ಕ್ರೀಡೆ

ವಿಶ್ವ ಹಾಕಿ ಲೀಗ್ ಫೈನಲ್ ಟೂರ್ನಿಗೆ ಭಾರತ ತಂಡ ಪ್ರಕಟ: ಸರ್ದಾರ್ ಸಿಂಗ್ ಗೆ ನಾಯಕತ್ವ

Srinivas Rao BV

ಬೆಂಗಳೂರು: ಇದೇ ಮಾಸಾಂತ್ಯಕ್ಕೆ ವಿಶ್ವ ಹಾಕಿ ಲೀಗ್ ಫೈನಲ್ಸ್ ನಲ್ಲಿ ಭಾಗವಹಿಸಲಿರುವ ಭಾರತ ತಂಡ ಪ್ರಕಟಗೊಂಡಿದ್ದು ಸರ್ದಾರ್ ಸಿಂಗ್ ಗೆ ತಂಡದ ನಾಯಕತ್ವ ವಹಿಸಲಾಗಿದೆ.
ರಾಜ್ಯದ ಇಬ್ಬರು ಆಟಗಾರರಾದ ಎಸ್.ವಿ ಸುನಿಲ್, ವಿ.ಆರ್. ರಘುನಾಥ್ ಸೇರ್ಪಡೆಗೊಂಡಿದ್ದಾರೆ. ಆದರೆ, ರಾಜ್ಯದ ಮತ್ತಿಬ್ಬರು ಪ್ರತಿಭೆಗಳಾದ ಎಸ್.ಕೆ. ಉತ್ತಪ್ಪ ಹಾಗೂ ನಿಕಿನ್ ತಿಮ್ಮಯ್ಯ ಅವರನ್ನು ಆಯ್ಕೆ ಸಮಿತಿ ಈ ಬಾರಿ ತಂಡದಿಂದ ಕೈಬಿಟ್ಟಿದೆ. ನಿಕಿನ್ ತಿಮ್ಮಯ್ಯ ಭುಜದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದಾರೆ. ಅಂದಹಾಗೆ ಟೂರ್ನಿಯು ನ. 27ರಿಂದ ಡಿ. 6ರವರೆಗೆ ರಾಯ್ ಪುರದಲ್ಲಿ ನಡೆಯಲಿದೆ. ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದಲ್ಲಿ ನಡೆಯುತ್ತಿದ್ದ ಅಭ್ಯಾಸ ಶಿಬಿರ ಅಂತ್ಯಗೊಂಡಿದ್ದು, ತಂಡದ ಗೋಲ್‍ ಕೀಪರ್ ಪಿ.ಆರ್. ಶ್ರೀಜೇಶ್ ಉಪನಾಯಕರಾಗಿದ್ದಾರೆ.
ವಿಶ್ವ ಹಾಕಿ ಲೀಗ್‍ಗೂ ಮುನ್ನ, ಆಸ್ಟ್ರೇಲಿಯಾ ಹಾಕಿ ತಂಡ ಭಾರತಕ್ಕೆ ಆಗಮಿಸಲಿದ್ದು, ನ. 19ರಿಂದ 23ರವರೆಗೆ ನಡೆಯಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ಸರಣಿಗೂ ಮೇಲ್ಕಂಡ ತಂಡವನ್ನೇ ಪ್ರಕಟಿಸಲಾಗಿದೆ.
ಈ ಪ್ರತಿಷ್ಠಿತ ಟೂರ್ನಿಯಲ್ಲಿ ಆತಿಥೇಯ ಭಾರತ ಸೇರಿದಂತೆ ವಿಶ್ವದ ಎಂಟು ಬಲಿಷ್ಠ ತಂಡಗಳು ಭಾಗವಹಿಸುತ್ತಿವೆ. 'ಎ' ಗುಂಪಿನಲ್ಲಿ ಆಸ್ಟ್ರೇಲಿಯಾ,  ಬೆಲ್ಜಿಯಂ, ಗ್ರೇಟ್‍ಬ್ರಿಟನ್ ಹಾಗೂ ಕೆನಡಾ ತಂಡಗಳಿದ್ದರೆ, `ಬಿ' ಗುಂಪಿ ನಲ್ಲಿ ಹಾಲೆಂಡ್, ಜರ್ಮನಿ, ಅರ್ಜೆಂಟೀನಾ ಮತ್ತು ಭಾರತ ತಂಡ ಸ್ಥಾನ ಪಡೆದಿವೆ.

SCROLL FOR NEXT