ಕ್ರೀಡೆ

ವಿಶ್ವಕಪ್ ನಲ್ಲಿ ಪಾಕಿಸ್ತಾನ ವಿರುದ್ಧ ಆಡದಿದ್ದರೆ ಭಾರತಕ್ಕೆ ನಷ್ಟ: ಸುನೀಲ್ ಗವಾಸ್ಕರ್

Nagaraja AB

ನವದೆಹಲಿ: ಮುಂಬರುವ ವಿಶ್ವಕಪ್ ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದ್ದರೆ ಭಾರತಕ್ಕೆ ನಷ್ಟವಾಗಲಿದೆ ಎಂದು ಮಾಜಿ ಟೀಂ ಇಂಡಿಯಾ ನಾಯಕ ಸುನೀಲ್ ಗವಾಸ್ಕರ್  ಹೇಳಿದ್ದಾರೆ.

ಪುಲ್ವಾಮಾ ಉಗ್ರರ ದಾಳಿ ಹಿನ್ನೆಲೆಯಲ್ಲಿ ಮಾಜಿ ಟೀಂ ಇಂಡಿಯಾ ಸ್ಪೀನ್ನರ್ ಹರ್ಭಜನ್ ಸಿಂಗ್ ಸೇರಿದಂತೆ ಹಲವು ಆಟಗಾರರು ವಿಶ್ವಕಪ್ ಟೂರ್ನಿಯಲ್ಲಿ ಜೂನ್ 16 ರಂದು ನಿಗದಿಯಾಗಿರುವ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಕೈ ಬಿಡಬೇಕೆಂದು ಒತ್ತಾಯಿಸುತ್ತಿದ್ದಾರೆ.

ವಿಶ್ವಕಪ್ ನಲ್ಲಿ ಪಾಕಿಸ್ತಾನ ವಿರುದ್ಧ ಆಡಲು ಭಾರತ ನಿರ್ಧರಿಸಿದ್ದರೆ ಗೆಲ್ಲುವುದು ಯಾರು? ಸೆಮಿಫೈನಲ್, ಫೈನಲ್ ಪಂದ್ಯದಲ್ಲಿ  ಯಾರು ಗೆಲುವು ಸಾಧಿಸುತ್ತಾರೆ ಎಂಬ ಬಗ್ಗೆಯೂ ನಾನು ಹೇಳುವುದಿಲ್ಲ?  ಪಾಕಿಸ್ತಾನ  ಎರಡು ಅಂಕಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸುತ್ತದೆ ಎಂದು ಗವಾಸ್ಕರ್  ನಿಯತಕಾಲಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಪ್ರತಿ ಬಾರಿಯ ವಿಶ್ವಕಪ್ ನಲ್ಲಿ ಭಾರತ, ಪಾಕಿಸ್ತಾನವನ್ನು ಸೋಲಿಸಿದೆ. ಪಾಕಿಸ್ತಾನ ವಿರುದ್ಧ ಗೆದ್ದಾಗ ಎರಡು ಅಂಕಗಳನ್ನು ಪಡೆಯುತ್ತಿದ್ದೇವು. ಈ ಪೈಪೋಟಿಯಲ್ಲಿ ಪಾಕಿಸ್ತಾನಕ್ಕೆ ಅನುಕೂಲವಾಗದಂತೆ ಮಾಡಬೇಕಿದೆ. ಆದರೆ, ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳವುದೋ ಅದಕ್ಕೆ ಬದ್ಧನಾಗಿರುತ್ತೇನೆ.  ಒಂದು ವೇಳೆ ಪಾಕಿಸ್ತಾನ ವಿರುದ್ಧ ಭಾರತ ಆಡದಂತೆ ನಿರ್ಧಾರ ಕೈಗೊಂಡರೂ ಸರ್ಕಾರದೊಂದಿಗೆ ತಾವು ಇರುವುದಾಗಿ ಹೇಳಿದ್ದಾರೆ.

2007ರಲ್ಲಿ ಸಂಪೂರ್ಣ  ಸರಣಿ ಆಡಿದದ್ದು ಬಿಟ್ಟರೆ ಉಭಯ ದೇಶಗಳ ನಡುವಿನ ಕ್ರಿಕೆಟ್ ಒಪ್ಪಂದ 2012ರಿಂದಲೂ ಈಗಾಗಲೇ ನಿರ್ಬಂಧಿಸಲಾಗಿದೆ. ಒಂದು ವೇಳೆ ವಿಶ್ವಕಪ್ ನಲ್ಲಿ ಪಾಕಿಸ್ತಾನ ವಿರುದ್ಧ ಆಡದಿದ್ದರೆ ಭಾರತಕ್ಕೆ ನಷ್ಟವಾಗಲಿದೆ. ಪಾಕಿಸ್ತಾನಕ್ಕೆ ಎರಡು ಅಂಕಗಳನ್ನು ನೀಡಲು ನಾವೇ ಕಾರಣರಾಗುತ್ತೇವೆ. ಅದಕ್ಕೆ ಅವರು ಆರ್ಹತೆ ಪಡೆಯದಂತೆ ಮಾಡಬೇಕಿದೆ ಎಂದು ಗವಾಸ್ಕರ್ ಆಗ್ರಹಿಸಿದ್ದಾರೆ.

ಒಂದು ವೇಳೆ ಬಿಸಿಸಿಐ ಈ ವಿಚಾರವನ್ನು ಐಸಿಸಿ ಗಮನಕ್ಕೆ ತರುತ್ತದೆ ಎಂದು ಊಹಿಸಲಾಗಿದೆ. ಆದರೆ, ಐಸಿಸಿ  ನಿರ್ಧಾರದ ಬಗ್ಗೆ ಖಚಿತತೆ ಇಲ್ಲ,  ಇದು ಭಾರತ- ಪಾಕಿಸ್ತಾನ ಆಂತರಿಕ ವಿಚಾರಕ್ಕೆ ಸಂಬಂಧಿಸಿದ ವಿಚಾರವಾಗಿದ್ದು,  ಅವರೇ ಬಗೆಹರಿಸಿಕೊಳ್ಳಬೇಕೆಂದು ಇತರ ರಾಷ್ಟ್ರಗಳು ಹೇಳಿದ್ದರೆ ಏನು ನಡೆಯುತ್ತದೆ ಎಂಬುದು ಗೊತ್ತಾಗುತ್ತಿಲ್ಲ ಎಂದಿದ್ದಾರೆ.

ಉಭಯ ದೇಶಗಳ ನಡುವಿನ ಸಂಬಂಧ  ಬಲವರ್ದನೆ ನಿಟ್ಟಿನಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್  ಅಗತ್ಯ ಕ್ರಮ ಕೈಗೊಳ್ಳಬೇಕೆಂದು  ಗವಾಸ್ಕರ್ ಇದೇ ವೇಳೆ ಒತ್ತಾಯಿಸಿದ್ದಾರೆ.

SCROLL FOR NEXT