧರ್ ನಾಗರಾಜಪ್ಪ ಮತ್ತು ದುಬೈನಲ್ಲಿರುವ ಅವರ ಸ್ನೇಹಿತರು ದುಬೈನಲ್ಲಿರುವ ಎನ್ಆರ್ಐ ಮಕ್ಕಳಿಗೆ ಮಾತೃಭಾಷೆ ಕನ್ನಡದಲ್ಲಿ ಜ್ಞಾನದ ಕೊರತೆಯಿದೆ ಎಂದು ಚರ್ಚಿಸುತ್ತಿದ್ದರು. ಈ ವೇಳೆ ಬಂದ ಆಲೋಚನೆ ಇದಾಗಿತ್ತು. ಒಬ್ಬ ವ್ಯಕ್ತಿಗೆ ಆತನ ಮಾತೃಭಾಷೆ ತಿಳಿದಿಲ್ಲರುವುದು ತುಂಬಾ ದುಃಖಕರ ವಿಚಾರ. ಏಕೆಂದರೆ ಅದು ಕೇವಲ ಒಂದು ಭಾಷೆಯಲ್ಲ, ಆದರೆ ನಮ್ಮ ಸಂಸ್ಕೃತಿಯ ಭಾಗವಾಗಿದೆ. ಇದನ್ನು ಅರಿತ ಶಶಿಧರ್ ಮತ್ತು ಇತರ 50 ಜನರು ಮಕ್ಕಳು ಕನ್ನಡ ಭಾಷೆಯನ್ನು ಓದಲು, ಬರೆಯಲು ಮತ್ತು ಮಾತನಾಡಲು ಸಾಧ್ಯವಾಗುವಂತೆ ಮಾಡಲು ಕನ್ನಡ ಪಾಠಶಾಲೆ ಎಂಬ ಶಾಲೆಯನ್ನು ಪ್ರಾರಂಭಿಸಲು ನಿರ್ಧರಿಸಿದರು ಎಂದು ದುಬೈನಲ್ಲಿರುವ ಕನ್ನಡ ಮಿತ್ರರು ಸಂಘದ ಸದಸ್ಯ ಉದಯ್ ಕಿರಣ್ ಅವರು ಹೇಳಿದ್ದಾರೆ.
ಇಲ್ಲಿನ ಬಹುತೇಕ ಕುಟುಂಬಗಳಲ್ಲಿರುವ ಪೋಷಕರು ಕೆಲಸಕ್ಕೆ ಹೋಗುತ್ತಾರೆ. ಹೀಗಾಗಿ ಮಕ್ಕಳಿಗೆ ಕನ್ನಡ ಕಲಿಸಲು ಸಾಧ್ಯವಾಗುತ್ತಿಲ್ಲ. ಅವರಿಗೆ ಸಮಯವೂ ಸಿಗುತ್ತಿಲ್ಲ. ಹೀಗಾಗಿ ನಾವು ಶನಿವಾರದಂದು ಮಾತ್ರ ಕನ್ಡಡ ತರಗತಿಗಳನ್ನು ನಡೆಸುತ್ತಿದ್ದೇವೆ. ಈ ತರಗತಿ ಉಚಿತವಾಗಿದೆ. ವಿದ್ಯಾರ್ಥಿಗಳಿಗೆ ಕನ್ನಡ ಕಲಿಸಲು, ಪಠ್ಯಪುಸ್ತಕ ಒದಗಿಸಲು ಒಂದು ಪೈಸೆಯನ್ನೂ ತೆಗೆದುಕೊಳ್ಳುತ್ತಿಲ್ಲ. 2014ರಲ್ಲಿ ದುಬೈನ JSS ಶಾಲೆಯಲ್ಲಿ ತರಗತಿಗಳನ್ನು ಪ್ರಾರಂಭಿಸಲಾಯಿತು. ಇಲ್ಲಿ 2017ರವರೆಗೂ ತರಗತಿಗಳು ಮುಂದುವರೆಯಿತು. 2019ರಲ್ಲಿ ಬಿಲ್ವಾ ಇಂಡಿಯಾ ಶಾಲೆಗೆ ಸ್ಥಳಾಂತರಿಸಲಾಯಿತು. ಇಲ್ಲಿ 2020ರವರೆಗೆ ಮುಂದುವರೆಯಿತು. ಕೋವಿಡ್ ನಂತರ ಆನ್ಲೈನ್ ತರಗತಿಗಳನ್ನು ನಡೆಸಲಾಯಿತು. 2021ರಿಂದ ಜೂಮ್ ಪ್ಲಾಟ್ಫಾರ್ಮ್ನಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕನ್ನಡ ತರಗತಿಗಳನ್ನು ಕನ್ನಡ ಮಿತ್ರರು ತಂಡ ಗಂಭೀರವಾಗಿ ಪರಿಗಣಿಸಿದ್ದು, ಇದಕ್ಕಾಗಿ ಅಗತ್ಯವಿರುವ ಪಠ್ಯಕ್ರಮವನ್ನೂ ಕೂಡ ವಿನ್ಯಾಸಗೊಳಿಸಿದೆ. ಮೂರು ಹಂತದಲ್ಲಿ ಪಠ್ಯಕ್ರಮವಿದ್ದು, ಮೊದಲನೇ ಹಂತದಲ್ಲಿ ನಾವು ವಿದ್ಯಾರ್ಥಿಗಳಿಗೆ ವರ್ಣಮಾಲೆಗಳು, ಸಂಖ್ಯೆಗಳು ಮತ್ತು ಕವಿತೆಗಳನ್ನು ಕಲಿಸುತ್ತೇವೆ. ಹಂತ 2 ರಲ್ಲಿ, ಕನ್ನಡ ಪದಗಳು ಮತ್ತು ವಾಕ್ಯಗಳ ರಚನೆಯನ್ನು ಕಲಿಸುತ್ತೇವೆ. ಹಂತ 3 ರಲ್ಲಿ ಕನ್ನಡ ವ್ಯಾಕರಣ, ಪ್ರಬಂಧ ಮತ್ತು ಪತ್ರ ಬರೆಯುವಿಕೆಯನ್ನು ಕಲಿಸುತ್ತೇವೆ.
ಈ ತರಗತಿಗಳ ಅವಧಿ ನವೆಂಬರ್ ನಿಂದ ಏಪ್ರಿಲ್ ವರೆಗೆ ಇರುತ್ತದೆ. ಈ ತರಗತಿಗಳ ಅಂತ್ಯದ ವೇಳೆಗೆ, ವಿದ್ಯಾರ್ಥಿಗಳು ಭಾಷೆಯನ್ನು ಕಲಿಯುತ್ತಾರೆಂದು ಮಾಹಿತಿ ನೀಡಿದ್ದಾರೆ.
ಎಷ್ಟು ಮಂದಿ ಆಸಕ್ತಿ ತೋರುತ್ತಿದ್ದಾರೆಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆರಂಭದಲ್ಲಿ ನಾವು 45 ವಿದ್ಯಾರ್ಥಿಗಳಿಗೆ ಮಾತ್ರ ಕಲಿಸಲು ಪ್ರಾರಂಭಿಸಿದ್ದೆವು. ನಂತರ ಈ ಸಂಖ್ಯೆ 60ಕ್ಕೆ ಏರಿಕೆಯಾಯಿತು. 2022ರ ಹೊತ್ತಿಗೆ ಈ ಸಂಖ್ಯೆ 640ಕ್ಕೆ ತಲುಪಿತು. ನಂತರ 870ಕ್ಕೆ ತಲುಪಿ, ಇದೀಗ 1,258 ಮಕ್ಕಳು ಕನ್ನಡ ಕಲಿಯುತ್ತಿದ್ದಾರೆಂದು ಹೇಳಿದ್ದಾರೆ.
ಕನ್ನಡ ಮಿತ್ರರು ಮಾಡಿದ ಈ ಉಪಕ್ರಮವು ಅನೇಕ ವಿದ್ಯಾರ್ಥಿಗಳು ಕನ್ನಡದಲ್ಲಿ ಮಾತನಾಡಲು, ಸಂಸ್ಕೃತಿ ಮತ್ತು ಭಾಷೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿದೆ. ಮುಖ್ಯವಾಗಿ ಮಗು ಕರ್ನಾಟಕದಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಬಯಸಿದರೆ ಭಾಷೆಯನ್ನು ಕಲಿಕೆಯು ಅವರಿಗೆ ಹೆಚ್ಚಿನ ಪ್ರಯೋಜನವಾಗುತ್ತಿದೆ.
ನಾವು ಸಾಧಿಸಿದ ಪ್ರಮುಖ ಮೈಲಿಗಲ್ಲು ಎಂದರೆ, 2024 ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಪ್ರಾಧಿಕಾರದ ಹೆಸರನ್ನು ಮುದ್ರಿಸಲು ಮತ್ತು ವರ್ಷದ ಕೊನೆಯಲ್ಲಿ ನಾವು ವಿದ್ಯಾರ್ಥಿಗಳಿಗೆ ನೀಡುವ ಪ್ರಮಾಣಪತ್ರದಲ್ಲಿ ರಾಜ್ಯದ ಚಿಹ್ನೆಯಾದ ಗಂಡ ಬೆರುಂಡ ಬಳಸಲು ನಮಗೆ ಅನುಮತಿ ನೀಡಿದ್ದು.
ಕನ್ನಡ ಕಲಿತ ನಂತರ 2023-24 ರಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ನೀಡಲಾದ ಎಲ್ಲಾ ಪ್ರಮಾಣಪತ್ರಗಳಲ್ಲೂ ರಾಜ್ಯ ಚಿಹ್ನೆ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಹೆಸರನ್ನು ಮುದ್ರಿಸಲಾಗಿತ್ತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಸಂಘವು ಎನ್ಆರ್ಐ ಮಕ್ಕಳಿಗೆ ಕನ್ನಡ ಕಲಿಸುವುದರ ಜೊತೆಗೆ ಕರ್ನಾಟಕದ ಸರ್ಕಾರಿ ಪ್ರೌಢಶಾಲೆಗಳಿಗೆ ಲ್ಯಾಪ್ಟಾಪ್, ಡಿಜಿಟಲ್ ಪ್ರೊಜೆಕ್ಟರ್, ಕಲರ್ ಪ್ರಿಂಟರ್ಗಳನ್ನು ಒದಗಿಸುವ ಮೂಲಕ ಇತರರಿಗೆ ಪ್ರೇರಣೆಯಾಗಿದ್ದಾರೆ.
ಕನ್ನಡ ಮಿತ್ರರು ಸಂಘದಲ್ಲಿ ಶಶಿಧರ್ ನಾಗರಾಜಪ್ಪ ಅಧ್ಯಕ್ಷರಾಗಿದ್ದು, ಸಿದ್ದಲಿಂಗೇಶ್ ಜಿ ಆರ್, ಉಪಾಧ್ಯಕ್ಷ, ರೂಪಾ ಶಶಿಧರ್, ಕನ್ನಡ ಪಾಠಶಾಲೆ ಶಿಕ್ಷಕಿ, ಸುನಿಲ್ ಗವಾಸ್ಕರ್, ಕಾರ್ಯದರ್ಶಿ, ನಾಗರಾಜ್ ರಾವ್, ಖಜಾಂಚಿ ಹಾಗೂ ಶಶಿಧರ ಮುಂಡರಗಿ ಅವರು ಜಂಟಿ ಕಾರ್ಯದರ್ಶಿಯಾಗಿದ್ದಾರೆ.