ನವದೆಹಲಿ: ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಇತರೆ ರಾಷ್ಟ್ರಗಳ ಖ್ಯಾತನಾಮ ಕ್ರೀಡಾಪಟುಗಳನ್ನು ಹಿಂದಿಕ್ಕಿ ಪದಕ ಗಳಿಸಿದ್ದ ಭಾರತದ ಆಟಗಾರನೋರ್ವ ಜೀವನೋಪಾಯಕ್ಕಾಗಿ ಟೀ ಮಾರುತ್ತಿದ್ದಾರೆ.
ಹೌದು..ನಿಮಗೆ ಹರೀಶ್ ಕುಮಾರ್ ಹೆಸರು ನೆನಪಿರಬೇಕು. ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯನ್ ಗೇಮ್ಸ್ 2018 ಕ್ರೀಡಾ ಕೂಟದ 'ಸೆಪಕ್ ತಕ್ರವ್' ಆಟದಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತ ತಂಡದ ಹರೀಶ್ ಕುಮಾರ್ ತಮ್ಮ ಜೀವನೋಪಾಯಕ್ಕಾಗಿ ಟೀ ಮಾರುತ್ತಿದ್ದಾರೆ. ಹರೀಶ್ ಕುಮಾರ್ ಅವರ ಕುಟುಂಬ ತೀವ್ರ ಬಡತನ ಎದುರಿಸುತ್ತಿದ್ದು, ಜೀವನ ನಿರ್ವಹಣೆಗಾಗಿ ಅವರ ತಂದೆ ಟೀ ಅಂಗಡಿ ನಡೆಸುತ್ತಿದ್ದಾರೆ. ಇದೇ ಟೀ ಅಂಗಡಿಯಲ್ಲೇ ಹರೀಶ್ ಕುಮಾರ್ ಕೂಡ ಚಹಾ ಮಾರಾಟ ಮಾಡುತ್ತಿದ್ದಾರೆ.
ಪದಕ ವಿಜೇತ ಕ್ರೀಡಾಪಟು ಹರೀಶ್ ಜೀವನ ಸಾಗಿಸಲು ದೆಹಲಿಯಲ್ಲಿರುವ ತಮ್ಮ ತಂದೆಯ ಅಂಗಡಿಯಲ್ಲಿ ಚಹಾ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಸುದ್ದಿಸಂಸ್ಥೆಯೊಂದು ವರದಿ ಮಾಡಿದ್ದು, ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಪದಕ ವಿಜೇತ ಕ್ರೀಡಾಪಟು ಹರೀಶ್, ನಮ್ಮ ಕುಟುಂಬ ದೊಡ್ಡದಿದೆ. ಆದರೆ, ಆದಾಯ ಮಾತ್ರ ಕಡಿಮೆ. ಅಂಗಡಿಯಲ್ಲಿ ಟೀ ಮಾರಾಟ ಮಾಡುವ ಮೂಲಕ ನಾನು ನನ್ನ ಕುಟುಂಬಕ್ಕೆ ನೆರವಾಗುತ್ತಿದ್ದೇನೆ. ಇದರ ನಡುವೆಯೂ ಮಧ್ಯಾಹ್ನ 2 ರಿಂದ 6 ಗಂಟೆ ವರೆಗೆ ನಾನು ಕ್ರೀಡಾಭ್ಯಾಸದಲ್ಲಿ ತೊಡಗಿಕೊಳ್ಳುತ್ತೇನೆ. ಭವಿಷ್ಯದಲ್ಲಿ ನಾನೊಂದು ಉತ್ತಮ ನೌಕರಿ ಪಡೆಯಬೇಕಾಗಿದೆ ಎಂದು ಹೇಳಿದ್ದಾರೆ.
ಇನ್ನು ಸೆಪಕ್ ತಕ್ರವ್ ಕ್ರೀಡೆಯಲ್ಲಿನ ತಮ್ಮ ಪರಿಶ್ರಮ, ಸಾಧನೆ ಕುರಿತು ಮಾತನಾಡಿದ ಹರೀಶ್, '2011ರಿಂದಲೂ ನಾನು ಈ ಕ್ರೀಡೆಯಲ್ಲಿ ತೊಡಗಿದ್ದೇನೆ. ನನ್ನ ಕೋಚ್ ಹೇಮ್ ರಾಜ್ ಈ ಕ್ರೀಡೆಗೆ ನನ್ನನ್ನು ಕರೆತಂದರು. ಮೊದಲಿಗೆ ಟೈರ್ ನಲ್ಲಿ ನಾವೆಲ್ಲ ಈ ಆಟ ಆಡುತ್ತಿದ್ದೆವು. ಇದನ್ನು ಗಮನಿಸಿದ ಕೋಚ್ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ನನ್ನನ್ನು ನೋಂದಾಯಿಸಿದರು. ಆ ನಂತರ ನನಗೆ ನಿರಂತರ ಧನ ಸಹಾಯ ಮತ್ತು ಅಭ್ಯಾಸದ ಕಿಟ್ ದೊರೆಯಿತು. ನಾನು ನಿತ್ಯ ಕ್ರೀಡಾಭ್ಯಾಸ ಮಾಡುತ್ತೇನೆ. ಮುಂದೆಯೂ ಅಭ್ಯಾಸದಲ್ಲಿ ತೊಡಗಿಕೊಳ್ಳುತ್ತೇನೆ. ಈ ಮೂಲಕ ದೇಶಕ್ಕೆ ಹೆಚ್ಚಿನ ಪ್ರಶಸ್ತಿಗಳನ್ನು ಗೆದ್ದು ತರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಏಷ್ಯನ್ ಕ್ರೀಡಾ ಕೂಟದಲ್ಲಿ ಈ ಹಿಂದಿನ ಚಾಂಪಿಯನ್ ಥಾಯ್ಲೆಂಡ್ ವಿರುದ್ಧ ಸೋಲು ಅನುಭವಿಸಿದ್ದ ಭಾರತ ಕಂಚಿನ ಪದಕಕ್ಕೆ ತೃಪ್ತಿ ಪಟ್ಟಿತ್ತು. ಈ ತಂಡದಲ್ಲಿ ಹರೀಶ್ ಕುಮಾರ್ ಅವರೂ ಇದ್ದರು.