ನವದೆಹಲಿ: `ನನಗೆ ರು.16 ಕೋಟಿ ಕೊಡಿ ಅಂತ ನಾನು ಯಾರಲ್ಲೂ ಬೇಡಿರಲಿಲ್ಲ. ಇತರ ಆಟಗಾರರಂತೆಯೇ ನಾನೂ ಈ ಬಾರಿಯ ಐಪಿಎಲ್ ನಲ್ಲಿ ಹರಾಜಾಗಿದ್ದೇನಷ್ಟೇ.. ಡೆಲ್ಲಿ ತಂಡದ ಬ್ಯಾಟ್ಸ್ಮನ್ ಯುವರಾಜ್ ಸಿಂಗ್ ಇಂಥದ್ದೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈ ಬಾರಿಯ ಐಪಿಎಲ್ ಆಟಗಾರರ ಹರಾಜಿಗೂ ಕೆಲವೇ ದಿನಗಳ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯಿಂದ ಗೇಟ್ ಪಾಸ್ ಪಡೆದಿದ್ದ ಅವರಿಗೆ ಡೆಲ್ಲಿ ತಂಡ 16 ಕೋಟಿ ಕೊಟ್ಟು ಖರೀದಿಸಿತ್ತು. ಆದರೆ, ಈಗ ಡೆಲ್ಲಿ ತಂಡದ ಪರ ಆಡಿದ್ದು ಅಷ್ಟಕ್ಕಷ್ಟೇ. ಇದೇ ಕಾರಣಕ್ಕಾಗಿ ತಮ್ಮನ್ನು ಪ್ರಶ್ನಿಸಿದ ಸುದ್ದಿಗಾರರಿಗೆ ಹೀಗೆ ಖಾರವಾಗಿ ಅವರು ಪ್ರತಿಕ್ರಿಯಿಸಿದ್ದಾರೆ. ಇಷ್ಟೇ ಅಲ್ಲದೇ ತಮ್ಮ ಮಾತುಗಳನ್ನು ಮುಂದುವರೆಸಿ, ನಾನು ರು.16 ಕೋಟಿ ಪಡೆದದ್ದಕ್ಕೇ ನನ್ನ ಮೇಲೆ ಒತ್ತಡವಿಲ್ಲ. ನನಗೆ ಕ್ರಿಕೆಟ್ ಅಂದರೆ ಜೀವ. ಹಣ ಸಿಗದೇ ಇದ್ದಿದ್ದರೂ ನಾನು ಈ ಬಾರಿಯ ಐಪಿಎಲ್ ನಲ್ಲಿ ಆಡುತ್ತಿದ್ದೆ ಎಂದು ಅವರು ಹೇಳಿದ್ದಾರೆ.