ನವದೆಹಲಿ: ಭಾರತದ ಚೆಸ್ ಗ್ರಾಂಡ್ ಮಾಸ್ಟರ್ ವಿಶ್ವನಾಥ್ ಆನಂದ್ ನಿವೃತ್ತಿ ಸುಳಿವು ನೀಡಿದ್ದಾರೆ.
ಇತ್ತೀಚೆಗಿನ ಕಳಪೆ ನಿರ್ವಹಣೆಯಿಂದಾಗಿ 5 ಬಾರಿಯ ವಿಶ್ವ ಚಾಂಪಿಯನ್ ಆನಂದ್ ಶೀಘ್ರದಲ್ಲೇ ವಿದಾಯ ಪ್ರಕಟಿಸುವ ಚಿಂತನೆಯಲ್ಲಿದ್ದಾರೆ ಎಂದು ವರದಿಯಾಗಿದೆ.
ಬೆಲ್ಜಿಯಂನ ಲೆವುವೆನ್ ನಲ್ಲಿ ಜೂನ್ 28ರಿಂದ ಜುಲೈ 2ರವರೆಗೆ ನಡೆದ ವಿಶ್ವದ ಅಗ್ರ 10 ಎಲೈಟ್ ಆಟಗಾರರ ಚೆಸ್ ಟೂರ್ನಿಯಲ್ಲಿ ಆನಂದ್ 8ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅವರು ನಿವೃತ್ತಿಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಕಳೆದ ಮೂರು ದಶಕಗಳಿಂದ ಅಂತಾರಾಷ್ಟ್ರೀಯ ಚೆಸ್ ನಲ್ಲಿ ಮಿಂಚುತ್ತಿರುವ ವಿಶ್ವನಾಥನ್ ಆನಂದ್ ವಿಶ್ವಭೂಪಟದಲ್ಲಿ ಭಾರತೀಯ ಚೆಸ್ ಗೆ ವಿಶೇಷ ಸ್ಥಾನ ಕಲ್ಪಿಸಿಕೊಟ್ಟಿದ್ದಾರೆ. ಆನಂದ್ ಭಾರತದ ಮೊಟ್ಟಮೊದಲ ಗ್ರಾಂಡ್ ಮಾಸ್ಟರ್. ಅವರಿಂದ ಸ್ಫೂರ್ತಿ ಪಡೆದು ಇದೀಗ ಭಾರತ ಒಟ್ಟು 47 ಗ್ರಾಂಡ್ ಮಾಸ್ಟರ್ ಗಳನ್ನು ಹೊಂದಿದೆ ಎಂಬುದೇ ಇದಕ್ಕೆ ಪುಷ್ಠಿ. ಖೇಲ್ ರತ್ನ, ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಣದಂತ ಪ್ರತಿಷ್ಠಿತ ಪ್ರಶಸ್ತಿಗಳು ಅವರಿಗೆ ಒಲಿದಿವೆ.