ಬೆಂಗಳೂರು: ಸಿದ್ದರಾಮಯ್ಯ ಅವರ ನಿವಾಸದಲ್ಲಿ ನಡೆದ ಕಿರುಸಭೆಯಲ್ಲಿ ಮೇಯರ್ ಆಯ್ಕೆ ಬಗ್ಗೆ ಚರ್ಚೆ ನಡೆಯಿತು. ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಜತೆ ಮಾತುಕತೆ ನಡೆಸಿದ್ದರು. ಕಾಂಗ್ರೆಸ್ನ ಪರಾಜಿತ ಅಭ್ಯರ್ಥಿಗಳ ಒಂದು ಗುಂಪು ಮಂಜುನಾಥ ರೆಡ್ಡಿ ಅವರನ್ನು ಮೇಯರ್ ಆಗಿ ಆಯ್ಕೆ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ.
ಇದಾದ ನಂತರ ಜೆಡಿಎಸ್ ಶಾಸಕರು ಬೆಂಗಳೂರು ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿ ಮಾಡಿ ಮೇಯರ್-ಉಪಮೇಯರ್ ಆಯ್ಕೆ ವಿಚಾರದಲ್ಲಿ ಮಹತ್ವದ ಚರ್ಚೆ ನಡೆಸಿದರು. ಉಪಮೇಯರ್ ಆಯ್ಕೆ ವಿಚಾರದಲ್ಲಿ ಯಾವುದೇ ಬಿsನ್ನಮತ ಇಲ್ಲದೇ ಇದ್ದರೂ ಮೇಯರ್ ಆಯ್ಕೆ ಸಂಬಂಧ ಕಾಂಗ್ರೆಸ್ನ ಸಚಿವರು ಹಾಗೂ ಶಾಸಕರು ಇಬ್ಭಾಗವಾಗಿದ್ದರು.
ಬಯಲಿಗೆ ಬಂತು ಭಿನ್ನಮತ:
ಇದಾದ ಬಳಿಕ ಸಾಯಂಕಾಲ 7 ಗಂಟೆಗೆ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ, ಬೆಂಗಳೂರು ನಗರವನ್ನು ಪ್ರತಿನಿಧಿಸುವ ಐವರು ಮಂತ್ರಿಗಳು,ಶಾಸಕರು ಮತ್ತು ವಿಧಾನಸಭೆ ಚುನಾವಣೆಯ ಪರಾಜಿತ ಅಭ್ಯರ್ಥಿಗಳು, ಎಐಸಿಸಿ ಕಾರ್ಯದರ್ಶಿ ಚೆಲ್ಲಕುಮಾರ್ ನೇತೃತ್ವದಲ್ಲಿ ಖಾಸಗಿ ಹೊಟೇಲ್ನಲ್ಲಿ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಮುಖಂಡರ ನಡುವಿನ ಭಿನ್ನಮತ ಬಯಲಿಗೆ ಬಂತು. ಮಂಜುನಾಥ ರೆಡ್ಡಿ ಅವರ ಪರ ಸಚಿವ ರಾಮಲಿಂಗಾ ರೆಡ್ಡಿ ಬ್ಯಾಟಿಂಗ್ ಮಾಡಿದರೆ, ಸತ್ಯನಾರಾಯಣ ಪರ ದಿನೇಶ್ ಗುಂಡೂರಾವ್ ನಿಂತರು. ನಗರದ ಶಾಸಕರ ಬೆಂಬಲ ಸತ್ಯನಾರಾಯಣ ಪಾಲಾದರೆ, ಸಚಿವರು ಮಂಜುನಾಥ ರೆಡ್ಡಿ ಪರ ನಿಂತರು. ಕೊನೆಗೆ ಒಮ್ಮತ ಮೂಡದೇ ಇದ್ದಾಗ, ನಿರ್ಣಯವನ್ನು ಸಿಎಂ ಸಿದ್ದರಾಮಯ್ಯ ಹಾಗೂ ಪರಮೇಶ್ವರ ನಿರ್ಣಯಕ್ಕೆ ಬಿಡುವ ನಿರ್ಧಾರ ತೆಗೆದುಕೊಳ್ಳಲಾಯಿತು.
ಪಂಚ ಸಚಿವರ ಆಯ್ಕೆ:
ಉಭಯ ಮುಖಂಡರು ಅಂತಿಮವಾಗಿ ನಿರ್ಣಯ ತೆಗೆದುಕೊಳ್ಳುವ ಜವಾಬ್ದಾರಿಯನ್ನು ನಗರದ ಐವರು ಸಚಿವರ ಹೆಗಲಿಗೇರಿಸಿದರು. ತಡರಾತ್ರಿ ಸಭೆ ನಡೆಸಿದ ಸಚಿವರಾದ ರಾಮಲಿಂಗಾ ರೆಡ್ಡಿ, ಕೆ.ಜೆ. ಜಾರ್ಜ್, ರೋಶನ್ ಬೇಗ್, ದಿನೇಶ್ ಗುಂಡೂರಾವ್ ಹಾಗೂ ಕೃಷ್ಣ ಬೈರೇಗೌಡ ಅವರು ಮಂಜುನಾಥ್ ರೆಡ್ಡಿ ಅವರನ್ನು ಮೇಯರ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ಸಚಿವ ದಿನೇಶ್ ಗುಂಡೂರಾವ್ ಮನವೊಲಿಸುವಲ್ಲಿ ಸಫಲರಾಗಿರುವ ಉಳಿದ ಸಚಿವರು ಸತ್ಯನಾರಾಯಣ ಅವರಿಗೆ ಆಡಳಿತಪಕ್ಷದ ನಾಯಕನ ಸ್ಥಾನ ನೀಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.