2016ರಲ್ಲಿ ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ಎದುರಾದ ಬೇಸಿಗೆ ಜನರು ಪರದಾಡುವಂತೆ ಮಾಡಿತ್ತು. ಕುಡಿಯುವ ನೀರುಗಾಗಿ ಜನರಲ್ಲಿ ಹಾಹಾಕಾರ ಶುರುವಾಗಿತ್ತು. ಈ ಬೇಸಿಗೆ ಅನೇಕ ಗ್ರಾಮಗಳಿಗೆ ಕಠಿಣ ಪರೀಕ್ಷೆಯಾಗಿ ಪರಿಣಮಿಸಿತ್ತು. ನೀರಿಗಾಗಿ ಜನರು ಹಾತೊರೆಯುತ್ತಿದ್ದಾಗ, ಸಹಾಯಕ್ಕಾಗಿ ಕಾಯುವುದಕ್ಕಿಂತ ಸಮಸ್ಯೆಗೆ ಪರಿಹಾರ ಹುಡುಕುವ ದಿಟ್ಟ ನಿರ್ಧಾರಕ್ಕೆ ಇಲ್ಲಿನ ಯುವಕರು ಬಂದರು. ಈ ವೇಳೆ ಹುಟ್ಟಿಕೊಂಡಿದ್ದೇ ‘ಪ್ಯಾಸ್ ಫೌಂಡೇಶನ್’.
ಬೆಳಗಾವಿಯಲ್ಲಿರುವ ಸೇಂಟ್ ಪೌಲ್ಸ್ ಶಾಲೆಯ ಏಳು ಮಂದಿ ಸಮಾನ ಮನಸ್ಸಿನ ಹಳೆಯ ವಿದ್ಯಾರ್ಥಿಗಳ ನಡುವೆ ಪ್ರಾರಂಭವಾದ ಸಂಭಾಷಣೆ ಈ ಸಂಸ್ಥೆ ಕಾರ್ಯರೂಪಕ್ಕೆ ಬರುವಂತೆ ಮಾಡಿತು. ಈ ವಿದ್ಯಾರ್ಥಿಗಳ ಗುಂಪು 15 ನಿಮಿಷಗಳಲ್ಲಿ, 60,000 ರೂ.ಗಳನ್ನು ಸಂಗ್ರಹಿಸಿ ಟ್ಯಾಂಕರ್ಗಳ ಮೂಲಕ ಜನರಿಗೆ ಕುಡಿಯುವ ನೀರನ್ನು ಪೂರೈಸಲು ಪ್ರಾರಂಭಿಸಿತು.
ಬಳಿಕ ಈ ಪ್ರಯತ್ನವು ಶಾಶ್ವತ ಪರಿಹಾರವಲ್ಲ ಎಂಬುದನ್ನು ಅರಿತು ಅವರು. ಶಾಶ್ವತ ಪರಿಹಾರ ಕಂಡು ಹಿಡಿಯಬೇಕು. ಜೀವಜಲವನ್ನು ಪುನರುಜ್ಜೀವನಗೊಳಿಸಬೇಕೆಂದು ಚಿಂತನೆ ನಡೆಸಿದರು.
ಕೆರೆ-ಕೊಳಗಳ ಪುನರುಜ್ಜೀವನ: ಬತ್ತಿದ ಮೂಲಗಳಿಗೆ ಜೀವ
ಬೆಳಗಾವಿಯಲ್ಲಿ ಅನೇಕ ಕೆರೆಗಳು ಮತ್ತು ಬಾವಿಗಳು ಇದ್ದರೂ ಅವುಗಳು ನಿರ್ಲಕ್ಷ್ಯದಿಂದಾಗಿ ಮಣ್ಣು ಮತ್ತು ಹೂಳುಗಳಿಂದ ನಾಶಗೊಂಡಿವೆ. ಇದನ್ನು ಅರಿತ ಪ್ಯಾಸ್ ಫೌಂಡೇಶನ್ ಈ ಜಲ ಮೂಲಗಳನ್ನು ಪುನರುಜ್ಜೀವನಗೊಳಿಸುವ ಮಹತ್ವಾಕಾಂಕ್ಷಿ ಕಾರ್ಯಕ್ಕೆ ಕೈಹಾಕಿತು.
ಪ್ಯಾಸ್ ಫೌಂಡೇಶನ್ ಇಲ್ಲಿವರೆಗೆ 14 ಕೆರೆಗಳು ಮತ್ತು ಐದು ಪುರಾತನ ಬಾವಿಗಳನ್ನು ಪುನರುಜ್ಜೀವನಗೊಳಿಸಿದೆ. ಖಾನಾಪುರ ತಾಲೂಕಿನ ಹಲಶಿವಾಡಿ ಗ್ರಾಮದಲ್ಲಿ ಕೆರೆ ಮತ್ತು ನಗರದ ನಜರ್ ಕ್ಯಾಂಪ್ ಪ್ರದೇಶದಲ್ಲಿ ಬಾವಿ ಪುನರುಜ್ಜೀವನ ಕಾರ್ಯ ಮುಂದುವರಿದಿದೆ.
ಪ್ಯಾಸ್ನ ಪ್ರಮುಖ ಯೋಜನೆಗಳು ಖಾನಾಪುರ ತಾಲ್ಲೂಕಿನ ಪ್ರಭುನಗರ, ಬೈಲ್ಹೊಂಗಲ ತಾಲ್ಲೂಕಿನ ಬೈಲ್ವಾಡ್, ಭಾವಿಹಾಲ್, ಬೆಳಗಾವಿ ತಾಲ್ಲೂಕಿನ ಮಚ್ಚೆ, ಮನ್ನಿಕೇರಿ, ಸುಲಗಾ, ಅರಳಿಕಟ್ಟಿ, ಮನ್ನಿಕೇರಿ, ಚಿಕ್ಕೋಡಿ ತಾಲ್ಲೂಕಿನ ನಾಗರಮುನೋಳಿ ಮತ್ತು ಕಿತ್ತೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಈ ಯೋಜನೆಗಳು ಜಲಮಟ್ಟ ಹೆಚ್ಚಿಸಲು, ಕೃಷಿಗೆ ಸಹಾಯ ಮಾಡಲು ಮತ್ತು ಕುಡಿಯುವ ನೀರಿನ ಲಭ್ಯತೆಯನ್ನು ಸುಧಾರಿಸಲು ಮಹತ್ವದ ಪಾತ್ರವಹಿಸುತ್ತಿವೆ.
ಧೋಬಿ ಘಾಟ್: ಕಸದ ಗುಡ್ಡದಿಂದ ಕೆರೆಯಾಗಿ ಪರಿವರ್ತನೆ
ಬೆಳಗಾವಿಯ ಧೋಬಿ ಘಾಟ್ ಯೋಜನೆ ಪ್ಯಾಸ್ ಫೌಂಡೇಶನ್ನ ನವೀನತೆ ಮತ್ತು ಸಂಕಲ್ಪದ ಸಂಕೇತವಾಗಿದೆ. ಹಿಂದೆ ಕಸದ ಗುಡ್ಡವಾಗಿದ್ದ ಈ ಪ್ರದೇಶದಲ್ಲಿ ಎರಡು ಏಕರೆ ಜಾಗದಲ್ಲಿ ಕೃತಕ ಕೆರೆ ನಿರ್ಮಿಸಲಾಗಿದೆ. ಈಗ ಇದು ಸ್ಥಳೀಯ ಜೀವ ವೈವಿಧ್ಯತೆಯನ್ನು ಬೆಂಬಲಿಸುತ್ತಿದ್ದು, ಈ ರೂಪಾಂತರವು ನಿರ್ಲಕ್ಷಿತ ಜಾಗಗಳ ಸಾಮರ್ಥ್ಯದ ಬಗ್ಗೆ ಜನರ ದೃಷ್ಟಿಕೋನವನ್ನು ಬದಲಾಯಿಸಿದೆ.
ಋತುಮಾನದ ತಂತ್ರ: ಮಳೆಗಾಲಕ್ಕೂ ಮುನ್ನ ಸಿದ್ಧತೆ
ಪ್ಯಾಸ ಫೌಂಡೇಶನ್ ಕಾರ್ಯವಿಧಾನವು ವೈಜ್ಞಾನಿಕ ಮತ್ತು ಪರಿಣಾಮಕಾರಿಯಾಗಿದ್ದು, ಮಳೆಗಾಲದ ನಂತರದಿಂದ ಬೇಸಿಗೆಯ ಆರಂಭದವರೆಗೆ ಕೆರೆಗಳನ್ನು ಆಳಗೊಳಿಸುವುದು, ಮಣ್ಣು ತೆಗೆಯುವುದು ಮತ್ತು ನೈಸರ್ಗಿಕ ಜಲ ಸಂಗ್ರಹ ವ್ಯವಸ್ಥೆಗಳನ್ನು ಬಲಪಡಿಸುವ ಕಾರ್ಯಗಳನ್ನು ನಡೆಸಲಾಗುತ್ತದೆ. ಇದರಿಂದ ಮಳೆಗಾಲದಲ್ಲಿ ನೀರಿನ ಸಂಗ್ರಹ ಮತ್ತು ಅಂತರ್ಜಲ ಮರುಪೂರಣವನ್ನು ಹೆಚ್ಚಾಗುತ್ತದೆ.
ನಾಲೆ ಪುನರುಜ್ಜೀವನ
ಪ್ಯಾಸ್ ಫೌಂಡೇಶನ್ ಈಗ ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿ ಹರಿಯುವ 6 ಕಿಮೀ ಉದ್ದದ ನಾಲೆಯನ್ನು ಪುನರುಜ್ಜೀವನಗೊಳಿಸಲು ಯೋಜನೆ ರೂಪಿಸಿದೆ. ಮಣ್ಣು ತೆರವುಗೊಳಿಸಿ ಮಳೆನೀರು ಸಂಗ್ರಹ ವ್ಯವಸ್ಥೆ ನಿರ್ಮಿಸುವುದರ ಜೊತೆಗೆ, ಹಸಿರು ವನಸಂಪತ್ತು ಬೆಳೆಸುವ ಯೋಜನೆಯನ್ನೂ ಹೊಂದಿದೆ. ಮನರಂಜನೆಯೊಂದಿಗೆ ಪರಿಸರ ವಿಜ್ಞಾನವನ್ನು ಸಂಯೋಜಿಸಲು ದೋಣಿ ವಿಹಾರವನ್ನು ಪರಿಚಯಿಸಲು ಪ್ರಯತ್ನ ನಡೆಸುತ್ತಿದೆ.
ಕಂದಕ ಪುನರುಜ್ಜೀವನ
ಈ ಪ್ಯಾಸ್ ಫೌಂಡೇಶನ್'ನ ಮಹತ್ವಾಕಾಂಕ್ಷಿ ಯೋಜನೆ ಎಂದರೆ ಬೆಳಗಾವಿ ಕೋಟೆಯ ಸುತ್ತಲಿನ ಐತಿಹಾಸಿಕ ಕಂದಕವನ್ನು ಪುನರುಜ್ಜೀವನಗೊಳಿಸುವುದು. ಆದರೆ, ಈ ಭೂಮಿ ರಕ್ಷಣಾ ಇಲಾಖೆಯ ವ್ಯಾಪ್ತಿಯಲ್ಲಿ ಇರುವುದರಿಂದ ಅನುಮತಿಗಾಗಿ ಸಂಸ್ಥೆ ಕಾಯುತ್ತಿದೆ.
"ಈ ಯೋಜನೆಗಳು ದೊಡ್ಡದಾಗಿದ್ದು, ಸರ್ಕಾರ ಮತ್ತು ಜನರ ಸಹಕಾರದ ಅಗತ್ಯವಿದೆ. ಅವು ಬೆಳಗಾವಿ ನಗರವನ್ನು ಸುಂದರಗೊಳಿಸಲು ಮಾತ್ರವಲ್ಲದೆ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ಪ್ಯಾಸ್ನ ಅಧ್ಯಕ್ಷ ಡಾ. ಮಾಧವ ಪ್ರಭು ಅವರು ಹೇಳಿದ್ದಾರೆ.
ಜನರ ವಿಶ್ವಾಸವೇ ಶಕ್ತಿ
ಪ್ಯಾಸ ಫೌಂಡೇಶನ್ ತನ್ನ ಈ ಯಶಸ್ಸಿಗೆ ಜನರ ವಿಶ್ವಾಸವೇ ಪ್ರಮುಖ ಕಾರಣವಾಗಿದೆ ಎಂದು ಹೇಳಿದ್ದು, ಸಹಕಾರಿ ಇಲಾಖೆ ಅಡಿಯಲ್ಲಿ ನೋಂದಾಯಿತವಾಗಿರುವ ಸಂಸ್ಥೆ ದಾನಿಗಳು, ಕಾರ್ಪೊರೇಟ್ ಸಂಸ್ಥೆಗಳು ಮತ್ತು ಸಂಘಟನೆಗಳಿಂದ ಆರ್ಥಿಕ ಹಾಗೂ ತಾಂತ್ರಿಕ ಬೆಂಬಲವನ್ನು ಪಡೆದು, ಪಾರದರ್ಶಕತೆಯನ್ನು ಕಾಯ್ದುಕೊಂಡಿದೆ.
ಚಿಕ್ಕ ಪ್ರಯತ್ನದಿಂದ ದೊಡ್ಡ ಬದಲಾವಣೆ
ಏಳು ಸ್ನೇಹಿತರ ಚಿಕ್ಕ ಪ್ರಯತ್ನದಿಂದ ಆರಂಭವಾದ ಪ್ಯಾಸ್ ಫೌಂಡೇಷನ್ ಸಂಸ್ಥೆ ಇಂದು ದೊಡ್ಡ ಸಂಘಟನೆಯಾಗಿ ಬೆಳೆದಿದೆ. ಸಂಸ್ಥೆ ಕೇವಲ ನೀರಿನ ಸಮಸ್ಯೆಗೆ ಪರಿಹಾರ ನೀಡುವುದಷ್ಟೇ ಅಲ್ಲ, ಪರಿಸರ ಕಾಪಾಡುವ ಮಹತ್ವವನ್ನು ಹಾಗೂ ಜನರ ಒಗ್ಗಟ್ಟಿನ ಪಾತ್ರವನ್ನು ತೋರಿಸಿ ಪ್ರೇರಣಾದಾಯಕ ಉದಾಹರಣೆಯಾಗಿದೆ.
ಇದು ಕೇವಲ ನೀರಿನ ಸಮಸ್ಯೆಯನ್ನು ಪರಿಹರಿಸುವುದಲ್ಲ, ಪರಿಸರ ಸಂರಕ್ಷಣೆ ಮತ್ತು ಸಮುದಾಯದ ಭಾಗವಹಿಸುವಿಕೆಯ ಮಹತ್ವವನ್ನು ತೋರಿಸುವ ಪ್ರೇರಣಾದಾಯಕ ಮಾದರಿಯಾಗಿದೆ. ಬತ್ತಿದ ಭೂಮಿಗೆ ಹನಿ ಹನಿಯಾಗಿ ಜೀವ ತುಂಬಿದ ಈ ಪ್ರಯತ್ನ, ಪ್ರತೀಯೊಬ್ಬರಿಗೂ ಮಾದರಿಯಾಗುವಂತಹ ಒಂದು ಯಶೋಗಾಥೆಯಾಗಿದೆ.
ಪ್ಯಾಸ್ ಪದಾಧಿಕಾರಿಗಳು
ಡಾ. ಮಾಧವ ಪ್ರಭು, ಅಧ್ಯಕ್ಷರು; ಅಭಿಮನ್ಯು ಡಾಗಾ, ಉಪಾಧ್ಯಕ್ಷರು; ಪ್ರೀತಿ ಕೋರೆ; ದೊಡ್ಡ್ವಾಡ್, ಕಾರ್ಯದರ್ಶಿ; ಅವಧೂತ್ ಸಮಂತ್, ಜಂಟಿ ಕಾರ್ಯದರ್ಶಿ; ಮತ್ತು ನಿರ್ದೇಶಕರಾದ ದೀಪಕ್ ಔಲ್ಕರ್, ಲಕ್ಷ್ಮೀಕಾಂತ್, ಸೂರ್ಯಕಾಂತ್ ಹಿಂಡಲಗೇಕರ್ ಮತ್ತು ರೋಹನ್ ಕುಲಕರ್ಣಿ