ಪ್ರಧಾನ ಸುದ್ದಿ

ನಮ್ಮೊಂದಿಗೆ ದೇವರಿದ್ದಾನೆ: ಕೇಜ್ರಿವಾಲ್

Rashmi Kasaragodu

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದೇ ಗೆಲ್ತೀನಿ ಅಂತ ಆತ್ಮವಿಶ್ವಾಸವನ್ನು ಹೊಂದಿರುವ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಅರವಿಂದ್ ಕೇಜ್ರಿವಾಲ್ ದೇಶ ಸೇವೆ ಮಾಡಲು ಕಾಲ ಕೂಡಿ ಬಂದಿದೆ ಎಂದಿದ್ದಾರೆ.

ಚುನಾವಣಾ ಪ್ರಚಾರದ ಕೊನೆಯ ದಿನವಾದ ಇಂದು ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೇಜ್ರಿವಾಲ್ ತನ್ನೊಂದಿಗೆ ದಿನರಾತ್ರಿ ಪ್ರಚಾರಕ್ಕೆ ನೆರವಾದ ಎಲ್ಲ ಆಪ್ ಕಾರ್ಯಕರ್ತರಿಗೆ ಧನ್ಯವಾದಗಳನ್ನರ್ಪಿಸಿದ್ದಾರೆ.

ನಾವು ದೇಶಕ್ಕಾಗಿ ದುಡಿಯಬೇಕಿದೆ. ನಮ್ಮೊಂದಿಗೆ ದೇವರಿದ್ದಾನೆ. ದೆಹಲಿಯ ನಾಗರಿಕರು ಇಲ್ಲಿ ಗೆಲುವು ಸಾಧಿಸುತ್ತಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಆದಾಗ್ಯೂ, ಆಪ್ ಮತ್ತು ಬಿಜೆಪಿ ನಡುವಿನ ವಾಗ್ವಾದ ಇವತ್ತು ಕೂಡಾ ಮುಂದುವರಿದಿದ್ದು, ಮತಕ್ಕಾಗಿ ಬಿಜೆಪಿ ಜನರಿಗೆ ಹಣ ಹಂಚುತ್ತಿದೆ ಎಂದು ಆಪ್ ಹಿರಿಯ ನಾಯಕ ಅಶುತೋಷ್ ಆರೋಪಿಸಿದ್ದಾರೆ.



ಈ ಚುನಾವಣೆಯಲ್ಲಿ ಆಪ್ ಮುನ್ನಡೆ ಸಾಧಿಸಲಿದೆ ಎಂದು ಚುನಾವಣಾ ಸಮೀಕ್ಷೆಗಳು ತೋರಿಸುತ್ತಿವೆ. ಅದಕ್ಕಾಗಿ ಇನ್ನುಳಿದ ಪಕ್ಷಗಳು ಕೊನೇ ಗಳಿಗೆಯಲ್ಲಿ ಕೆಸರೆರಚಾಟ ಮಾಡುತ್ತವೆ ಎಂದು ಆಪ್ ವಕ್ತಾರೆ ಅತಿಶಿ ಮರ್ಲೇನಾ ಹೇಳಿದ್ದಾರೆ.

SCROLL FOR NEXT