ಕ್ರೀಡೆ

ಕುಸ್ತಿಪಟುಗಳ ಜೊತೆ ಅನುಚಿತ ವರ್ತನೆಯಿಂದ ನಿರಾಶೆಗೊಂಡಿದ್ದೇನೆ: ಅನಿಲ್ ಕುಂಬ್ಳೆ

Vishwanath S

ನವದೆಹಲಿ: ಮೇ 28ರಂದು ರಾಷ್ಟ್ರ ರಾಜಧಾನಿಯಲ್ಲಿ ಅಗ್ರ ಕುಸ್ತಿಪಟುಗಳ ಮೇಲೆ ದೆಹಲಿ ಪೊಲೀಸರ ಕ್ರಮ ಮತ್ತು ಬಂಧನದ ವಿರುದ್ಧ ಭಾರತದ ಮಾಜಿ ನಾಯಕ ಹಾಗೂ ಕೋಚ್ ಅನಿಲ್ ಕುಂಬ್ಳೆ ಧ್ವನಿ ಎತ್ತಿದ್ದಾರೆ. 

ಮೇ 28ರಂದು ನಮ್ಮ ಕುಸ್ತಿಪಟುಗಳ ಮೇಲೆ ನಡೆದ ಘಟನೆ ಬಗ್ಗೆ ಕೇಳಲು ತುಂಬಾ ದುಃಖವಾಗಿದೆ. ಯಾವುದೇ ಸಮಸ್ಯೆಯನ್ನು ಮಾತುಕತೆಯ ಮೂಲಕ ಪರಿಹರಿಸಬಹುದು. ಶೀಘ್ರ ಪರಿಹಾರಕ್ಕಾಗಿ ಆಶಿಸುತ್ತೇನೆ ಎಂದು ಕುಂಬ್ಳೆ ಮಂಗಳವಾರ ಟ್ವೀಟ್ ಮಾಡಿದ್ದಾರೆ. 

ಕುಸ್ತಿಪಟುಗಳು ಹೊಸ ಸಂಸತ್ ಭವನದ ಉದ್ಘಾಟನೆಯ ದಿನದಂದು ಮೆರವಣಿಗೆ ನಡೆಸಲು ಪ್ರಯತ್ನಿಸಿದರು. ಆದರೆ ದೆಹಲಿ ಪೊಲೀಸರು ಅವರನ್ನು ತಡೆದು ವಶಕ್ಕೆ ತೆಗೆದುಕೊಂಡರು. ಇದನ್ನು ಕುಸ್ತಿಪಟುಗಳು ವಿರೋಧಿಸಿದರು. ಭಾರತದ ಅಗ್ರ ಕುಸ್ತಿಪಟುಗಳನ್ನು ಪೊಲೀಸರು ಎಳೆದು ಬಲವಂತವಾಗಿ ಎತ್ತಿಕೊಂಡು ಬಂದು ಕಸ್ಟಡಿಗೆ ತೆಗೆದುಕೊಂಡಿರುವುದನ್ನು ಸ್ಪಷ್ಟವಾಗಿ ತೋರಿಸುವ ಹಲವಾರು ಛಾಯಾಚಿತ್ರಗಳು ಸಹ ಹೊರಬಿದ್ದಿದ್ದು ಇದರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.

ಆ ದಿನದ ನಂತರ, ಕುಸ್ತಿಪಟುಗಳು ಮತ್ತು ಉಳಿದ ಪ್ರತಿಭಟನಾಕಾರರ ಮೇಲೆ ಗಲಭೆ ಮತ್ತು ಸಾರ್ವಜನಿಕ ಸೇವಕನ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಯಿತು. ದೆಹಲಿ ಪೊಲೀಸರು ಜಂತರ್ ಮಂತರ್‌ನಲ್ಲಿ ಪ್ರತಿಭಟನಾ ಸ್ಥಳದಿಂದ ಟೆಂಟ್‌ಗಳು, ಹಾಸಿಗೆಗಳು ಮತ್ತು ಇತರ ವಸ್ತುಗಳನ್ನು ತೆಗೆದುಹಾಕಿದರು.

ರಿಯೊ 2016 ರ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್, ಟೋಕಿಯೊ 2020 ರ ಪದಕ ವಿಜೇತ ಬಜರಂಗ್ ಪುನಿಯಾ ಮತ್ತು ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತ ವಿನೇಶ್ ಫೋಗಟ್ ಅವರು ಮಂಗಳವಾರ ಹರಿದ್ವಾರದಲ್ಲಿ ಗಂಗಾನದಿಯಲ್ಲಿ ತಮ್ಮ ಒಲಿಂಪಿಕ್ ಮತ್ತು ವಿಶ್ವ ಪದಕಗಳನ್ನು ಮುಳುಗಿಸುವುದಾಗಿ ಹೇಳಿದ್ದಾರೆ.

SCROLL FOR NEXT