ನವದೆಹಲಿ: ಪ್ಯಾರಿಸ್ ನಲ್ಲಿ ಫ್ರೆಂಚ್ ಓಪನ್ ಕಿರೀಟ ಮುಡಿಗೇರಿಸಿಕೊಂಡ ಭಾರತದ ಹೆಮ್ಮೆಯ ಟೆನಿಸ್ ಪಟು , ಕರುನಾಡ ಕುವರ ರೋಹನ್ ಬೋಪಣ್ಣ ಅವರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲು ಅಖಿಲ ಭಾರತ ಟೆನಿಸ್ ಸಂಸ್ಥೆ(ಎಐಟಿಎ) ನಿರ್ಧರಿಸಿದೆ.
ಬೋಪಣ್ಣ ಅವರು ನಿನ್ನೆಯಷ್ಟೆ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದಲ್ಲಿ ಕೆನಡಾದ ಗೇಬ್ರಿಯೆಲಾ ದಬ್ರೋವ್ಸ್ಕಿ ಜೊತೆ ಗೆಲುವು ಸಾಧಿಸಿದ್ದರು. ಈ ಮೂಲಕ ಲಿಯಾಂಡರ್ ಫೇಸ್, ಮಹೇಶ್ ಭೂಪತಿ, ಸಾನಿಯಾ ಮಿರ್ಜಾ ಬಳಿಕ ಈ ಸಾಧನೆ ಮಾಡಿದ ನಾಲ್ಕನೇ ಭಾರತೀಯ ಟೆನಿಸ್ ಪಟು ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಅರ್ಜುನ ಪ್ರಶಸ್ತಿಗೆ ರೋಹನ್ ಬೋಪಣ್ಣ ಅವರನ್ನು ಹೆಸರನ್ನು ಇಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ. ಈ ಹಿಂದೆಯೂ ಹಲವು ಬಾರಿ ಅರ್ಜುನ ಪ್ರಶಸ್ತಿಗೆ ರೋಹನ್ ಬೋಪಣ್ಣ ಅವರ ಹೆಸರನ್ನು ಶಿಫಾರಸು ಮಾಡಿದ್ದೇವೆ. ಆದರೆ ಅವರ ಹೆಸರನ್ನು ಪರಿಗಣಿಸಿಲ್ಲ. ಈ ಬಾರಿ ಅವರಿಗೆ ಅರ್ಜುನ ಪ್ರಶಸ್ತಿ ನೀಡಲೇಬೇಕು ಎಂದು ಎಐಟಿಎ ಕಾರ್ಯದರ್ಶಿ ಜನರಲ್ ಹಿರೊನ್ಮೊಯ್ ಚಟರ್ಜಿ ಅವರು ಹೇಳಿದ್ದಾರೆ.
ರೋಹನ್ ಬೋಪಣ್ಣ ಅವರೊಂದಿಗೆ ರುಶ್ಮಿ ಚಕ್ರವರ್ತಿ ಅವರ ಹೆಸರನ್ನು ಸಹ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.