ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ
ರೋಹ್ತಕ್/ ಚಂಡೀಗಢ: ಸರ್ಕಾರಿ ಕೆಲಸ ಮತ್ತು ಶೈಕ್ಷಣಿಕ ಕೇಂದ್ರಗಳಲ್ಲಿ ಮೀಸಲಾತಿಗೆ ಬೇಡಿಕೆಯೊಡ್ಡಿ ಹರ್ಯಾಣದಲ್ಲಿ ಜಾಟ್ ಸಮುದಾಯವರ ನಡೆಸುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಜನಜೀವನವನ್ನು ಬಾಧಿಸಿದೆ. ಕಳೆದ ಏಳು ದಿನಗಳಿಂದ ಇಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಇದೀಗ ಹಿಂಸಾಚಾರಗಳು ತೀವ್ರಗೊಂಡಿದೆ. ಹರ್ಯಾಣದ ವಿವಿಧ ಭಾಗಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಡೆಯೊಡ್ಡಿದ ಪ್ರತಿಭಟನಾಕಾರರು ಜಿಂದ್ ಜಿಲ್ಲೆಯ ಬುಧಖೇರ ರೈಲ್ವೇ ನಿಲ್ದಾಣಕ್ಕೆ ಬೆಂಕಿ ಹಚ್ಚಿದ್ದಾರೆ.
ಹಿಂಸಾಚಾರ ತೀವ್ರಗೊಳ್ಳುತ್ತಿದ್ದಂತೆ ಹರ್ಯಾಣ ಮೂಲಕ ಹಾದುಹೋಗುವ 150ಕ್ಕಿಂತಲೂ ಹೆಚ್ಚು ರೈಲುಗಳನ್ನು ರದ್ದು ಮಾಡಲಾಗಿದೆ. ರೋಹ್ತಕ್, ಬಿವಾನಿ ಪ್ರದೇಶಗಳಲ್ಲಿ ನಿಷೇಧಾಜ್ಞೆ ಮುಂದುವರಿದಿದೆ. ಇಲ್ಲಿ ಮೊಬೈಲ್ ಎಸ್ಸೆಮ್ಮೆಸ್, ಇಂಟರ್ನೆಟ್ ಸೇವೆಗಳಿಗೆ ಸರ್ಕಾರ ಅನಿಶ್ಚಿತ ಕಾಲ ನಿಷೇಧ ಹೇರಿದ್ದು, ಆಕ್ರಮಣಕಾರರನ್ನು ಕಂಡರೆ ಗುಂಡಿಕ್ಕಿ ಕೊಲ್ಲಲು ಆದೇಶ ಹೊರಡಿಸಲಾಗಿದೆ.
ಈ ಪ್ರತಿಭಟನೆಯನ್ನು ನಿಯಂತ್ರಿಸಲು ಭಾರತೀಯ ಸೇನೆಯನ್ನು ಕರೆಯಲಾಗಿದೆ. ಆದರೆ ಎಲ್ಲ ರಸ್ತೆಗಳನ್ನು ಬಂದ್ ಮಾಡಿ ಪ್ರತಿಭಟನಾಕಾರರು ಹಿಂಸಾ ಪ್ರವೃತ್ತಿ ಮುಂದುವರಿಸಿದ್ದಾರೆ. ಸೈನಿಕರು ಹೆಲಿಕಾಪ್ಟರ್ ಮೂಲಕ ಹರ್ಯಾಣಕ್ಕೆ ಕರೆತರಲಾಗಿದ್ದು, 3,300 ಅರೆ ಸೈನಿಕರನ್ನು ಹರ್ಯಾಣದಲ್ಲಿ ನಿಯೋಜಿಸಲಾಗಿದೆ. ರೋಹ್ತಕ್ನಲ್ಲಿ ಹರ್ಯಾಣದ ವಿತ್ತ ಸಚಿವ ಅಭಿಮನ್ಯು ಅವರ ವಸತಿ ಮುಂದೆ ಪ್ರತಿಭಟನೆ ನಡೆದಿದ್ದು, ಜನರನ್ನು ಚದುರಿಸಲು ಪೊಲೀಸರು ಗುಂಡು ಹಾರಿಸಿದ್ದಾರೆ. ಈ ಗುಂಡು ಹಾರಾಟದಲ್ಲಿ ಮೂವರು ಸಾವನ್ನಪ್ಪಿದ್ದು, 25 ಮಂದಿಗೆ ತೀವ್ರ ಗಾಯಗಳಾಗಿವೆ. ಇಲ್ಲಿನ ಶೈಕ್ಷಣಿಕ ಸಂಸ್ಥೆಗಳಿಗೆ ಸರ್ಕಾರ ರಜೆ ಘೋಷಿಸಿದೆ.
ಪ್ರತಿಭಟನೆ ಕೈಬಿಡುವಂತೆ ಖಟ್ಟರ್ ಮನವಿ
ಪ್ರತಿಭಟನೆ ಕೊನೆಗೊಳಿಸುವಂತೆ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮನವಿ ಮಾಡಿದ್ದಾರೆ. ಜಾಟ್ ಸಮುದಾಯಕ್ಕೆ ಮೀಸಲಾತಿ ನೀಡುವುದಕ್ಕೆ ಸಂಬಂಧಿಸಿದಂತೆ ಕರಡು ಮಸೂದೆಯನ್ನು ಸರ್ಕಾರ ಶೀಘ್ರವೇ ತಯಾರಿಸಲಿದ್ದು ಇದಕ್ಕಾಗಿ ಸರ್ವ ಪಕ್ಷಗಳ ಅಭಿಪ್ರಾಯವನ್ನು ಸಂಗ್ರಹಿಸುತ್ತೇವೆ ಎಂದು ಖಟ್ಟರ್ ಹೇಳಿದ್ದಾರೆ. ಆದರೆ, ಇತರ ಹಿಂದುಳಿದ ವರ್ಗ (ಒಬಿಸಿ)ಯಲ್ಲಿ ಸೇರ್ಪಡೆ ಮಾಡಿ ಮೀಸಲಾತಿ ನೀಡುವವರೆಗೂ ತಾವು ಪ್ರತಿಭಟನೆ ನಿಲ್ಲಿಸಲಾರೆವು ಎಂದು ಜಾಟ್ ಸಮುದಾಯದ ಮುಖಂಡರು ಹೇಳಿದ್ದಾರೆ.
ಹಿಂಸಾಚಾರ ನಡೆಸದಂತೆ ಪ್ರತಿಭಟನಾಕಾರರಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ.
ಇಲ್ಲಿನ ಪೆಟ್ರೋಲ್ ಪಂಪ್, ಕಮ್ಯೂನಿಟಿ ಹಾಲ್ ಮತ್ತು ಅಂಗಡಿ ಮುಗ್ಗಟ್ಟುಗಳು ಬೆಂಕಿಗೆ ಆಹುತಿಯಾಗಿವೆ.
ದೆಹಲಿ ವಿವಿಯ ನಾರ್ತ್ ಕ್ಯಾಂಪಸ್ನಲ್ಲಿ ಜಾತ್ ಸಮುದಾಯದ ವಿದ್ಯಾರ್ಥಿಗಳಿಂದ ಪ್ರತಿಭಟನೆ.
ಬಿಜೆಪಿಯಲ್ಲಿರುವ ಜಾತ್ ಸಮುದಾಯದ ಸದಸ್ಯರು ಪ್ರತಿಭಟನಾಕಾರರಲ್ಲಿ ಮಾತುಕತೆ ನಡೆಸಿ ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಲು ಸಹಾಯ ಮಾಡಿ ಎಂದ ಬಿಜೆಪಿ ಅಧ್ಯಕ್ಷ ಅಮಿತ್ ಶಾ.