ಮೈಸೂರು: ಜನವರಿ 5ರಿಂದ ಜಾರಿಗೆ ಬರುವಂತೆ ನಂದಿನ ಹಾಲಿನ ದರವನ್ನು ಪ್ರತಿ ಲೀಟರ್ಗೆ ನಾಲ್ಕು ರುಪಾಯಿ ಹೆಚ್ಚಿಸಿರುವ ಸರ್ಕಾರದ ಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಸಮರ್ಥಿಸಿಕೊಂಡಿದ್ದಾರೆ.
ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಪಶು ಆಹಾರ ದರದಲ್ಲಿನ ಹೆಚ್ಚಳ ಹಾಗೂ ನೌಕರರ ವೇತನ ಹೆಚ್ಚಳದ ಹೊರೆಯನ್ನು ತಗ್ಗಿಸಿಕೊಳ್ಳುವುದಕ್ಕಾಗಿ ಕೆಎಂಎಫ್ ಕಳೆದ ಎರಡು ವರ್ಷಗಳಿಂದ ಹಾಲಿನ ದರ ಹೆಚ್ಚಳಕ್ಕೆ ಬೇಡಿಕೆ ಇಟ್ಟಿತ್ತು. ಈ ಹಿನ್ನೆಲೆಯಲ್ಲಿ ನಾಲ್ಕು ರುಪಾಯಿ ಹೆಚ್ಚಿಸಲಾಗಿದೆ ಎಂದರು.
ಈಗ ಮಾಡಿರುವ ನಾಲ್ಕು ರುಪಾಯಿ ದರ ಹೆಚ್ಚಳದಲ್ಲಿ ಮೂರು ರುಪಾಯಿ ರೈತರಿಗೆ ಹಾಗೂ ಉಳಿದ 1 ರುಪಾಯಿಯನ್ನು ನಿರ್ವಹಣ ವೆಚ್ಚಕ್ಕೆ ಬಳಸಿಕೊಳ್ಳಲಾಗುವುದು ಎಂದು ಸಿಎಂ ಹೇಳಿದರು.
ಹಾಲಿನ ದರ ಏರಿಕೆಯ ಹಿಂದೆ ಯಾವುದೇ ರಾಜಕೀಯ ಹುನ್ನಾರ ಇಲ್ಲ. ಮುಂದಿನ ಜಿಲ್ಲಾ ಪಂಚಾಯತ್ ಚುನಾವಣೆ ಗಮನದಲ್ಲಿಟ್ಟುಕೊಂಡ ಹಾಲಿನ ದರ ಹೆಚ್ಚಳ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ ಸಿಎಂ, ಈ ಹೆಚ್ಚಳದಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.