ಪ್ರಧಾನ ಸುದ್ದಿ

ನಕಲಿ ಎನ್‌ಕೌಂಟರ್: ಏಳು ಯೋಧರಿಗೆ ಜೀವಾವಧಿ ಶಿಕ್ಷೆ

Rashmi Kasaragodu

ನವದೆಹಲಿ: 2010ರಲ್ಲಿ ಜಮ್ಮು ಕಾಶ್ಮೀರದ ಕುಪ್‌ವಾರ್ ಜಿಲ್ಲೆಯಲ್ಲಿ ನಡೆದ ಮಚಿಲ್  ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ 7 ಯೋಧರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಗಡಿ ಪ್ರದೇಶದಲ್ಲಿ ಅಡ್ಡಾಡುತ್ತಿದ್ದ ಬಾರಾಮುಲ್ಲಾ ಜಿಲ್ಲೆಯ ನದೀಹಾಲ್ ನಿವಾಸಿಗಳಾದ ಮಹಮ್ಮದ್ ಶಾಫಿ, ಶೆಹ್‌ಜಾದ್ ಅಹ್ಮದ್ ಮತ್ತು ರಿಯಾಜ್  ಅಹ್ಮದ್ ಎಂಬವರು ಪಾಕ್ ಉಗ್ರರೆಂದು ಗ್ರಹಿಸಿ ಸೇನಾಪಡೆ ಗುಂಡು ಹಾರಿಸಿತ್ತು .

ಆದಾಗ್ಯೂ, ಕೆಲವು ವ್ಯಕ್ತಿಗಳು ಈ ಮೂವರು ಯುವಕರಿಗೆ ಸೇನಾಪಡೆಯಲ್ಲಿ ಕೆಲಸ ಕೊಡಿಸುತ್ತೇವೆ ಎಂದು ಪುಸಲಾಯಿಸಿ ಗಡಿ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದರು. ಆವಾಗ ಗಡಿ ನಿಯಂತ್ರಣಾ ರೇಖೆ ಬಳಿ ಕಂಡ ಇವರ ಮೇಲೆ ಸೇನೆ ಗುಂಡು ಹಾರಿಸಿದೆ ಎಂದು ಅಲ್ಲಿನ ನಿವಾಸಿಗಳು ಆರೋಪಿಸಿ ತನಿಖೆಗೆ ಒತ್ತಾಯಿಸಿದ್ದರು.

ಈ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡಾಗ ಪ್ರಕರಣದ ತನಿಖೆ ನಡೆಸುವಂತೆ ಸೇನೆ ಆದೇಶಿಸಿತ್ತು.  

2010 ಏಪ್ರಿಲ್ 30ರಂದು ನಡೆದ ಈ ಎನ್‌ಕೌಂಟರ್ ಪ್ರಕರಣದಲ್ಲಿ  3 ರಜಪೂತ್ ರೆಜಿಮೆಂಟ್‌ನ ಕಮಾಂಡಿಂಗ್ ಆಫೀಸರ್ ಕರ್ನಲ್ ಡಿಕೆ ಪಥಾನಿಯಾ , ಮೇಜರ್ ಉಪಿಂದರ್ ಪ್ರಮುಖ  ಆರೋಪಿಗಳಾಗಿದ್ದರು. ಈ ವಿಷಯ ಬಹಿರಂಗವಾಗುತ್ತಿದ್ದಂತೆ ಕಾಶ್ಮೀರ ಕಣಿವೆಯ ನಿವಾಸಿಗಳು ಸೇನಾಪಡೆಯ ವಿರುದ್ಧ ಭುಗಿಲೆದ್ದಿದ್ದು, ಅಲ್ಲಿ ಸೇನಾ ಪಡೆ ಮತ್ತು ಜನರ ನಡುವಿನ ಘರ್ಷಣೆಯಲ್ಲಿ ಕನಿಷ್ಠ 110 ಜನರು ಸಾವಿಗೀಡಾಗಿದ್ದರು.

ಮೂವರು ಯುವಕರನ್ನು ಉಗ್ರರೆಂದು ಬಣ್ಣಿಸಿ, ಅವರನ್ನು ಹತ್ಯೆಗೈದ ಆರೋಪದಲ್ಲಿ ಪೊಲೀಸರು 11 ಮಂದಿ ವಿರುದ್ಧ ಕೇಸು ದಾಖಲಿಸಿದ್ದರು. ಇದೀಗ ಅದರಲ್ಲಿ ಏಳು ಯೋಧರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

SCROLL FOR NEXT