ನವದೆಹಲಿ: ತೀವ್ರ ಟೀಕೆಗೆ ಒಳಗಾಗಿದ್ದ, ಜಮ್ಮು ಮತ್ತು ಕಾಶ್ಮೀರದಲ್ಲಿ ಗುಂಪು ನಿಯಂತ್ರಣಕ್ಕೆ ಬಳಸಲಾಗುವ ಪೆಲ್ಲೆಟ್ ಗನ್ ಗಳನ್ನು ಸಂಪೂರ್ಣವಾಗಿ ನಿಷೇಧಿಸುವುದಿಲ್ಲ ಅವುಗಳನ್ನು 'ವಿರಳಾತಿ ವಿರಳ ಪ್ರಕರಣಗಳಲ್ಲಿ' ಬಳಸಲಾಗುವುದು ಎಂದು ಹಿರಿಯ ಅಧಿಕಾರಿ ಇಂದು ಹೇಳಿದ್ದಾರೆ.
ಕಾಶ್ಮೀರ ಕಣಿವೆಯಲ್ಲಿ ನಿಜ ಪರಿಸ್ಥಿತಿಯನ್ನು ಪರಿಶೀಲಿಸಿ ಮತ್ತು ಭದ್ರತಾ ಪಡೆಗಳೊಂದಿಗೆ ವಿವರವಾಗಿ ಚರ್ಚಿಸಿ ಸಂಬಂಧಿಸಿದ ಹಿರಿಯ ಸರ್ಕಾರಿ ಇಲಾಖೆಗಳು ಈ ನಿರ್ಧಾರವನ್ನು ತಳೆದಿವೆ. ಪೆಲ್ಲೆಟ್ ಗನ್ ಉಪಯೋಗಿಸುವ ಆಯ್ಕೆ ಉಳಿದುಕೊಳ್ಳಲಿದೆ ಆದರೆ ಅದರ ಬಳಕೆ ವಿರಳಾತಿ ವಿರಳ ಪ್ರಕರಣಗಳಲ್ಲಿ ನಡೆಯಲಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಜುಲೈ 8 ರಂದು ಹಿಜಬುಲ್ ಮುಜಾಹಿದ್ದೀನ್ ಕಮ್ಯಾಂಡರ್ ಬುರ್ಹಾನ್ ವಾನಿ ಹತ್ಯೆ ನಂತರ ನಡೆದ ಕಾಶ್ಮೀರ ಗಲಭೆ-ಪ್ರತಿಭಟನೆ ಮತ್ತು ಹಿಂಸೆಯಲ್ಲಿ ಗುಂಪು ನಿಯಂತ್ರಣಕ್ಕೆ ಭದ್ರತಾ ಪಡೆಗಳು ಪೆಲ್ಲೆಟ್ ಗನ್ ಗಳನ್ನು ಬಳಸಿದ್ದ ಪರಿಣಾಮ ನಾಗರಿಕರಿಗೆ ದೊಡ್ಡ ಮಟ್ಟದ ಗಾಯಗಳಾಗಿದ್ದರಿಂದ ಸರ್ಕಾರ ತೀವ್ರ ಟೀಕೆಯನ್ನು ಎದುರಿಸಬೇಕಾಗಿತ್ತು.
ಆಗಸ್ಟ್ 24-25 ರಂದು ಕಾಶ್ಮೀರ ಕಣಿವೆಗೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪೆಲ್ಲೆಟ್ ಗನ್ ಗಳ ಬದಲಿಗೆ ಬೇರೆ ಮಾರ್ಗಗಳನ್ನು ಭದ್ರತಾ ಪಡೆಗಳಿಗೆ ಮುಂದಿನ ದಿನಗಳಲ್ಲಿ ಸೂಚಿಸಲಾಗುವುದು ಎಂಬ ಭರವಸೆ ನೀಡಿದ್ದರು. "ಮುಂದಿನ ಕೆಲವು ದಿನಗಳಲ್ಲಿ ಪೆಲ್ಲೆಟ್ ಗನ್ ಗಳಿಗೆ ಬದಲಾಗಿ ಅನ್ಯ ಪರಿಹಾರ ಸೂಚಿಸಲಿದ್ದೇವೆ. ಈ ಹಿಂದೆ ಈ ಗನ್ ಗಳನ್ನು ಮಾರಣಾಂತಿಕವಲ್ಲ ಎಂದು ಪರಿಗಣಿಸಲಾಗಿತ್ತು ಆದರೆ ಕೆಲವು ಘಟನೆಗಳು ಸಂಭವಿಸಿವೆ.. ನಾವು ಈ ವಿಷಯವಾಗಿ ಒಂದು ತಿಂಗಳ ಹಿಂದೆ ತಜ್ಞರ ಸಮಿತಿ ರಚಿಸಿದ್ದೇವೆ ಅವರು ಇನ್ನೆರಡು ತಿಂಗಳಲ್ಲಿ ವರದಿ ನೀಡಲಿದ್ದಾರೆ" ಎಂದು ಅವರು ಹೇಳಿದ್ದರು.
ಗೃಹ ಸಚಿವಾಲಯ ರಚಿಸಿದ್ದ ತಜ್ಞರ ಸಮಿತಿ ಪೆಲ್ಲೆಟ್ ಗನ್ ಗಳ ಬದಲಾಗಿ ಖಾರದ ಪುಡಿ ಆಧಾರಿತ 'ಪಾವ ಶೆಲ್' ಗಳನ್ನು ಬಳಸಲು ಅನುಮೋದನೆ ನೀಡಲಿದೆ ಎಂದು ತಿಳಿಯಲಾಗಿತ್ತು ಮತ್ತು ಈ ಸಮಿತಿ ಇದರ ಪ್ರಯೋಗವನ್ನು ಕೂಡ ನಡೆಸಿತ್ತು. ಈ ಪಾವ ಶೆಲ್ ಗಳ ಮಾರಾಣಾಂತಿಕವಾಗಿರದೆ ಗುರಿಯನ್ನು ತಾತ್ಕಾಲಿಕವಾಗಿ ನಿಲುಗಡೆ ಮಾಡಲು ಸಹಕಾರಿ ಎಂದು ತಿಳಿಯಲಾಗಿದೆ.