ಕ್ರೀಡೆ

74 ಕ್ರೀಡಾ ಸಾಧಕರಿಗೆ ರಾಷ್ಟ್ರಪತಿಗಳಿಂದ ಪ್ರಶಸ್ತಿ ಪ್ರದಾನ

Nagaraja AB

ನವದೆಹಲಿ: ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ರಿಯೊ ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ ಕ್ರೀಡಾಪಟು ಮರಿಯಪ್ಪನ್ ತಂಗವೇಲು, ಟೇಬಲ್ ಟೆನಿಸ್ ತಾರೆ ಮಾನಿಕಾ ಬಾತ್ರಾ ಮತ್ತು ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಅವರಿಗೆ ದೇಶದ ಅತ್ಯುನ್ನತ ಕ್ರೀಡಾ ಗೌರವ ರಾಜೀವ್ ಗಾಂಧಿ ಖೇಲ್ ರತ್ನ ನೀಡಿ ಸನ್ಮಾನಿಸಿದರು.

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳ ಇತಿಹಾಸದಲ್ಲಿ ಮೊದಲ ಬಾರಿಗೆ ರಾಷ್ಟ್ರಪತಿ ಭವನದಿಂದ ನಡೆದ ವರ್ಚುಯಲ್  ಸಮಾರಂಭದಿಂದ ರಾಷ್ಟ್ರಪತಿಗಳು ಅರ್ಜುನ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿ ಮತ್ತು ಧ್ಯಾನ್‌ಚಂದ್ ಪ್ರಶಸ್ತಿಯನ್ನು ಪ್ರದಾನ ಮಾಡಿದರು. 

ಹಾಕಿ ಜಾದೂಗಾರ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನವಾದ ಆಗಸ್ಟ್ 29 ರಂದು ದೇಶಾದ್ಯಂತ ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸಲಾಗುತ್ತಿದ್ದು, ಐದು ರಾಜೀವ್ ಗಾಂಧಿ ಖೇಲ್ ರತ್ನ, 27 ಅರ್ಜುನ ಪ್ರಶಸ್ತಿಗಳನ್ನು  ರಾಷ್ಟ್ರಪತಿ ಪ್ರಧಾನ ಮಾಡಿದರು. 74 ಜನರ ಪೈಕಿ ವಿವಿಧ ನಗರಗಳ 11 ಭಾರತೀಯ ಕ್ರೀಡಾ ಪ್ರಾಧಿಕಾರದಿಂದ  60 ಮಂದಿ ವರ್ಚುಯಲ್ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಖೇಲ್ ರತ್ನ ಪ್ರಶಸ್ತಿ ವಿಜೇತರಾದ ರೋಹಿತ್ ಶರ್ಮಾ, ವಿಗ್ನೇಶ್ ಫೋಗಟ್ , ಅರ್ಜುನ ಪ್ರಶಸ್ತಿ ವಿಜೇತ ಇಶಾಂತ್ ಶರ್ಮಾ, ಸಾತ್ವಿಕ್ ಸಾಯಿ ರಾಜ್ ,ರಾಂಕಿರೆಡ್ಡಿ (ಬ್ಯಾಡ್ಮಿಂಟನ್ ) ಸಮಾರಂಭಕ್ಕೆ ಗೈರಾಗಿದ್ದರು. ರಾಣಿ ರಾಂಪಲ್ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದಿಂದ ಪಾಲ್ಗೊಂಡಿದ್ದರು.

ಖೇಲ್ ರತ್ನ ಪ್ರಶಸ್ತಿಯನ್ನು 7.5 ಲಕ್ಷದಿಂದ 25 ಲಕ್ಷಕ್ಕೆ, ಅರ್ಜುನ ಪ್ರಶಸ್ತಿಯನ್ನು 10 ಲಕ್ಷದಿಂದ 15 ಲಕ್ಷಕ್ಕೆ ದ್ರೋಣಾಚಾರ್ಯ ಪ್ರಶಸ್ತಿಯನ್ನು 5 ಲಕ್ಷದಿಂದ 15 ಲಕ್ಷಕ್ಕೆ ಧ್ಯಾನ್ ಚಂದ್ ಪ್ರಶಸ್ತಿಯನ್ನು 5 ಲಕ್ಷದಿಂದ 10 ಲಕ್ಷಕ್ಕೆ ಏರಿಸಲಾಗಿದ್ದು, ನಿನ್ನೆ ಹೃದಯಾಘಾತದಿಂದ ಮೃತಪಟ್ಟ ಮಾಜಿ ಭಾರತೀಯ ಅಥ್ಲೇಟಿಕ್ ಕೋಚ್ ಪುರುಷೋತ್ತಮ್ ರೈ ಅವರಿಗೆ ಈ ಬಾರಿಯ ದ್ರೋಣಾಚಾರ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಇಂದು ವಿಕಾಸ ಸೌಧದಲ್ಲಿ ಅವರಿಗೆ ಸನ್ಮಾನ ಸಮಾರಂಭ ಕೂಡಾ ಆಯೋಜಿಸಲಾಗಿತ್ತು. ಆದರೆ, ವಿಧಿಯಾಟ ಬೇರೆಯಾಗಿತ್ತು. 

ಕ್ರೀಡಾ ಸಾಧಕರ ಸಾಧನೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೊಂಡಾಡಿದರು. ಕೋವಿಡ್-19 ಸಂದರ್ಭದಲ್ಲಿ ಮೊದಲ ಪ್ರಶಸ್ತಿ  ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ಪಾಲ್ಗೊಳ್ಳುತ್ತಿರುವುದಾಗಿ ಸಮಾರಂಭ ಆರಂಭಕ್ಕೂ ಮುನ್ನ ಕ್ರೀಡಾ ಸಚಿವ ಕಿರಣ್ ರಿಜಿಜು ತಿಳಿಸಿದರು.

SCROLL FOR NEXT