ಹೈದರಾಬಾದ್: ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬೆಳ್ಳಿತಾರೆ ಪಿವಿ ಸಿಂಧು ಅವರಿಗೆ ಭವ್ಯ ಸ್ವಾಗತ ನೀಡಲಾಯಿತು.
ವಿಮಾನ ನಿಲ್ದಾಣದಲ್ಲಿ ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಚಲರಾಜಪ್ಪ ಸೇರಿದಂತೆ ರಾಜಕೀಯ ಮುಖಂಡರು, ಗಣ್ಯರು ಪಿವಿ ಸಿಂಧು ಹಾಗೂ ಕೋಚ್ ಗೋಪಿಚಂದ್ ಅವರನ್ನು ಬರ ಮಾಡಿಕೊಂಡರು. ನಂತರ ತೆರೆದ ವಾಹನದಲ್ಲಿ ಕೋಚ್ ಪುಲ್ಲೇಲ ಗೋಪಿಚಂದ್ ಹಾಗೂ ಪಿವಿ ಸಿಂಧು ಅವರನ್ನು ಮೆರವಣಿಗೆ ಮೂಲಕ ಗಚ್ಚಿಬೌಳಿ ಕ್ರೀಡಾಂಗಣಕ್ಕೆ ಕರೆದ್ಯೊಯ್ದರು. ಅಭೂತಪೂರ್ವ ಸಾಧನೆ ಮಾಡಿರುವ ಪಿವಿ ಸಿಂಧು ಅವರಿಗೆ ಗಚ್ಚಿಬೌಳಿ ಕ್ರೀಡಾಂಗಣದಲ್ಲಿ ಸನ್ಮಾನ ಹಮ್ಮಿಕೊಳ್ಳಲಾಗಿದೆ.
ಸಿಂಧು ಆಗಮನದ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳು ಸಿಂಧು ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಜಯ ಘೋಷ ಕೂಗಿದರು. ನಿಲ್ದಾಣದಲ್ಲಿ ಸೇರಿದ್ದ ತಮ್ಮ ಅಭಿಮಾನಿಗಳತ್ತ ಕೈಬೀಸಿದರು.
ಬ್ರೆಜಿಲ್ ನ ರಿಯೋ ಡಿ ಜನೈರೋದಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್ ನಲ್ಲಿ ಬೆಳ್ಳಿ ಪದಕ ಗೆದ್ದು ಪಿವಿ ಸಿಂಧುಗೆ ಇತಿಹಾಸ ನಿರ್ಮಿಸಿದ್ದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪಿ.ವಿ.ಸಿಂಧು, ನನ್ನ ಸಾಧನೆಯನ್ನು ಗುರುತಿಸಿ ಸನ್ಮಾನಿಸಿದ ರಾಜ್ಯ ಸರ್ಕಾರಕ್ಕೆ ಮತ್ತು ಎಲ್ಲ ಜನತೆಗೆ ನನ್ನ ಅಭಿನಂದನೆಗಳು. ನಿಮ್ಮ ಈ ಸ್ಫೂರ್ತಿಯೇ ನನಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಲು ಉತ್ತೇಜನ ನೀಡುತ್ತದೆ. ನನ್ನ ಬೆಂಬಲ, ಪ್ರೋತ್ಸಾಹಕ್ಕೆ ನಿಂತ ಇಡೀ ದೇಶದ ಜನತೆಗೆ ನಾನು ಆಭಾರಿಯಾಗಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಿಂಧು ಅವರ ಬ್ಯಾಡ್ಮಿಂಟನ್ ಗುರು ಪುಲ್ಲೇಲ ಗೋಪಿಚಂದ್, ತೆಲಂಗಾಣ ಸರ್ಕಾರಕ್ಕೆ ವಿಶೇಷ ಅಭಿನಂದನೆ ಹೇಳಿದರು. ದೇಶದ ಹೆಮ್ಮೆ, ಗೌರವವನ್ನು ಕಾಪಾಡುವಲ್ಲಿ ಕೊಡುಗೆ ನೀಡಿದ ಸಾಕ್ಷಿ ಮಲಿಕ್ ಮತ್ತು ಪಿ.ವಿ.ಸಿಂಧು ಅವರು ಈ ದೇಶದ ಅಪಾರ ಯುವಕ-ಯುವತಿಯರಿಗೆ ಸ್ಪೂರ್ತಿಯಾಗಲಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಗೆ ಇವರಿಬ್ಬರು ದಾರಿದೀಪವಾಗಲಿದ್ದಾರೆ ಎಂದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos