ಪ್ರಪಂಚ ಲಂಚಮಯ. ಇಲ್ಲಿ ಗಳಿಕೆಯೇ ಜೀವನ. ಪ್ರತಿಫಲಾಪೇಕ್ಷೆಯಿಲ್ಲದೆ ಯಾರೂ ಕೆಲಸ ಮಾಡರು. ಇನ್ನು ಕೆಲಸಗಳ ವಿಚಾರಕ್ಕೆ ಬಂದರೆ ಅವರ ಅಪೇಕ್ಷೆಯೇ ದೊಡ್ಡದಿರುತ್ತದೆ. ಕೆಲಸ, ವೃತ್ತಿ, ಉದ್ಯೋಗ ಇವುಗಳು ಮನುಷ್ಯನನ್ನು ಸ್ವಾರ್ಥಮಯಗೊಳಿಸಿದರೆ, ಕಾಯಕವು ನಿಷ್ಕಾಮ ಕರ್ಮಯೋಗಿಯನ್ನಾಗಿಸುತ್ತದೆ. ಇಂದು ಜೀವನಕಾರ್ಯವನ್ನು ಕಾಯಕವೆಂದು ಭಾವಿಸಿ ದುಡಿಮೆಯನ್ನು ಸರ್ವರ ಏಳ್ಗೆಗಾಗಿ ವಿನಿಯೋಗಿಸುವ ಕರ್ಮಯೋಗಿಗಳು ತುಂಬಾ ವಿರಳ. ಹಾಗೆಯೇ ನಿಷ್ಕಾಮ ಜೀವನ ಸಾಗಿಸುವ ಆದರ್ಶ ಗುರುಗಳೂ ಅಪರೂಪವಾಗಿದ್ದಾರೆ. ಆದ್ದರಿಂದ ನಾವು ಲೌಕಿಕ ಪ್ರಪಂಚದೊಳಗಿದ್ದೇ ಜೀವನವನ್ನು ನಿಷ್ಕಾಮ ಕರ್ಮಯೋಗವನ್ನಾಗಿ ಮಾಡಿಕೊಳ್ಳಬೇಕು.
ತಪಸ್ಸಿನಿಂದ ಶಕ್ತಿ ಬರುತ್ತದೆ. ಇತರರಿಗಾಗಿ ಕೆಲಸ ಮಾಡುವುದೂ ಕೂಡ ತಪಸ್ಸೇ. ತಪಸ್ಸು ಎನ್ನುವುದು ಭಕ್ತನ ಮನಸ್ಸಿನಲ್ಲಿ ಲೋಕಹಿತಾರ್ಥವಾದ ಪರೋಪಕಾರ ಬುದ್ಧಿ ಹುಟ್ಟಿಸಿ ಅವನನ್ನು ನಿಷ್ಕಾಮಕರ್ಮಕ್ಕೆ ಪ್ರಚೋದಿಸುತ್ತದೆ. ಇನ್ನೊಂದು ವಿಧದಿಂದ ಕರ್ಮಯೋಗಿಯ ಕರ್ಮವು ತಪಸ್ಸಾಗಿ ಪರಿಣಮಿಸಿ, ಅದರಿಂದ ಮನಶ್ಶುದ್ಧಿ, ಹೃದಯಶುದ್ಧಿ ಪ್ರಾಪ್ತವಾಗುತ್ತದೆ. ಈ ಶುದ್ಧ ಮನಸ್ಸೇ ಅವನನ್ನು ಆತ್ಮಸಾಕ್ಷಾತ್ಕಾರದೆಡೆಗೆ ಕರೆದೊಯ್ಯುತ್ತದೆ.
ಪರರಿಗಾಗಿ ಕರ್ಮ ಮಾಡುತ್ತ ಹೋಗುವಾಗ, ಮನಸ್ಸಿನ ಒರಟುತನವೆಲ್ಲ ಸವೆದುಹೋಗಿ ಮೃದುವಾಗುತ್ತದೆ, ನಯವಾಗುತ್ತದೆ. ಕ್ರಮೇಣ ಪ್ರಾಮಾಣಿಕವಾದ ಆತ್ಮ ಸಮರ್ಪಣಭಾವದಿಂದ ಪರಹಿತಕ್ಕಾಗಿ ಕರ್ಮ ಮಾಡುವ ಸಾಮರ್ಥ್ಯ ಬರುತ್ತದೆ.
-ಆನಂದ ಎಸ್.ಎನ್.