ಪ್ರಧಾನ ಸುದ್ದಿ

ಜೆಡಿಯುಗೆ ವಿಪಕ್ಷ ಸ್ಥಾನ ನೀಡಿದ ಬಿಹಾರ ಸ್ಪೀಕರ್; ಬಿಜೆಪಿ ಪ್ರತಿಭಟನೆ

Rashmi Kasaragodu

ಪಾಟ್ನಾ: ಬಿಹಾರ ವಿಧಾನಸಭಾ ಕಲಾಪದ ವೇಳೆ ಸ್ಪೀಕರ್ ಉದಯ್ ನಾರಾಯಣ್ ಚೌಧರಿ ಜನತಾ ದಳ (ಸಂಯುಕ್ತ)  ಪಕ್ಷಕ್ಕೆ ವಿಪಕ್ಷ ಸ್ಥಾನ ನೀಡಿರುವುದನ್ನು ಖಂಡಿಸಿ ಬಿಜೆಪಿ ಶಾಸಕರು ಪ್ರತಿಭಟನೆ ನಡೆಸಿದ್ದಾರೆ.

ಗುರುವಾರ ಬಿಹಾರದ ಸ್ಪೀಕರ್  ಜೆಡಿಯುವನ್ನು ವಿಪಕ್ಷ ಎಂದು ಉಲ್ಲೇಖಿಸಿರುವುದು ಮಾತ್ರವಲ್ಲದೆ ಜೆಡಿಯು ಪಕ್ಷದ ವಿಜಯ್ ಚೌಧರಿ ಅವರಿಗೆ ವಿಪಕ್ಷ ನಾಯಕನ ಸ್ಥಾನವನ್ನು ನೀಡಿದ್ದರು. ಈ ಬೆಳವಣಿಗೆಗೆ ಸಂಬಂಧಿಸಿದಂತೆ ಸ್ಪೀಕರ್ ತಾರತಮ್ಯ ತೋರುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಶಾಸಕರು ಸ್ಪೀಕರ್ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದ್ದಾರೆ.

ವಿಧಾನಸಭೆಯಲ್ಲಿ ನಮಗೆ ಪ್ರಧಾನ ವಿಪಕ್ಷ ಸ್ಥಾನವನ್ನು ನೀಡಬೇಕು  ಹಾಗು ವಿಶ್ವಾಸಮತ ಪ್ರಕ್ರಿಯೆ ವೇಳೆ ನಮಗೆ ವಿಧಾನಸಭೆಯಲ್ಲಿ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಬೇಕೆಂದು ಜೆಡಿಯು ಬೇಡಿಕೆಯನ್ನೊಡ್ಡಿತ್ತು.

ಏತನ್ಮಧ್ಯೆ, ಇಲ್ಲಿಯವರೆಗೆ ವಿಪಕ್ಷ ನಾಯಕನ ಸ್ಥಾನ ಹೊಂದಿದ್ದ ಬಿಜೆಪಿ ಹಿರಿಯ ನಾಯಕ ನಂದ್ ಕಿಶೋರ್ ಯಾದವ್ ತಮಗೆ ನೀಡಿದ ಎಲ್ಲ ಸೌಲಭ್ಯವನ್ನು ಹಿಂತಿರುಗಿಸಿದ್ದಾರೆ.

ಫೆ. 20ರಂದು ನಡೆಯಲಿರುವ ವಿಶ್ವಾಸ ಮತ ನಿರ್ಣಯದಲ್ಲಿ ಪದಚ್ಯುತ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರಿಗೆ ಬಿಜೆಪಿ ಬೆಂಬಲ ನೀಡಲಿದೆ.




SCROLL FOR NEXT