ಕ್ರೀಡೆ

ಪಾಕ್ ಗೆ ತೆರಳಿದ್ದ ಕಬಡ್ಡಿ ಆಟಗಾರರ ವಿರುದ್ದ ಕ್ರಮಕ್ಕೆ ಕೇಂದ್ರ ಕ್ರೀಡಾ ಸಚಿವರ ತಾಕೀತು

Srinivas Rao BV

ನವದೆಹಲಿ: ಅನುಮತಿ ಪಡೆಯದೆ ಪಾಕಿಸ್ತಾನಕ್ಕೆ ತೆರಳಿದ್ದ ಭಾರತೀಯ ಕಬಡ್ಡಿ ಆಟಗಾರರ ವಿರುದ್ಧ ತನಿಖೆ ನಡೆಸುವಂತೆ ಕೇಂದ್ರ ಕ್ರೀಡಾ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಭಾರತೀಯ ಕಬಡ್ಡಿ ಫೆಡರೇಷನ್ ಗೆ ಸೂಚನೆ ನೀಡಿದ್ದಾರೆ.

ವಿಶ್ವ ಕಬಡ್ಡಿ ಚಾಂಪಿಯನ್‌ಶಿಪ್ ಹೆಸರಿನಲ್ಲಿ ಪಾಕಿಸ್ತಾನ ಆಯೋಜಿಸಿದ್ದ ಪಂದ್ಯದಲ್ಲಿ ಕೆಲವು ವ್ಯಕ್ತಿಗಳ ತಂಡ ಲಾಹೋರ್ ಗೆ ತೆರಳಿ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಫೈನಲ್ ನಲ್ಲಿ ಪರಾಭವಗೊಂಡು ಸೋಮವಾರ ಅಟ್ಟಾರಿ-ವಾಘಾ ಗಡಿಯ ಮೂಲಕ ಭಾರತವನ್ನು ತಲುಪಿತ್ತು ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಕ್ರೀಡಾ ಸಚಿವರು, ಭಾರತೀಯ ಅಧಿಕೃತ ಕಬಡ್ಡಿ ತಂಡ ಪಾಕಿಸ್ತಾನಕ್ಕೆ ಹೋಗಿಲ್ಲ. ಅಲ್ಲಿಗೆ ಹೋಗಿದ್ದವರು ಯಾರು ಎಂಬುದು ತಮಗೆ ಗೊತ್ತಿಲ್ಲ, ಯಾರೆಂದರೆ ಅವರು, ಎಲ್ಲೆಂದರೆ ಅಲ್ಲಿ ಭಾರತದ ಹೆಸರಿನಲ್ಲಿ ಪಂದ್ಯವಾಡುವುದು ಸರಿಯಾದುದಲ್ಲ ಎಂದು ಅವರು ಹೇಳಿದ್ದಾರೆ.

ಕಬಡ್ಡಿ ಫೆಡರೇಶನ್ ಅನುಮತಿ ಪಡೆಯದೆ ಪಾಕಿಸ್ತಾನಕ್ಕೆ ತೆರಳಿ, ಭಾರತೀಯ ತಂಡದ ಹೆಸರಿನಲ್ಲಿ ಪಂದ್ಯವಾಡಿದ ಕ್ರೀಡಾ ಪಟುಗಳನ್ನು ಪತ್ತೆ ಹಚ್ಚಿ ಸೂಕ್ತ ತನಿಖೆಗೆ ಒಳಪಡಿಸಿ ಎಂದು ಕಬಡ್ಡಿ ಫೆಡರೇಶನ್ ಗೆ ಮನವಿ ಮಾಡಿರುವುದಾಗಿ ಅವರು ತಿಳಿಸಿದ್ದಾರೆ. 

ಒಂದು ವೇಳೆ ಯಾವುದೇ ಕ್ರೀಡಾ ಪಂದ್ಯಾವಳಿಯಲ್ಲಿ ಭಾಗವಹಿಸಲು ಬಯಸುವ ಭಾರತೀಯ ಕ್ರೀಡಾ ತಂಡ ಮೊದಲು .. ಸಂಬಂಧಿತ ಕ್ರೀಡಾ ಪ್ರಾಧಿಕಾರ ಅಧಿಕಾರಿಗಳಿಂದ ಅನುಮತಿ ಪಡೆಯಬೇಕು ಎಂದು ರಿಜಿಜು ಮನವಿ ಮಾಡಿದ್ದಾರೆ. ಮತ್ತೊಂದೆಡೆ, ಪಾಕಿಸ್ತಾನದಲ್ಲಿ ನಡೆದ ಕಬಡ್ಡಿ ವಿಶ್ವ ಚಾಂಪಿಯನ್‌ಶಿಪ್ ಅನಧಿಕೃತವಾಗಿದ್ದು, ಈ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ಕ್ರೀಡಾಪಟುಗಳಿಗೆ ನೀಡಿರುವ ಪ್ರಮಾಣಪತ್ರಗಳಿಗೆ ಯಾವುದೇ ಮಾನ್ಯತೆಯಿಲ್ಲಎಂದು ವಿಶ್ವ ಕಬಡ್ಡಿ ಫೆಡರೇಶನ್ ಸ್ಪಷ್ಟಪಡಿಸಿದೆ. ಈ ನಡುವೆ ಪಾಕಿಸ್ತಾನದಿಂದ ಭಾರತಕ್ಕೆ ವಾಪಸ್ಸು ಬಂದಿರುವ ಕಬ್ಬಡಿ ತಂಡದ ಮುಖ್ಯಸ್ಥ ದೇವಿಂದರ್ ಸಿಂಗ್, ಯಾರ ಅನುಮತಿಯೂ ನಮಗೆ ಅಗತ್ಯವಿಲ್ಲ. ನಾವೆಲ್ಲ ವ್ಯಕ್ತಿಗತವಾಗಿ ಕ್ರೀಡೆಯಲ್ಲಿ ಪಾಕಿಸ್ತಾನಕ್ಕೆ ತೆರಳಿದ್ದು ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

SCROLL FOR NEXT