ಕ್ರೀಡೆ

ದೆಹಲಿಯಲ್ಲಿ ಕಂಚು ಪದಕ ವಿಜೇತೆ ಸಾಕ್ಷಿ ಮಲಿಕ್ ಗೆ ಭರ್ಜರಿ ಸ್ವಾಗತ

Vishwanath S

ನವದೆಹಲಿ: ರಿಯೋ ಒಲಿಂಪಿಕ್ಸ್ ಕುಸ್ತಿ ವಿಭಾಗದಲ್ಲಿ ಕಂಚು ಪದಕ ಗೆಲ್ಲುವ ಮೂಲಕ ಭಾರತದ ಪದಕದ ಬರ ನೀಗಿಸಿದ್ದ ಕುಸ್ತಿಪಟು ಸಾಕ್ಷಿ ಮಲಿಕ್ ಗೆ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು.

ಬೆಳಗ್ಗೆ 3.50ರ ಸುಮಾರಿಗೆ ದೆಹಲಿಯ ವಿಮಾನ ನಿಲ್ದಾಣಕ್ಕೆ ಬಂದು ತಲುಪಿದ ಸಾಕ್ಷಿ ಈ ವೇಳೆ ಮಾತನಾಡಿ ರಿಯೋ ಒಲಿಂಪಿಕ್ಸ್ ನಲ್ಲಿ ದೇಶಕ್ಕಾಗಿ ಪದಕ ಗೆಲ್ಲುವುದು ನನ್ನ ಬಹುದಿನಗಳ ಕನಸಾಗಿತ್ತು. ಅದಕ್ಕಾಗಿ ಕಳೆದ ಹನ್ನೆರಡು ವರ್ಷಗಳಿಂದ ಕಠಿಣ ಪರಿಶ್ರಮ ಪಟ್ಟಿದೆ. ನನ್ನ ತಪಸ್ಸಿಗೆ ಫಲ ದೊರೆತಿದೆ ಎಂದು ಹರ್ಷ ವ್ಯಕ್ತಪಡಿಸಿದ್ದು, ಸಮಸ್ತ ಭಾರತೀಯರಿಗೆ ಧನ್ಯವಾದ ಹೇಳಿದ್ದಾರೆ.

ಸಾಕ್ಷಿ ತವರೂರಾದ ರೊಹ್ಟಕ್ ಜಿಲ್ಲೆಯ ಮೊಖ್ರಾ ಹಳ್ಳಿಯಲ್ಲಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡು ಸದ್ಯ ಸಾಕ್ಷಿ ದೆಹಲಿಯಿಂದ ರೊಹ್ಟಕ್ ಗೆ ತೆರಳಿದ್ದಾರೆ.

ಬ್ರೆಜಿಲ್ ನಲ್ಲಿ ನಡೆದ ರಿಯೋ ಒಲಿಂಪಿಕ್ಸ್ ನಲ್ಲಿ ಕುಸ್ತಿ ಫ್ರೀಸ್ಟೈಲ್ 58 ಕೆಜಿ ವಿಭಾಗದಲ್ಲಿ ಭಾರತದ ಪರ ಕಂಚಿನ ಪದಕ ಗೆದ್ದು ಭಾರತದ ಪತಾಕೆಯನ್ನು ಹಾರಿಸಿದ್ದರು.

SCROLL FOR NEXT