ಕರ್ನಾಟಕದ 116 ವರ್ಷದ ಅಜ್ಜಿಯ ಭಕ್ತಿ ಎಲ್ಲರ ಗಮನ ಸೆಳೆದಿದ್ದು, ಅವರು ಇತ್ತೀಚೆಗೆ ತಿರುಮಲದ ಅಲಿಪಿರಿ ಪಾದಯಾತ್ರೆ ಮಾರ್ಗವನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿ ಭಕ್ತರಿಗೆ ಸ್ಫೂರ್ತಿಯಾಗಿದ್ದಾರೆ.
ತಿರುಪತಿ ವೆಂಕಟೇಶ್ವರ ಸ್ವಾಮಿ ಮೇಲಿನ ಅಚಲ ಭಕ್ತಿಯಿಂದ ಪ್ರೇರಿತರಾದ ಅವರು, ಕುಟುಂಬ ಸದಸ್ಯರ ಬೆಂಬಲದೊಂದಿಗೆ ಶೇಷಾಚಲ ಬೆಟ್ಟಗಳ ಮೂಲಕ ಸುಮಾರು 9 ಕಿ.ಮೀ. ದೂರದ, 3,550 ಮೆಟ್ಟಿಲುಗಳಿರುವ ಅಲಿಪಿರಿ ಪಾದಯಾತ್ರೆ ಮಾರ್ಗವನ್ನು ಯಶಸ್ವಿಯಾಗಿ ಏರಿದರು.
116 ರ ಇಳಿವಯಸ್ಸಿನಲ್ಲಿ ನಡೆಯುವುದೇ ಸವಾಲಾಗಿರುವಾಗ ಅವರು ತೋರಿದ ಅಚಲ ಸಂಕಲ್ಪ ಮತ್ತು ಭಕ್ತಿಯು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಅಪರೂಪದ ದೃಶ್ಯವನ್ನು ಅಲ್ಲಿದ್ದ ಭಕ್ತರು ತಮ್ಮ ಮೊಬೈಲ್ಗಳಲ್ಲಿ ಸೆರೆಹಿಡಿದಿದ್ದಾರೆ.
ಕೈಯಲ್ಲಿ ಊರುಗೋಲು ಹಿಡಿದು, ಮಕ್ಕಳ ಕೈಹಿಡಿದು ಹೆಜ್ಜೆ ಹಾಕುತ್ತಿದ್ದ ಅವರ ವಿಡಿಯೊಗಳು ಫೇಸ್ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅವರ ಅಚಲ ಭಕ್ತಿ ಮತ್ತು ದೃಢಸಂಕಲ್ಪವನ್ನು ಕಂಡು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.