ಪ್ರಧಾನ ಸುದ್ದಿ

ಆಂಧ್ರದಲ್ಲಿ ಮತ್ತಿಬ್ಬರು ಆದಿವಾಸಿಗಳನ್ನು ಕೊಂದ ಮಾವೋವಾದಿಗಳು

Guruprasad Narayana

ಹೈದರಾಬಾದ್: ಪೊಲೀಸರಿಗೆ ಮಾಹಿತಿದಾರರಾಗಿದ್ದರು ಎಂಬ ಶಂಕೆಯ ಮೇಲೆ ಇನ್ನಿಬ್ಬರು ಆದಿವಾಸಿಗಳನ್ನು ಮಾವೋವಾದಿಗಳು ಆಂಧ್ರ ಪ್ರದೇಶದಲ್ಲಿ ಗುಂಡಿಕ್ಕಿ ಕೊಂದ ಘಟನೆ ನಡೆದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಮಾವೋವಾದಿಗಳ) ಬಣಕ್ಕೆ ಸೇರಿದ ಇಬ್ಬರು ತೀವ್ರವಾದಿಗಳು ಪೂರ್ವ ಗೋದಾವರಿಯ ಬುರಕಾವಕೋಟ ಗ್ರಾಮದಲ್ಲಿ ಇಬ್ಬರನ್ನು ಭಾನುವಾರ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ನಿಷೇಧಿತ ಸಂಘಟನೆ ಬಿಟ್ಟು ಹೋಗಿರುವ ಪತ್ರದಲ್ಲಿ, ಈ ಇಬ್ಬರು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗೆ ಮಾಹಿತಿದಾರರಾಗಿ ಜನಗಳಿಂದ ದುಡ್ಡು ಕೀಳುತ್ತಿದ್ದರು ಎಂದು ಬರೆಯಲಾಗಿದೆ.

ಕೂಡಲೆ ಗ್ರಾಮಕ್ಕೆ ತೆರಳಿದ ಪೊಲೀಸರು ಮೃತ ದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಕಳೆದ ವಾರ ಮಾವೋವಾದಿಗಳು ಇದೇ ಜಿಲ್ಲೆಯಿಂದ ಇಬ್ಬರು ಆದಿವಾಸಿ ಯುವಕರನ್ನು ಅಪಹರಿಸಿ ಕೊಂದಿದ್ದರು. ಈ ಘಟನೆ ಯೆಟಪಾಕ ಮಂಡಲದ ಕಮನಥೋಗು ಗ್ರಾಮದಲ್ಲಿ ನಡೆದಿತ್ತು

ಚತ್ತೀಸ್ ಘರ್ ನ ಗಡಿಯಲ್ಲಿರುವ ವಿಶಾಖಪಟ್ಟಣ ಮತ್ತು ಪೂರ್ವ ಗೋದಾವರಿ ಪ್ರದೇಶಗಳು ನಕ್ಸಲ್ ಪೀಡಿತ ಪ್ರದೇಶಗಳು. ಪೊಲೀಸ್ ಮಾಹಿತಿದಾರರೆಂದು ಶಂಕಿಸಿ ನಕ್ಸಲರು ಹಲವಾರು ಆದಿವಾಸಿಗಳನ್ನು ಮತ್ತು ಗ್ರಾಮಸ್ಥರನ್ನು ಈ ಭಾಗದಲ್ಲಿ ಕೊಂದುಹಾಕಿದ್ದಾರೆ.

SCROLL FOR NEXT