ಹರಿದ್ವಾರ: ಕರ್ನಾಟಕ ಹಾಕಿ ತಂಡ ಗುರುವಾರ ನಡೆದ ಪುರುಷರ ವಿಭಾಗದ ಫೈನಲ್ ನಲ್ಲಿ ಉತ್ತರ ಪ್ರದೇಶದ ವಿರುದ್ಧ 3-2 ಗೋಲುಗಳ ಅಂತರದಿಂದ ಗೆದ್ದು ಚಿನ್ನದ ಪದಕವನ್ನು ಗೆದ್ದುಕೊಂಡಿದೆ.
ಪಂದ್ಯ ಆರಂಭವಾಗುತ್ತಿದ್ದಂತೆ ಉತ್ತರ ಪ್ರದೇಶ ಪರ ಫರಾಜ್ ಖಾನ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ತಂದುಕೊಟ್ಟರು. ಎಂಟನೇ ನಿಮಿಷದಲ್ಲಿ ಕರ್ನಾಟಕದ ಶಮಂತ್ ಸಿ ಗೋಲು ಗಳಿಸುವುದರೊಂದಿಗೆ ಪಂದ್ಯ 1-1 ಸಮಬಲ ಸಾಧಿಸಿತು.
ಬಳಿಕ ಭರತ್ ಮಹಾಲಿಂಗಪ್ಪ ಕುರ್ತಕೋಟಿ (18ನೇ ನಿಮಿಷ) ಮತ್ತು ಅಭರಣ ಸುದೇವ್ (39ನೇ ನಿಮಿಷ) ಪೆನಾಲ್ಟಿ ಕಾರ್ನರ್ಗಳಲ್ಲಿ ಗೋಲು ಗಳಿಸಿ ಕರ್ನಾಟಕಕ್ಕೆ ಎರಡು ಗೋಲು ತಂದುಕೊಟ್ಟರು.
ಉತ್ತರ ಪ್ರದೇಶದ ಶಾರದಾ ನಂದ್ ತಿವಾರಿ 45ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು. ಆದರೆ ಕೊನೆಯಲ್ಲಿ ಕರ್ನಾಟಕ 3-2 ಅಂತರದಿಂದ ಪಂದ್ಯವನ್ನು ಗೆದ್ದುಕೊಂಡಿತು. ಬುಧವಾರ ನಡೆದ ಸೆಮಿಫೈನಲ್ ನಲ್ಲಿ ಕರ್ನಾಟಕ ತಂಡ ಶೂಟೌಟ್ ನಲ್ಲಿ 5-4 ಗೋಲುಗಳ ಅಂತರದಿಂದ ಮಹಾರಾಷ್ಟ್ರ ವಿರುದ್ಧ ಗೆಲುವು ಸಾಧಿಸಿತ್ತು.