ದೇಶದಲ್ಲಿ ಹೆಚ್ಚುತ್ತಿರುವ ಕೋಮು ಘರ್ಷಣೆ, ಅಸಹನೆ, ಅದಕ್ಕೆ ಕೇಂದ್ರ ಸರ್ಕಾರ ತಳೆದಿರುವ ದಿವ್ಯ ಮೌನ ವಿರೋಧಿಸಿ ಹಲವಾರು ಹಿರಿಯ ಲೇಖಕರು ಇಲ್ಲಿಯವರೆಗೆ 'ಕೇಂದ್ರ ಸಾಹಿತ್ಯ ಅಕಾಡೆಮಿ' ಪ್ರಶಸ್ತಿ ಹಿಂದಿರುಗಿಸಿದ್ದಾರೆ. ಈಗ ಆ ಸಾಲಿಗೆ ಸೇರಿರುವ ಪಂಜಾಬಿನ ಹಿರಿಯ ಲೇಖಕಿ ದಲಿಪ್ ಕೌರ್ ತಿವಾನ ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ 'ಪದ್ಮಶ್ರೀ' ಹಿಂದಿರುಗಿಸುವ ಮೂಲಕ ಪ್ರತಿಭಟಿಸಿದ್ದಾರೆ.
೧೯೮೪ ರಲ್ಲಿ ಸಿಖ್ಖರ ಮೇಲೆ ಆದ ದೌರ್ಜನ್ಯದಂತೆಯೇ ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ವಿರೋಧಿಸಿ ಪ್ರಶಸ್ತಿ ಹಿಂದಿರುಗಿಸುತ್ತಿರುವುದಾಗಿ ಲೇಖಕಿ ತಿಳಿಸಿದ್ದಾರೆ. ಗೌತಮ ಬುದ್ಧ ಮತ್ತು ಗುರುನಾನಕ್ ಜನಿಸಿದ ನಾಡಿನಲ್ಲಿ ಈ ಘಟನೆಗಳು ದುರದೃಷ್ಟಕರ ಎಂದಿದ್ದಾರೆ.
ಸತ್ಯ ಮತ್ತು ನ್ಯಾಯಕ್ಕಾಗಿ ನಿಂತವರನ್ನು ಕೊಲ್ಲುವುದು ದೇವರ ಕಣ್ಣಿನಲ್ಲಿ ಪಾಪದ ಕೆಲಸ. ಆದುದರಿಂದ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸುತ್ತಿದ್ದೇನೆ ಎಂದು ಅವರು ಸಂಶೋಧಕ ಕಲ್ಬುರ್ಗಿ ಅವರ ಕೊಲೆಯನ್ನು ಪರೋಕ್ಷವಾಗಿ ವಿರೋಧಿಸಿ ಹೇಳಿದ್ದಾರೆ.
ಸದ್ಯದ ಕೇಂದ್ರ ಸರ್ಕಾರದ ಧೋರಣೆಯ ವಿರುದ್ಧ ಇಲ್ಲಿಯವರೆಗೂ ಸುಮಾರು ೨೦ಕ್ಕೂ ಹೆಚ್ಚು ಸಾಹಿತಿಗಳು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸಿದ್ದು, ಮೊದಲ ಬಾರಿಗೆ ಪದ್ಮ ಪ್ರಶಸ್ತಿಯನ್ನು ಹಿಂದಿರುಗಿಸಿರುವುದು ಕೌರ್ ಅವರೇ ಮೊದಲು.