ಕ್ರೀಡೆ

ಪಂದ್ಯದ ದಿಕ್ಕು ಬದಲಿಸಿದ ರೈನಾ, ಧೋನಿ ವಿಕೆಟ್

Vishwanath S

ಮುಂಬೈ: ಮುಂಬೈ ಇಂಡಿಯನ್ಸ್ ವಿರುದ್ಧ ಮಹತ್ವದ ಹಂತದಲ್ಲಿ ಹರ್ಭಜನ್ ಸಿಂಗ್, ಸತತ ಎರಡು ಎಸೆತಗಳಲ್ಲಿ ಸುರೇಶ್ ರೈನಾ ಹಾಗೂ ಮಹೇಂದ್ರ ಸಿಂಗ್ ಧೋನಿ ಅವರ ವಿಕೆಟ್ ಪಡೆದಿದ್ದು, ಪಂದ್ಯದ ದಿಕ್ಕನ್ನು ಬದಲಿಸಿತು ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೋಚ್ ಸ್ಟೀಫನ್ ಫ್ಲೇಮಿಂಗ್ ತಿಳಿಸಿದ್ದಾರೆ.

ಈ ಸೋಲು ಅತ್ಯಂತ ಕಠಿಣವಾಗಿದೆ. ಮುಂಬೈ ಇಂಡಿಯನ್ಸ್ ತಂಡ ತವರಿನ ಅಂಗಣದಲ್ಲಿ ಬಲಿಷ್ಠ ತಂಡವಾಗಿದೆ. ಅದು ಮತ್ತೊಮ್ಮೆ ಸಾಬೀತಾಗಿದೆ. ಈ ವಾತಾವರಣದಲ್ಲಿ ಎದುರಾಳಿ ತಂಡ ಅತ್ಯುತ್ತಮ ಪರಿಶ್ರಮದೊಂದಿಗೆ ಪರಿಣಾಮಕಾರಿ ಪ್ರದರ್ಶನ ನೀಡಿದೆ. ಪಂದ್ಯದಲ್ಲಿ ನಮ್ಮ ಯೋಜನೆಗಳು ನಿರೀಕ್ಷಿತ ಮಟ್ಟದಲ್ಲಿ ಫಲಿತಾಂಶ ನೀಡಲಿಲ್ಲ ಎಂದು ಫ್ಲೇಮಿಂಗ್ ಅಭಿಪ್ರಾಯಪಟ್ಟರು.

ಮುಂಬೈ ತಂಡವನ್ನು 187 ರನ್‍ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದೆವು. ಅದರೆ, 11ನೇ ಓವರ್‍ನಲ್ಲಿ ಹರ್ಭಜನ್ ಸಿಂಗ್ ಸತತ ಎರಡು ಎಸೆತಗಳಲ್ಲಿ ರೈನಾ ಮತ್ತು ಧೋನಿ ವಿಕೆಟ್ ಕಬಳಿಸಿದ್ದು, ಪಂದ್ಯ ಕೈಯಿಂದ ಜಾರುವಂತೆ ಮಾಡಿತು. ಬೃಹತ್ ಮೊತ್ತವನ್ನು ಬೆನ್ನಟ್ಟುವಾಗ ಪ್ರಮುಖ ವಿಕೆಟ್‍ಗಳು ಸತತವಾಗಿ ಕಳೆದುಕೊಳ್ಳುವುದು ಉತ್ತಮವಲ್ಲ ಎಂದರು. ಪ್ರಸ್ತುತ ಸ್ಥಿತಿಯಲ್ಲಿ ಆಟಗಾರರು ಆಯಾಸಗೊಂಡಿದ್ದಾರೆ.

ಈಗ ಸುಧಾರಿಸಿಕೊಳ್ಳಲು ಸಮಯವಿಲ್ಲ. ಈ ಪಂದ್ಯದಲ್ಲಿ ಗೆಲವು ದಾಖಲಿಸದಿರುವುದು ನಿರಾಸೆ ಮೂಡಿಸಿದೆ. ಆದರೆ ಮತ್ತೊಂದು ಅವಕಾಶವಿರುವುದು ತಂಡಕ್ಕೆ ಸಂತೋಷದ ಸಂಗತಿಯಾಗಿದೆ. ಮುಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ತಯಾರಿ ನಡೆಸುತ್ತೇವೆ. ನಮ್ಮ ತಂಡದ ತಪ್ಪನ್ನು ತಿದ್ದುಕೊಂಡು ಮುಂದಿನ ಪಂದ್ಯದಲ್ಲಿ ಗೆಲವು ದಾಖಲಿಸುವ ವಿಶ್ವಾಸ ನಮ್ಮಲ್ಲಿದೆ ಎಂದು ಫ್ಲೇಮಿಂಗ್ ತಿಳಿಸಿದ್ದಾಗಿ ಐಎಎನ್‍ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

SCROLL FOR NEXT