ಕಾಂಚನಮಾಲಾ ಪಾಂಡೆ-ಅಭಿನವ್ ಬಿಂದ್ರಾ
ಬರ್ಲಿನ್: ಪ್ಯಾರಾಲಿಂಪಿಕ್ಸ್ ಈಜು ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಈಜುಗಾರ್ತಿ ಕಣ್ಣು ಕಾಣದ ಕಾಂಚನಮಾಲಾ ಪಾಂಡೆ ಅವರಿಗೆ ಸರಿಯಾದ ಸಮಯದಲ್ಲಿ ಹಣ ಸಿಗದೇ ವಿಧಿ ಇಲ್ಲದೆ ಬರ್ಲಿನ್ ನಲ್ಲಿ ಭಿಕ್ಷೆ ಬೇಡುವಂತಾ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಭಾರತದ ಶೂಟರ್ ಅಭಿನವ್ ಬಿಂದ್ರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬರ್ಲಿನ್ ನಲ್ಲಿ ನಡೆಯುತ್ತಿರುವ ಪ್ಯಾರಾಲಂಪಿಕ್ ಈಜು ಸ್ಪರ್ಧೆಯಲ್ಲಿ ಭಾಗವಹಿಸಲು ಕಾಂಚನಮಾಲಾ ಪಾಂಡೆ ಅವರು ತೆರಳಿದ್ದರು. ಅವರ ಖರ್ಚಿಗಾಗಿ ಭಾರತದ ಪ್ಯಾರಾಲಂಪಿಕ್ಸ್ ಸಮಿತಿಯ ಕಳುಹಿಸಿದ್ದ ಹಣ ಸರಿಯಾದ ಸಮಯಕ್ಕೆ ಅವರ ಕೈ ಸೇರದೆ ಬರ್ಲಿನ್ ನಲ್ಲಿ ಭಿಕ್ಷೆ ಬೇಡುವಂತಾ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಪಿಸಿಐ ವಿರುದ್ಧ ಬಿಂದ್ರಾ ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂತಹ ಪರಿಸ್ಥಿತಿಯಲ್ಲೂ ಕಾಂಚನಮಾಲಾ ಪಾಂಡೆ ಮತ್ತು ಸುಯಾಶ್ ಜಾದವ್ ಅವರು ಟೂರ್ನಿಯಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ವಿಶ್ವ ಈಜು ಚಾಂಪಿಯನ್ ಶಿಪ್ ಗೆ ಅರ್ಹತೆ ಪಡೆದಿದ್ದಾರೆ ಎಂದು ಕ್ರೀಡಾಪಟುಗಳನ್ನು ಬಿಂದ್ರಾ ಅಭಿನಂದಿಸಿದ್ದಾರೆ.
ಸರಿಯಾದ ಸಮಯಕ್ಕೆ ಕ್ರೀಡಾಪಟುಗಳಿಗೆ ಹಣ ವರ್ಗಾವಣೆ ಮಾಡದ ಪಿಸಿಐ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಕ್ರೀಡಾ ಸಚಿವ ವಿಜಯ್ ಗೊಯಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ನಾನು ಕನಸಿನಲ್ಲೂ ಊಹೆ ಮಾಡಿರಲಿಲ್ಲ. ನನ್ನ ಅದೃಷ್ಟಕ್ಕೆ ನಾನು 5 ಲಕ್ಷ ರುಪಾಯಿ ಸಾಲದ ಹಣವನ್ನು ತೆಗೆದುಕೊಂಡು ಹೋಗಿದ್ದೆ. ಹೀಗಾಗಿ ನಾನು ಟೂರ್ನಿಯಲ್ಲಿ ಭಾಗವಹಿಸಲು ಸಾಧ್ಯವಾಯಿತು ಎಂದು ಕಾಂಚನಮಾಲಾ ಅವರು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ನಾನು ಪ್ಯಾರಾಲಂಪಿಕ್ ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ವಿಶ್ವ ಈಜು ಚಾಂಪಿಯನ್ ಶಿಪ್ ಗೆ ಅರ್ಹತೆ ಪಡೆದಿದ್ದು ಇಂತಹ ಮಹತ್ವದ ವಿಷಯದ ಬಗ್ಗೆ ಪಿಸಿಐ ಯಾಕೆ ಗಮನ ಹರಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos