ಅಹಮದಾಬಾದ್: ಒಂಟೆಯೊಂದು ತಲೆಯ ಮೇಲೆ ಕಚ್ಚಿದ್ದರ ಪರಿಣಾಮ ೪೫ ವರ್ಷದ ಮನುಷ್ಯನೊಬ್ಬ ಮೃತ ಪಟ್ಟ ಘಟನೆ ಸೋಮವಾರ ವರದಿಯಾಗಿದೆ.
ಒಂಟೆಯ ಮಾಲಿಕನನ್ನು ಹೆಚ್ಚಿನ ವಿಚಾರಣೆಗೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ನಗರದ ಬಾಪುನಗರ ಪ್ರದೇಶದ ಜಮುನಾನಗರ ಸ್ಲಂನಲ್ಲಿ ಗೋವಿಂದ ತ್ರಿವೇದಿ (೪೫) ನಡೆದು ಹೋಗುತ್ತಿದ್ದಾಗ ರಾತ್ರಿಯ ವೇಳೆಯಲ್ಲಿ ಕಟ್ಟಲಾಗಿದ್ದ ಒಂಟೆಯೊಂದು ಅವನ ತಲೆಗೆ ಕಚ್ಚಿದೆ. ಪ್ರಾಥಮಿಕ ಚಿಕೆತ್ಸೆಯ ಹೊರತಾಗಿಯೂ ಅವನು ಇಂದು ಪ್ರಾಣ ಬಿಟ್ಟಿದ್ದಾನೆ" ಎಂದು ಬಾಪುನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪಿ ಡಿ ಪರ್ಮಾರ್ ಹೇಳಿದ್ದಾರೆ. ಈ ಒಂಟೆಯ ಮಾಲೀಕ ಲಾಲ್ ಸಿಂಗ್ ಅವರನ್ನು ಬಂಧಿಸಿ ಒಂಟೆಗೆ ಯಾವುದಾದರೂ ಖಾಯಿಲೆಯಿತ್ತೋ? ಅಥವಾ ಈ ಹಿಂದೆ ಅದು ಇನ್ಯಾರನ್ನಾದರೂ ಕಚ್ಚಿತ್ತೋ ಎಂದು ಪ್ರಶ್ನಿಸಲಾಗುತ್ತಿದೆ ಎಂದು ಪರ್ಮಾರ್ ತಿಳಿಸಿದ್ದಾರೆ.
ಈ ಪ್ರಾಣಿಯ ಮಾಲಿಕನ ಬೇಜವಾಬ್ದಾರಿತನ ಏನಾದರು ತಿಳಿದು ಬಂದರೆ ಐಪಿಸಿ ಸೆಕ್ಷನ್ ೩೦೪ ರ ಪ್ರಕಾರ ಪ್ರಕರಣ ದಾಖಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಹೆಚ್ಚಿನ ವಿವರಗಳು ದೊರಕಲಿವೆ ಎಂದಿದ್ದಾರೆ.