ಪ್ರಧಾನ ಸುದ್ದಿ

ನಾನು ನಾಸ್ತಿಕನಲ್ಲ, ನಾನೂ ದೇವಾಲಯಗಳಿಗೆ ಹೋಗುತ್ತೇನೆ: ಸಿಎಂ ಸಿದ್ದರಾಮಯ್ಯ

Lingaraj Badiger
ಟಿ.ನರಸೀಪುರ: ನಾನು ನಾಸ್ತಿಕ ಅಲ್ಲ. ನಾನೂ ದೇವಾಲಯಗಳಿಗೆ ಹೋಗುತ್ತೇನೆ. ಆದರೆ ನಾಸ್ತಿಕ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ.
ಇಂದು ತಿರುಮಕೂಡಲಿನಲ್ಲಿ ಆಯೋಜಿಸಿದ್ದ ಹತ್ತನೇ ಕುಂಭಮೇಳದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಸಿಎಂ, ನಾನು ನಾಸ್ತಿಕನಲ್ಲ, ನಾನೂ ದೇವಾಲಯಗಳಿಗೆ ಹೋಗುತ್ತೇನೆ. ಆದರೆ ಕಂಡಕಂಡ ದೇವಾಲಯಗಳಿಗೆ ಹೋಗುವುದಿಲ್ಲ. ದೇವರು ಒಬ್ಬ. ನಾಮ ಹಲವು ಎಂಬ ನಂಬಿಕೆ ಇದೆ ಎಂದರು.
ಅವಿಭಕ್ತ ಕುಟುಂಬದಿಂದ ಬಂದ ನನಗೆ ಗುರು ಹಿರಿಯರು, ಧರ್ಮ ದೇವರ ಬಗ್ಗೆ ಅತ್ಯಂತ ಗೌರವವಿದೆ. ಆದರೇ ಮೌಡ್ಯ ಹಾಗೂ ಕಂದಾಚಾರಗಳಿಗೆ ವಿರೋಧ ವ್ಯಕ್ತ ಪಡಿಸುತ್ತೇನೆ. ಹಿಮಾಲಯದಲ್ಲಿರುವ ದೇವರ ಬಗ್ಗೆ ನಂಬಿಕೆಯಿಲ್ಲ. ಸ್ಥಳೀಯವಾಗಿ ನಮ್ಮ ಮುಂದೆ ಕಾಣುವ ದೇವರ ಬಗ್ಗೆ ನಂಬಿಕೆಯಿದೆ. ಮನುಷ್ಯನನ್ನು ಮನುಷ್ಯರಾಗಿ ಕಂಡಾಗ ದೈವತ್ವ ಗೋಚರಿಸುತ್ತದೆ. ವಿನಾಕಾರಣ ಕಾಣದ ದೇವರ ಬಗ್ಗೆ ಹೆಚ್ಚಿಗೆ ಮಹತ್ವ ಕೊಡಲಾರೆ ಎಂದರು.
ಸಹಜವಾಗಿ ಮಾನವರು ಒಳಗೊಂದು, ಹೊರಗೊಂದು ರೀತಿಯ ಗುಣಗಳನ್ನು ಹೊಂದಿರುತ್ತಾರೆ. ಇಂತಹ ಪ್ರವೃತ್ತಿ ಒಳ್ಳೆಯದಲ್ಲ. ಬಸವಣ್ಣನ ನಾಣ್ನುಡಿಯಂತೆ ಇವನಾರವ ಇವನಾರವ ಎನ್ನದೆ ಇವನಮ್ಮವ ಇವನಮ್ಮವ ಎಂದೆನಿಸಯ್ಯ… ಎಂಬಂತೆ ಎಲ್ಲರನ್ನು ಒಂದೇ ಭಾವನೆಯಿಂದ ಕಾಣುವುದು ಸೂಕ್ತ. ಸದ್ಗುಣಗಳನ್ನು ಹೊಂದಿದ ವ್ಯಕ್ತಿಯೇ ದೇವರಿಗೆ ಸಮಾನ. ಆದ್ದರಿಂದ ದೇವರನ್ನು ಮನುಷ್ಯನಲ್ಲಿ ಕಾಣುವುದು ಸೂಕ್ತ ಎಂದು ಸಿಎಂ ಹೇಳಿದರು.
ಇದೇ ವೇಳೆ ಕುಂಭಮೇಳಕ್ಕೆ 50 ಕೋಟಿ ರುಪಾಯಿ ಬಿಡುಗಡೆ ಮಾಡಿದ್ದು, ಈ ಹಣವನ್ನು 3 ವರ್ಷದೊಳಗೆ ಉಪಯೋಗಿಸಿಕೊಂಡು ಎಲ್ಲಾ ರೀತಿಯ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿದ್ದೇನೆ. ಮುಂದಿನ ಕುಂಭ ಮೇಳಕ್ಕೂ ಎಲ್ಲಾ ರೀತಿಯ ಸೌಲಭ್ಯ ಒದಗಿಸುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದರು.
ಸಮಾರಂಭದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ನಿರ್ಮಲಾನಂದನಾಥ ಸ್ವಾಮೀಜಿ, ಸಚಿವರಾದ ಮಹದೇವಪ್ಪ, ಮಹದೇವಪ್ರಸಾದ್, ಸಂಸದ ಧೃವನಾರಾಯಣ್, ಸೇರಿದಂತೆ ಇನ್ನಿತರ ಗಣ್ಯರು, ಮಠಾಧೀಶರು ಉಪಸ್ಥಿತರಿದ್ದರು.
SCROLL FOR NEXT