ಉನಾ ದಲಿತ ದೌರ್ಜನ್ಯದ ಘಟನೆಯ ದೃಶ್ಯ
ಹೈದರಾಬಾದ್: ಗುಜರಾತಿನ ಉನಾದಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಸಿದ ಆರೋಪಿಗಳನ್ನು ಸಮರ್ಥಿಸಿಕೊಂಡು ಭಾಷಣ ಮಾಡಿದ ಆರೋಪದ ಮೇಲೆ ತೆಲಂಗಾಣ ಬಿಜೆಪಿ ಶಾಸಕ ರಾಜಾ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ತಮ್ಮ ಭಾಷಣದಲ್ಲಿ ದ್ವೇಷ ಪೂರಿತ ಭಾಷಣ ಮಾಡಿದ್ದಕ್ಕಾಗಿ ಸಿಂಗ್ ವಿರುದ್ಧ ಮಂಗಲಹಟ್ ಪೊಲೀಸ್ ಠಾಣೆಯಲ್ಲಿ ಮಾಲಾ ಸಂಕ್ಷೇಮ ಸಂಘದ ಅಧ್ಯಕ್ಷ ಬಿ ರಾಮಪ್ರಸಾದ್ ದೂರು ನೀಡಿದ್ದಾರೆ.
ಈ ದೂರಿನ ಹಿನ್ನಲೆಯಲ್ಲಿ ಆಗಸ್ಟ್ 2 ರಂದು ಐ ಪಿ ಸಿ ಸೆಕ್ಷನ್ 153ರಡಿ (ವಿವಿಧ ಗುಂಪುಗಳ ನಡುವೆ ದ್ವೇಷಕ್ಕೆ ಉತ್ತೇಜನೆ) ಬಿಜೆಪಿ ಶಾಸಕನ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಮಂಗಲಹಟ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶೇಖರ್ ಹೇಳಿದ್ದಾರೆ.
"ಈ ಪ್ರಕರಣ ತನಿಖೆಯ ಹಂತದಲ್ಲಿದೆ" ಎಂದು ಪೊಲೀಸ್ ಸಹ ನಿರ್ದೇಶಕ ಕೆ ರಾಮ್ ಭೂಪಾಲ್ ಹೇಳಿದ್ದಾರೆ.
ಜುಲೈ 30 ರಂದು ಫೇಸ್ಬುಕ್ ನಲ್ಲಿ ಹಾಕಲಾಗಿದ್ದ ಎರಡೂ ವರೆ ನಿಮಿಷದ ವಿಡಿಯೋದಲ್ಲಿ ದಲಿತರ ವಿರುದ್ಧ ದೌರ್ಜನ್ಯವೆಸಗಿದ್ದ ಗೋರಕ್ಷರನ್ನು ಸಮರ್ಥಿಸಿಕೊಂಡಿದ್ದರು ಸಿಂಗ್ ಎಂದು ಆರೋಪಿಸಲಾಗಿದೆ. ಗೋಮಾಂಸ ತಿನ್ನುವವರು ಇಡೀ ಸಮುದಾಯಕ್ಕೆ ಅಪಕೀರ್ತಿ ಮತ್ತು ಅಂತಹವರಿಗೆ 'ಪಾಠ ಕಲಿಸಬೇಕು" ಎಂದು ಪ್ರಚೋದನಕಾರಿಯಾಗಿ ಹೇಳಿದ್ದರು ಎಂದು ಆರೋಪಿಸಲಾಗಿದೆ.
"ನಾನು ಆ ದಲಿತರನ್ನು ಕೇಳುತ್ತಿದ್ದೇನೆ (ಹಸುಗಳನ್ನು ಕೊಲ್ಲುವ). ಗೋವುಗಳನ್ನು ಕೊಂದು ಮಾಂಸ ತಿನ್ನುವ ಅವಶ್ಯಕತೆಯಿದೆಯೇ? ಇದು ನಿಜಕ್ಕೂ ತಪ್ಪು. ಇಂತಹ ಗಲೀಜು ದಲಿತರಿಂದ ದೇಶಭಕ್ತ, ಧರ್ಮವನ್ನು ಅನುಸರಿಸುವ ಮತ್ತು ಗೋವುಗಳನ್ನು ಪೂಜಿಸುವ ಇಡೀ ದಲಿತ ಸಮುದಾಯಕ್ಕೆ ಕಪ್ಪುಚುಕ್ಕೆ.
"ಗೋವುಗಳನ್ನು ಕೊಲ್ಲುವ ಮತ್ತು ಅದರ ಮಾಂಸ ತಿನ್ನುವ ದಲಿತರನ್ನು ಹೊಡೆಯುವುದನ್ನು ನಾನು ಬೆಂಬಲಿಸುತ್ತೇನೆ. ಅವರಿಗೆ ಪಾಠ ಕಲಿಸಿದವರನ್ನು ಬೆಂಬಲಿಸುತ್ತೇನೆ" ಎಂದು ಸಿಂಗ್ ವಿಡಿಯೋದಲ್ಲಿ ಹೇಳಿದ್ದಾರೆ ಎಂದು ಆರೋಪಿಸಲಾಗಿದೆ.
ನಮ್ಮ ಜತೆಗೆ ಗೋ ರಕ್ಷಣೆಯಲ್ಲಿ ಪಾಲ್ಗೊಳ್ಳುವ ಹಲವಾರು ದಲಿತರು ಇದ್ದಾರೆ ಎಂದು ಕೂಡ ಸಿಂಗ್ ಹೇಳಿದ್ದಾರೆ.
ಆಗಸ್ಟ್ 2 ರಂದು ಹೈದರಾಬಾದ್ ಪೊಲೀಸ್ ಕಮಿಷನರ್ ಕಚೇರಿ ಮುಂದೆ ಎಎಪಿ ನಾಯಕ ಸೋಮನಾಥ್ ಭಾರತಿ ಮುಂದಾಳತ್ವದಲ್ಲಿ ಧರಣಿ ನಡೆಸಿದ ತೆಲಂಗಾಣ ಕಾರ್ಯಕರ್ತರು ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸುವಂತೆ ಆಗ್ರಹಿಸಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos