ನವದೆಹಲಿ: ಕೇಂದ್ರ ಸರ್ಕಾರ ರೂಪಿಸಿರುವ ಅಮೃತ್ ಯೋಜನೆ ರಾಜ್ಯದಲ್ಲಿ ಬಿಜೆಪಿ ಪಾಲಿಗೆ ನಿಜಕ್ಕೂ ಅಮೃತದ ಯೋಜನೆ ಆಗಲಿದೆ.
ಕರ್ನಾಟಕದಿಂದ ಆಯ್ಕೆ ಆಗಿರುವ 26 ನಗರಗಳ ಪೈಕಿ 18 ನಗರಗಳು ಬಿಜೆಪಿ ಸಂಸದರು ಪ್ರತಿನಿಧಿಸುತ್ತಿರುವ ಕ್ಷೇತ್ರ ವ್ಯಾಪ್ತಿಯಲ್ಲಿವೆ. ಕಾಂಗ್ರೆಸ್ ಸಂಸದರು ಪ್ರತಿನಿಧಿಸುತ್ತಿರುವ
ಕ್ಷೇತ್ರಗಳ ವ್ಯಾಪ್ತಿಯಲ್ಲಿ ಆರು ನಗರಗಳಿವೆ. ಜೆಡಿಎಸ್ ಪ್ರತಿನಿಧಿಸುತ್ತಿರುವ ಕ್ಷೇತ್ರ ವ್ಯಾಪ್ತಿಯ ಎರಡು ನಗರಗಳಿವೆ. ಬಿಜೆಪಿ ಲೋಕಸಭಾ ಸದಸ್ಯರು ಪ್ರತಿನಿಧಿಸುತ್ತಿರುವ ಎಲ್ಲ ಕ್ಷೇತ್ರಗಳಿಂದಲೂ ತಲಾ ಒಂದು ಅಥವಾ ಎರಡು ನಗರಗಳನ್ನು ಆಯ್ಕೆ ಮಾಡಲಾಗಿದೆ.
ಕಾಂಗ್ರೆಸ್ ಪ್ರತಿನಿಧಿಸುತ್ತಿರುವ ಉಳಿದ ಮೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವೊಂದು ನಗರವನ್ನೂ ಆಯ್ಕೆ ಮಾಡಿಲ್ಲ. ಅದೂ ಅತಿ ಹಿಂದುಳಿದ ಜಿಲ್ಲೆಗಳೆಂಬ ಹಣೆಪಟ್ಟಿ ಎಂಬ ಶಿರೋನಾಮೆಯನ್ನು ಚಾಮರಾಜನಗರ ಜಿಲ್ಲೆ ಹೊತ್ತುಕೊಂಡಿದ್ದರೂ ಅದನ್ನು ಅಮೃತ್ ಯೋಜನೆಯಿಂದ ಹೊರಗುಳಿದಿದೆ. ಅದಕ್ಕೆ ರಾಜಕೀಯ ಕಾರಣವೋ ಬೇರೆನೋ ಕಾರಣವೋ ಗೊತ್ತಿಲ್ಲ. ಆದರೆ, ನಿಜವಾಗಿಯೂ ಆಯ್ಕೆಯಾಗಬೇಕಾಗಿದ್ದ ಚಿಕ್ಕಬಳ್ಳಾಪುರ ಮತ್ತು ಚಿಕ್ಕೋಡಿ ನಗರಗಳಿಗೆ ಅಮೃತ್ ಯೋಜನೆ ಭಾಗ್ಯವಿಲ್ಲ.
ಬಿ.ಎಸ್.ಯಡಿಯೂರಪ್ಪ ಪ್ರತಿನಿಧಿಸುತ್ತಿಸುತ್ತಿರುವ ಶಿವಮೊಗ್ಗ ಕ್ಷೇತ್ರದಲ್ಲಿ ಶಿವಮೊಗ್ಗ ಮತ್ತು ಭದ್ರಾವತಿಯನ್ನು ಆಯ್ಕೆ ಮಾಡಲಾಗಿದೆ. ಹಾಗೆಯೇ ಶೋಭಾ ಕರಂದ್ಲಾಜೆ ಪ್ರತಿನಿಧಿಸುತ್ತಿರುವ ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರದಿಂದ ಉಡುಪಿ ಮತ್ತು ಚಿಕ್ಕಮಗಳೂರನ್ನು ಆಯ್ಕೆ ಮಾಡಲಾಗಿದೆ. ಆದರೆ, ಮಡಿಕೇರಿಯನ್ನು ಈ ಯೋಜನೆಗೆ ಸೇರ್ಪಡೆಯಾಗಿಲ್ಲ.
ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಬೆಳಗಾವಿ, ಕಲಬುರಗಿ, ದಾವಣಗೆರೆ, ಬಳ್ಳಾರಿ, ವಿಜಯಪುರ, ಬೀದರ್, ರಾಯಚೂರು, ಶಿವಮೊಗ್ಗ, ತುಮಕೂರು, ಹೊಸಪೇಟೆ, ಹಾಸನ, ಗದಗ, ಬೆಟಗೇರಿ, ರಾಬರ್ಟ್ಸನ್ಪೇಟೆ, ಉಡುಪಿ, ಭದ್ರಾವತಿ, ಚಿತ್ರದುರ್ಗ, ಕೋಲಾರ, ಮಂಡ್ಯ, ಚಿಕ್ಕಮಗಳೂರು, ಗಂಗಾವತಿ, ಬಾಗಲಕೋಟೆ, ರಾಣಿಬೆನ್ನೂರು.