ನವದೆಹಲಿ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಸೋಮವಾರ ನಡೆದ ಟಿ20 ಕ್ರಿಕೆಟ್ ಪಂದ್ಯದಲ್ಲಿ ಪ್ರೇಕ್ಷಕರು ಬಾಟಲಿ ಎಸೆದ ಪ್ರಸಂಗ ತಮಾಷೆಯಾಗಿತ್ತು ಎಂದು ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ. ನಿನ್ನೆ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾದ ಕಳಪೆ ಪ್ರದರ್ಶನವನ್ನು ನೋಡಿ ರೊಚ್ಚಿಗೆದ್ದ ಪ್ರೇಕ್ಷಕರು ಬಾಟಲಿ ಎಸೆದು ಆಕ್ರೋಶ ವ್ಯಕ್ತ ಪಡಿಸಿದ್ದರು.
ಮೊದಲು ಸ್ವಲ್ಪ ಜನ ಆಕ್ರೋಶಭರಿತರಾಗಿ ನಮ್ಮತ್ತ ಬಾಟಲಿ ಎಸೆದಿದ್ದರು. ಆಮೇಲೆ ಅದೆಲ್ಲಾ ತಮಾಷೆಗಾಗಿ ಆಗಿತ್ತು. ಇದನ್ನೆಲ್ಲಾ ತುಂಬಾ ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ. ಈ ಹಿಂದೆ ವಿಶಾಖಪಟ್ಟಣದಲ್ಲಿ ನಡೆದ ಪಂದ್ಯವೊಂದರಲ್ಲಿ ಭಾರತ ಗೆದ್ದಾಗಲೂ ಪ್ರೇಕ್ಷರು ಬಾಟಲಿ ಎಸೆದಿದ್ದದ್ದು ನನಗೆ ನೆನಪಿದೆ. ಮೊದಲು ಒಂದು ಬಾಟಲಿ, ಆಮೇಲೆ ಅದರ ಹಿಂದೆ ಬಾಟಲಿಗಳನ್ನು ಎಸೆಯುತ್ತಾ ಹೋದರು. ಅದೆಲ್ಲಾ ತಮಾಷೆಗಾಗಿ ಮಾಡಿದ್ದು ಎಂದು ಧೋನಿ ಹೇಳಿದ್ದಾರೆ.
ಇಂಥಾ ಘಟನೆಗಳು ಕ್ರಿಕೆಟಿಗರ ಭದ್ರತೆಯ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ನಾನು ನಂಬುತ್ತಿಲ್ಲ. ನಿನ್ನೆ ಪಂದ್ಯ ನೋಡಲು ಬಂದ ಕೆಲವರು ಬಾಟಲಿ ಎಸೆದಿದ್ದಾರೆ. ಆ ಹೊತ್ತಲ್ಲಿ ಭದ್ರತೆಗಾಗಿ ಆಟಗಾರರನ್ನು ಗ್ರೌಂಡ್ ನ ಮಧ್ಯಭಾಗಕ್ಕೆ ಬರುವಂತೆ ಮಾಡುವುದು ಇಲ್ಲವೇ ಗ್ರೌಂಡ್ ನಿಂದ ಹೊರಗೆ ಕಳುಹಿಸುವುದು ಸೂಕ್ತ ಎಂದು ಅಂಪೈರ್ ಗೆ ಅನಿಸಿರಬೇಕು. ಟೀಂ ಇಂಡಿಯಾ ಚೆನ್ನಾಗಿ ಆಡದೇ ಇದ್ದರೆ ಪ್ರೇಕ್ಷಕರು ಈ ರೀತಿ ಪ್ರತಿಕ್ರಯಿಸುವುದು ಸಹಜ ಎಂದ ಧೋನಿ ಅಭಿಪ್ರಾಯ ಪಟ್ಟಿದ್ದಾರೆ.
ಕಟಕ್ ನಲ್ಲಿ ನಡೆದ ಪಂದ್ಯದಲ್ಲಿ ಭಾರತದ ಕಳಪೆ ಪ್ರದರ್ಶನ ನೋಡಿ ರೊಚ್ಚಿಗೆದ್ದ ಪ್ರೇಕ್ಷಕರು ಬಾಟಲಿಗಳನ್ನು ಬಿಸಾಡಿ ಆಕ್ರೋಶ ವ್ಯಕ್ತ ಪಡಿಸಿದ್ದರು. ಈ ಕಾರಣದಿಂದ ಸುಮಾರು ಒಂದು ಗಂಟೆಗಳ ಕಾಲ ಆಟ ಸ್ಥಗಿತಗೊಂಡಿತ್ತು. ಪ್ರಸ್ತುತ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಭಾರತವನ್ನು 6 ವಿಕೆಟ್ ಗಳಿಂದ ಪರಾಭವಗೊಳಿಸಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos