ಪಣಜಿ: ಗೋವಾದ ಟ್ರಯಲ್ ರೂಮ್ ಪ್ರಕರಣದಲ್ಲಿ ಫ್ಯಾಬ್ ಇಂಡಿಯಾದ ರಕ್ಷಣೆಗೆ ಬಂದಿರುವ ಗೋವಾ ಮುಖ್ಯಮಂತ್ರಿ ಲಕ್ಷ್ಮಿಕಾಂತ್ ಪರ್ಸೇಕರ್ ಅವರು ನೌಕರರು ಮಾಡಿದ ಕಿಡೀಗೇಡಿತನಕ್ಕೆ ಫ್ಯಾಬ್ ಇಂಡಿಯಾ ಸಂಸ್ಥೆಯನ್ನು ದೂಷಿಸಲಾಗುವುದಿಲ್ಲ ಎಂದು ಸೋಮವಾರ ತಿಳಿಸಿದ್ದಾರೆ. ಕಳೆದ ವಾರ ಫ್ಯಾಬ್ ಇಂಡಿಯಾ ಬಟ್ಟೆ ಅಂಗಡಿಯೊಂದರಲ್ಲಿ ಟ್ರಯಲ್ ರೂಮ್ ಕಡೆ ತಿರುಗಿಸಿದ್ದ ಸಿಸಿಟಿವಿ ಒಂದನ್ನು ಪತ್ತೆ ಹಚ್ಚಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಗೋವಾ ಪೊಲೀಸರಿಗೆ ದೂರು ನೀಡಿದ್ದರು.
"ಫ್ಯಾಬ್ ಇಂಡಿಯಾ ಗೌರವಯುತ ಸಂಸ್ಥೆ. ಇದು ಸಂಸ್ಥೆಯ ತಪ್ಪಲ್ಲ ಬಹುಷಃ ಆ ಅಂಗಡಿಯ ಸಿಬ್ಬಂದಿಯ ಚೇಷ್ಟೆ ಇರಬಹುದು ಎಂದು ನನ್ನ ವೈಯಕ್ತಿಕ ನಂಬಿಕೆ. ಯಾರೋ ಕೆಲವು ಹೆಣ್ಣುಬಾಕರು ಮಾಡಿರುವ ಕೆಲಸ ಅದು" ಎಂದು ಪರ್ಸೇಕರ್ ವರದಿಗಾರರಿಗೆ ತಿಳಿಸಿದ್ದಾರೆ.
ಈ ಪ್ರಕರಣದಲ್ಲ ಗಣ್ಯವ್ಯಕ್ತಿಯೊಬ್ಬರಿಗೆ ತೊಂದರೆ ಆಗಿರುವುದರಿಂದ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಇದು ಎಲ್ಲರಿಗೂ ಪಾಠವಾಗಲಿದ್ದು, ಇಂತಹ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಇದು ಪ್ರತ್ಯೇಕ ಘಟನೆ ಎಂದಿರುವ ಅವರು ಮಹಿಳೆಯರಿಗೆ ಗೋವಾ ಸುರಕ್ಷಿತ ಪ್ರವಾಸಿ ತಾಣ ಎಂದಿದ್ದಾರೆ.