ಡೆನ್ ಬಾಷ್: ನೆದರ್ಲೆಂಡ್ನಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವ ಚಾಂಪಿಯನ್ಶಿಪ್ ಪಂದ್ಯದಲ್ಲಿ ಕೆನಡಾ ತಂಡದ ವಿರುದ್ಧ 5-3 ಅಂತರದಲ್ಲಿ ಗೆದ್ದು ಕ್ವಾರ್ಟರ್ ಫೈನಲ್ ತಲುಪಿರುವ ಭಾರತ ಪುರುಷರ ಆರ್ಚರಿ ತಂಡ 2020ರ ಟೋಕಿಯೋ ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
2012ರ ಲಂಡನ್ ಒಲಿಂಪಿಕ್ಸ್ ಬಳಿಕ ಇದೇ ಮೊದಲ ಬಾರಿ ಭಾರತ ಪುರುಷರ ಆರ್ಚರಿ ತಂಡ ಟೋಕಿಯೋ ಒಲಿಂಪಿಕ್ಸ್ ಅರ್ಹತೆ ಪಡೆದಂತಾಗಿದೆ. ಈ ಕುರಿತು, ಪ್ರತಿಕ್ರಿಯಿಸಿರುವ ಎರಡು ಬಾರಿ ಒಲಿಂಪಿಕ್ಸ್ ನಲ್ಲಿ ಆಡಿರುವ ರಾಯ್, ನಾವು ಕೊನೆಗೂ ಟೋಕಿಯೋ ಒಲಿಂಪಿಕ್ಸ್ ಅರ್ಹತೆ ಪಡೆದಿದ್ದೇವೆ. ಮಹತ್ವದ ಕ್ರೀಡಾಕೂಟದಲ್ಲಿ ಭಾಗವಹಿಸಲು ನಾವು ಎದುರು ನೋಡುತ್ತಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.
ನನಗೆ ಗೊತ್ತಿರುವ ಹಾಗೆ ನಮ್ಮ ರೀತಿಯೇ ಎದುರಾಳಿ ಕೆನಡಾ ತಂಡ ಕೂಡ ಟೋಕಿಯೋ ಒಲಿಂಪಿಕ್ಸ್ಗೆ ಅರ್ಹತೆ ಪಡೆಯುವ ಹಾದಿಯಲ್ಲಿ ತೀವ್ರ ಒತ್ತಡಕ್ಕೆ ಒಳಗಾಗಿತ್ತು. ಇದನ್ನು ನಾವು ಸದುಪಯೋಗ ಪಡಿಸಿಕೊಂಡು ಗೆಲುವು ಸಾಧಿಸಿದೆವು ಎಂದು 2011 ಲಂಡನ್ ಒಲಿಂಪಿಕ್ಸ್ಗೆ ಭಾಗವಹಿಸಿದ್ದ ಹಾಗೂ ಪ್ರಸ್ತುತ ತಂಡದಲ್ಲಿರುವ ರಾಯ್ ಹೇಳಿದರು.
ನಾನು ಪಂದ್ಯದಲ್ಲಿ ಉತ್ತಮ ಆರಂಭ ಪಡೆದೆವು. ಪ್ರಸ್ತುತ ತಂಡ ಬಲಿಷ್ಠವಾಗಿದೆ. ಅಂಕ ಗಳಿಕೆಯಲ್ಲಿ ನಾವು ಸಾಕಷ್ಟು ಹೋರಾಟ ನಡೆಸಿದೆವು. ಕಳೆದ ಬಾರಿಯ ಒಲಿಂಪಿಕ್ಸ್ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದ್ದೆವು. ಆದರೆ, ಈ ಬಾರಿ ನಮಗೆ ಒಳ್ಳೆಯ ತಿರುವು ಸಿಕ್ಕಿದೆ ಎಂದು ತಂಡದ ಆರ್ಚರಿ ಪಟು ದಾಸ್ ನುಡಿದರು.