ಸ್ವಾತಂತ್ರ್ಯ ಬಂದು 80 ವರ್ಷ ಆಯ್ತು, ಇಷ್ಟು ವರ್ಷದಲ್ಲಿ ದೇಶದ ಮೂಲೆ ಮೂಲೆಯಲ್ಲೂ ಆಧುನಿಕ ಆಡಳಿತ, ಕಾನೂನು ಮತ್ತು ತಂತ್ರಜ್ಞಾನ ವ್ಯವಸ್ಥೆ ತಲುಪಿದೆ. ಆದರೆ, ಭಾರತೀಯ ಭೂಪಟದೊಳಗೇ ಇದ್ದರೂ ಯಾವುದೇ ಸರ್ಕಾರಕ್ಕೂ ತಲೆಬಾಗದ, ತನಗೆ ಬೇಕಾದಂತೆ ಸ್ವತಂತ್ರವಾಗಿ ಬಾಳುವ ಒಂದು ರಹಸ್ಯ ದ್ವೀಪವಿದೆ ಎಂಬ ಸಂಗತಿ ಅನೇಕರಿಗೆ ತಿಳಿದಿಲ್ಲ. ಇಲ್ಲಿ ಆಳ್ವಿಕೆ ಮಾಡೋದು ಇರಲಿ, ಈ ಜನರನ್ನು ಸಂಪರ್ಕ ಕೂಡ ಮಾಡಲು ಸಾಧ್ಯವಾಗಿಲ್ಲ; ಸಂಪರ್ಕಿಸಲು ಹೋದವರು ಕೂಡ ಮಸಣ ಸೇರಿದ್ದಾರೆ! ಇಲ್ಲಿದೆ ನೋಡಿ ಭಾರತದ ಆ ಸಾವಿನ ದ್ವೀಪ ಬಗ್ಗೆ ಮಾಹಿತಿ:
ಯಾವುದು ಆ ದ್ವೀಪ?
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹದ ನೀಲಿ ಸಾಗರದ ಮಧ್ಯೆ ಒಂದು ವಿಚಿತ್ರ ಹಾಗೂ ಭಯಾನಕ ಪ್ರಪಂಚವಿದೆ. ಅದುವೇ, ಆಧುನಿಕ ತಂತ್ರಜ್ಞಾನ ಮತ್ತು ನಾಗರಿಕ ಸಮಾಜದಿಂದ ಸಂಪೂರ್ಣವಾಗಿ ದೂರವಿರುವ, ಭಾರತದ ಅತ್ಯಂತ ಅಪಾಯಕಾರಿ ಮತ್ತು ನಿಗೂಢ ಸ್ಥಳವೆಂದೇ ಕರೆಯಲ್ಪಡುವ ನಾರ್ತ್ ಸೆಂಟಿನೆಲ್ ದ್ವೀಪ!
60,000 ವರ್ಷಗಳಿಂದ ಒಂಟಿ ಜೀವನ!
ಇಲ್ಲಿ ವಾಸಿಸುವ 'ಸೆಂಟಿನೆಲಿಸ್' (Sentinelese) ಬುಡಕಟ್ಟು ಜನಾಂಗದವರು ಕಳೆದ 60,000 ವರ್ಷಗಳಿಂದ ಹೊರ ಜಗತ್ತಿನ ಯಾವುದೇ ಸಂಪರ್ಕವಿಲ್ಲದೆ ಸಂಪೂರ್ಣ ಒಂಟಿಯಾಗಿ ಬದುಕುತ್ತಿದ್ದಾರೆ. ಅದರಲ್ಲೂ, ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲೂ ಇವರು ಇತಿಹಾಸ ಪೂರ್ವ ಕಾಲದ ಮಾನವರಂತೆಯೇ ಬೇಟೆಯಾಡುತ್ತಾ ಜೀವನ ಸಾಗಿಸುತ್ತಿದ್ದಾರೆ.
ಕಂಡರೆ ಸಾಕು ಬಾಣದ ದಾಳಿ
ಈ ದ್ವೀಪದ ಜನರಿಗೆ ಹೊರ ಜಗತ್ತಿನ ಮಾನವರೆಂದರೆ ದ್ವೇಷ ಮತ್ತು ಭಯ. ಅವರ ದ್ವೀಪದ ಹತ್ತಿರ ಹೆಲಿಕಾಪ್ಟರ್ ಹಾರಿದರೂ ಅಥವಾ ದೋಣಿಗಳು ಹೋದರೂ ಇವರು ಮಾರಕಾಸ್ತ್ರಗಳು, ಬಿಲ್ಲು-ಬಾಣ ಹಾಗೂ ಈಟಿಗಳಿಂದ ಭೀಕರವಾಗಿ ದಾಳಿ ಮಾಡುತ್ತಾರೆ.
ಹೋದವರು ಯಾರೂ ಮರಳಿಲ್ಲ!
2006 ರಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದ ಇಬ್ಬರು ಭಾರತೀಯ ಮೀನುಗಾರರ ದೋಣಿ ಆಕಸ್ಮಿಕವಾಗಿ ಈ ದ್ವೀಪದ ತೀರಕ್ಕೆ ಕೊಚ್ಚಿಹೋದಾಗ, ಆ ಬುಡಕಟ್ಟು ಜನರು ಅವರಿಬ್ಬರನ್ನು ಹತ್ಯೆ ಮಾಡಿದರು.
2018 ರಲ್ಲಿ ಜಾನ್ ಅಲೆನ್ ಚೌ ಎಂಬ ಅಮೆರಿಕಾದ 26 ವರ್ಷದ ಕ್ರಿಶ್ಚಿಯನ್ ಧರ್ಮಪ್ರಚಾರಕ ಅಕ್ರಮವಾಗಿ ಈ ದ್ವೀಪಕ್ಕೆ ಪ್ರವೇಶಿಸಲು ಯತ್ನಿಸಿದಾಗ, ಸೆಂಟಿನೆಲಿಸ್ಗಳು ಆತನನ್ನು ಬಾಣಗಳಿಂದ ಹೊಡೆದು ಕೊಂದಿದ್ದರು. ಅವರ ಶವಗಳನ್ನು ಮರಳಿ ತರಲು ಕೂಡ ಭಾರತ ಸರ್ಕಾರಕ್ಕೆ ಸಾಧ್ಯವಾಗಿಲ್ಲ.
ಕಾನೂನುಬದ್ಧ ನಿಷೇಧ
ಕೇಂದ್ರ ಸರ್ಕಾರವು ಈ ದ್ವೀಪದ ಸುತ್ತಲಿನ 5 ಕಿಲೋಮೀಟರ್ ಪ್ರದೇಶವನ್ನು ನಿಷೇಧಿತ ವಲಯ ಎಂದು ಘೋಷಿಸಿದೆ. ಜೊತೆಗೆ ಭಾರತೀಯ ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ ಸದಾ ಇಲ್ಲಿ ಕಾವಲು ಕಾಯುತ್ತಿರುತ್ತಾರೆ.
ನಿಷೇಧಕ್ಕೆ ಮುಖ್ಯ ಕಾರಣವೇನು?
ಇದು ಕೇವಲ ಪ್ರವಾಸಿಗರ ರಕ್ಷಣೆಗಾಗಿ ಮಾತ್ರವಲ್ಲ, ಆ ಬುಡಕಟ್ಟು ಜನರ ರಕ್ಷಣೆಗೂ ಹೌದು. ಅವರು ಸಾವಿರಾರು ವರ್ಷಗಳಿಂದ ಪ್ರತ್ಯೇಕವಾಗಿ ಇರುವುದರಿಂದ, ನಮ್ಮಲ್ಲಿರುವ ಸಾಮಾನ್ಯ ಜ್ವರ, ಕೆಮ್ಮಿನಂತಹ ವೈರಸ್ಗಳನ್ನು ಎದುರಿಸುವ ರೋಗನಿರೋಧಕ ಶಕ್ತಿ ಅವರಿಗಿಲ್ಲ. ನಾವು ಅವರ ಬಳಿ ಹೋದರೆ ನಮ್ಮ ಮೂಲಕ ಹರಡುವ ಸಣ್ಣ ಕಾಯಿಲೆಯಿಂದಲೂ ಆ ಇಡೀ ಜನಾಂಗವೇ ವಿನಾಶದ ಅಂಚಿಗೆ ತಲುಪಬಹುದು.