ಪ್ರಧಾನ ಸುದ್ದಿ

ಇದು ದೆಹಲಿ ಜನತೆಯ ಗೆಲುವು, ಈ ಅಭೂತಪೂರ್ವ ಗೆಲುವಿನಿಂದ ಭಯವೂ ಆಗುತ್ತಿದೆ : ಕೇಜ್ರಿವಾಲ್

Lingaraj Badiger

ನವದೆಹಲಿ: ಇದು ದೆಹಲಿ ಜನತೆಯ ಗೆಲುವು, ಈ ಅಭೂತಪೂರ್ವ ಗೆಲುವು ನೀಡಿದ ದೆಹಲಿ ಜನತೆಗೆ ವಂದನೆ, ಅಭಿನಂದನೆ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ ಹೇಳಿದ್ದಾರೆ.

ಆಪ್ ಕಚೇರಿಯ ಬಳಿ ವಿಜಯೋತ್ಸವ ಆಚರಿಸುತ್ತಿದ್ದ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಇದು ಸತ್ಯಕ್ಕೆ ದೊರಕಿದ ಅಭೂತಪೂರ್ವ ಗೆಲುವು. ಈ ಗೆಲುವಿನಿಂದಾಗಿ ನಮ್ಮ ಜವಾಬ್ದಾರಿ ಮತ್ತಷ್ಟು ಹೆಚ್ಚಿಸಿದೆ ಮತ್ತು ಭಯವೂ ಆಗುತ್ತಿದೆ ಎಂದು ಹೇಳಿದರು.

ನಾನು ಒಬ್ಬ ಸಣ್ಣ ವ್ಯಕ್ತಿ, ಎಲ್ಲರೂ ಸೇರಿ ದೆಹಲಿ ಜನತೆಯ ಸೇವೆ ಮಾಡಬೇಕಿದೆ. ದೆಹಲಿ ಎಲ್ಲರಿಗೂ ಸೇರಿದ್ದು ಎಂದು ಹೇಳಿರುವ ಕೇಜ್ರಿವಾಲ್, ತಾವು ಜನಸಾಮಾನ್ಯರ ಮುಖ್ಯಮಂತ್ರಿಯಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ಭ್ರಷ್ಟಾಚಾರ ಮತ್ತು ವಿಐಪಿ ಸಂಸ್ಕೃತಿಗೆ ಕಡಿವಾಣ ಹಾಕುವುದಾಗಿ ಹೇಳಿದ್ದಾರೆ.

ಅಹಂಕಾರದಿಂದಾಗಿ ಬಿಜೆಪಿ, ಕಾಂಗ್ರೆಸ್ ಈ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿವೆ. ಹೀಗಾಗಿ ನಾವು ಗೆದ್ದಿದ್ದೇವೆ ಎಂದು ಅಹಂಕಾರ ಪಡುವುದು ಬೇಡ. ಅಂಹಕಾರ ತೋರಿಸಿದರೆ ಮುಂದಿನ ಚುನಾವಣೆಯಲ್ಲಿ ಜನರು ನಮ್ಮನ್ನು ಸೋಲಿಸುವುದು ಗ್ಯಾರಂಟಿ ಎಂದು ಕೇಜ್ರಿವಾಲ್ ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದ್ದಾರೆ.

SCROLL FOR NEXT