ಅಬುಧಾಬಿ: ಎಎಫ್ ಸಿ ಏಷ್ಯನ್ ಕಪ್ ನಲ್ಲಿ ಭಾರತೀಯ ಗೋಲ್ ಮಷಿನ್ ಸುನೀಲ್ ಛೆಟ್ರಿ ಅವರ ಭರ್ಜರಿ ಆಟದ ನೆರವಿನೊಂದಿಗೆ ಭಾರತ, ಥಾಯ್ಲೆಂಡ್ ವಿರುದ್ಧ 4-1 ಗೋಲುಗಳಿಂದ ಜಯಗಳಿಸಿದೆ.
ಇಂದು ನಡೆದ ಎ ಗುಂಪಿನ ಮೊದಲ ಪಂದ್ಯದಲ್ಲಿ ಬೆಂಗಳೂರು ಎಫ್ಸಿ ಆಟಗಾರ ಸುನೀಲ್ ಛೆಟ್ರಿ ಅವರು ಎರಡು ಗೋಲು ಗಳಿಸಿದರು. ಭವಿಷ್ಯದ ಉಜ್ವಲ ಪ್ರತಿಭೆ ಎನ್ನಲಾದ ಅನಿರುದ್ಧ್ ಥಾಪಾ ಹಾಗೂ ಜೇಜೇ ಲಾಲ್ ಪೆಖ್ಲುವಾ ಅವರು ಮತ್ತೆರಡು ಗೋಲು ಗಳಿಸಿ ತಂಡಕ್ಕೆ ಗೆಲುವು ತಂದಿತ್ತರು.
ಜಿದ್ದಾಜಿದ್ದಿನ ಪಂದ್ಯದಲ್ಲಿ ಛೆಟ್ರಿ 27ನೇ ನಿಮಿಷದಲ್ಲಿ ಪಡೆದ ಪೆನಾಲ್ಟಿ ಅವಕಾಶದಿಂದ ಗೋಲುಗಳಿಸುವ ಮೂಲಕ ತಂಡಕ್ಕೆ ಮೊದಲ ಮುನ್ನಡೆ ತಂದುಕೊಟ್ಟರು. ಆದರೆ ಆ ಖುಷಿ ಉಳಿದದ್ದು ಕೇವಲ 6 ನಿಮಿಷ ಮಾತ್ರ. ಥಾಯ್ಲೆಂಡ್ ತಂಡ 33ನೇ ನಿಮಿಷದಲ್ಲಿ ಗೋಲು ಗಳಿಸಿ ಸಮಬಲ ಸಾಧಿಸಿತು. ಆದರೆ, ದ್ವಿತೀಯಾರ್ಧದಲ್ಲಿ ಭಾರತೀಯರು ಹೆಚ್ಚು ಆಕ್ರಮಣಕಾರಿಯಾಗಿ ಆಡಿದರು. ಎರಡನೇ ಅವಧಿಯ ಎರಡನೇ ನಿಮಿಷದಲ್ಲೇ ಸುನೀಲ್ ಛೆಟ್ರಿ ಗೋಲು ಗಳಿಸಿದರು.
ಭಾರತ ಇರುವ ಎ ಗುಂಪಿನಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಯುಎಇ ಮತ್ತು ಬಹ್ರೇನ್ ತಂಡಗಳು 1-1ರಿಂದ ಸಮಬಲ ಸಾಧಿಸಿದವು. ಜನವರಿ 10ರಂದು ನಡೆಯುವ ಎರಡನೇ ಸುತ್ತಿನಲ್ಲಿ ಪ್ರಬಲ ಯುಎಇ ತಂಡವನ್ನು ಭಾರತ ಎದುರಿಸಲಿದೆ. ಈ ಪಂದ್ಯದಲ್ಲಿ ಭಾರತವೇನಾದರೂ ಗೆಲುವು ಸಾಧಿಸಿದರೆ ನಾಕೌಟ್ ಪ್ರವೇಶ ಖಚಿತವಾಗಲಿದೆ. ಮೂರನೇ ಸುತ್ತಿನ ಪಂದ್ಯವು ಜನವರಿ 14ರಂದು ನಡೆಯಲಿದೆ.